ಮಳೆ ಅಬ್ಬರಕ್ಕೆ ತ್ರಿವೇಣಿ ಸಂಗಮ ಜಲಾವೃತ: ಭತ್ತದ ಕೃಷಿ ಚಟುವಟಿಕೆ ಶುರು
ಮಡಿಕೇರಿ, ಜೂನ್ 18: ಕೊಡಗಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಭಾಗಮಂಡಲ ಮತ್ತು ನಾಪೋಕ್ಲುಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಗೊಂಡಿದೆ.
ಕೊಡಗು ಜಿಲ್ಲಾಡಳಿತವು ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಹುತೇಕ ಗ್ರಾಮಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಮಳೆ ಸುರಿಯುತ್ತಿರುವ ಕಾರಣ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಾ ಹೋಗುತ್ತಿದೆ.
ಇನ್ನು ಐದು ದಿನ ಧಾರಾಕಾರ ಮಳೆ
ಮೃಗಶಿರ ಮಳೆ ಇದೇ ತಿಂಗಳು 21ಕ್ಕೆ ಕೊನೆಯಾಗುತ್ತಿರುವುದರಿಂದ ಕೊನೆಯ ಪಾದದಲ್ಲಿ ಭಾರೀ ಮಳೆ ಸುರಿಸುತ್ತಿದ್ದು, ಇನ್ನು ಐದು ದಿನಗಳ ಹೆಚ್ಚಿನ ಮಳೆಯಾಗುವುದಾಗಿ ಹೇಳಲಾಗುತ್ತಿದೆ. ಈಗಾಗಲೇ ಮಳೆ, ಚಳಿಯಿಂದ ತತ್ತರಿಸಿದ ಜನ ತೋಟ, ಗದ್ದೆಗೆ ತೆರಳಲು ಹಿಂದೇಟು ಹಾಕಿ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಕೊರೊನಾ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಜನ ಮಳೆ ಅಬ್ಬರಿಸಿ ಪ್ರವಾಹ ಏರ್ಪಟ್ಟರೆ ಜೀವನ ಹೇಗೆಂಬ ಭಯದಲ್ಲಿ ದಿನವನ್ನು ಕಳೆಯುತ್ತಿದ್ದಾರೆ.
ಮುಂಗಾರು ಆರಂಭಕ್ಕೆ ಮುನ್ನುಡಿ ಬರೆದ ಮೃಗಶಿರ ಮಳೆ
ಗರಿಗೆದರಿದ ಭತ್ತದ ಕೃಷಿ ಚಟುವಟಿಕೆ
ಇದೆಲ್ಲದರ ನಡುವೆಯೂ ಮಳೆಗಾಲದ ನೀರನ್ನೇ ನಂಬಿ ಭತ್ತ ಬೆಳೆಯುವ ಇಲ್ಲಿನ ಬೆಳೆಗಾರರು, ಇದೀಗ ಭತ್ತದ ಕೃಷಿ ಚಟುವಟಿಕೆಯಲ್ಲಿ ಕೊಂಡಿರುವ ದೃಶ್ಯವೂ ಕಾಣಿಸುತ್ತಿದೆ. ಮೊದಲಿಗೆ ಹೋಲಿಸಿದರೆ ಭತ್ತದ ಕೃಷಿ ಸಂಪೂರ್ಣ ಇಳಿಮುಖವಾಗಿದ್ದರೂ, ಒಂದಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕಾಣಿಸುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಮಳೆಯ ಅಭಾವ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಭತ್ತದ ಕೃಷಿಯಿಂದ ದೂರವಾಗಿದ್ದ ರೈತರು ಭತ್ತದ ಗದ್ದೆಯನ್ನು ತೋಟವನ್ನಾಗಿ ಮಾರ್ಪಡಿಸಿದ್ದರು. ಮತ್ತೆ ಕೆಲವರು ಭತ್ತದ ಕೃಷಿ ಮಾಡದೆ ಗದ್ದೆಯನ್ನು ಪಾಳು ಬಿಟ್ಟಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಮಳೆಯಾಗುತ್ತಿದ್ದು, ಭತ್ತದ ಕೃಷಿ ಮಾಡಿದರೂ ಉತ್ತಮ ಇಳುವರಿ ಪಡೆಯಲಾಗದೆ ನಷ್ಟ ಅನುಭವಿಸುತ್ತಿದ್ದಾರೆ.
ಸಸಿ ಮಡಿ ಸಿದ್ಧತೆಯಲ್ಲಿ ಬೆಳೆಗಾರರು
ಕೊಡಗಿನವರು ಭತ್ತವನ್ನು ಧಾನ್ಯಲಕ್ಷ್ಮಿಯಾಗಿ ಪೂಜಿಸುವುದರಿಂದ ಒಂದಷ್ಟು ಭೂಮಿಯನ್ನು ಉಳಿಸಿಕೊಂಡು ನಷ್ಟವಾದರೂ ಕೃಷಿ ಮಾಡುತ್ತಿರುವುದು ಕೂಡ ಕಂಡುಬರುತ್ತಿದೆ. ಹಿಂದೆ ಕೊಡಗಿನ ವಾತಾವರಣಕ್ಕೆ ಹೊಂದುವಂತಹ ನಾಟಿ ತಳಿಗಳನ್ನು ಬೆಳೆಯುತ್ತಿದ್ದರಾದರೂ ಈಗ ಸುಧಾರಿತ ಹೆಚ್ಚು ಇಳುವರಿ ದೊರೆಯುವ ತಳಿಗಳನ್ನು ಬೆಳೆಯುತ್ತಿರುವುದು ಕಂಡು ಬರುತ್ತಿದೆ. ಇದೀಗ ಭತ್ತ ಬೆಳೆಯುವ ಬೆಳೆಗಾರರು ಭತ್ತ ಒಟ್ಟಲು ಪಾತಿ (ಸಸಿಮಡಿ) ಮಾಡುವ ಕಾರ್ಯಕ್ಕೆ ಕೃಷಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
30,500 ಹೆಕ್ಟೇರ್ನಲ್ಲಿ ಭತ್ತ ಬೆಳೆಯುವ ಗುರಿ
ಕೃಷಿ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಈ ಬಾರಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಹೊಂದಲಾಗಿದೆ. ಕಳೆದ ಬಾರಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿತ್ತಾದರೂ, 23,737 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. ಇನ್ನೊಂದೆಡೆ ಭತ್ತದ ಕೃಷಿ ಮಾಡುವ ಬೆಳೆಗಾರರಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ.ಷೇಕ್ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ರೈತರಿಗೆ ಕೃಷಿ ಇಲಾಖೆಯ ಸಲಹೆಗಳು
"ರೈತರು ಸಸಿಮಡಿ ಮಾಡುವ ಸಂದರ್ಭದಲ್ಲಿ ಬಿತ್ತನೆಗೆ ಮೊದಲು ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಉಪಯೋಗಿಸುವಂತೆ ಹಾಗೂ ಪ್ರತಿ ಕೆ.ಜಿ ಭತ್ತ ಬಿತ್ತನೆ ಬೀಜಕ್ಕೆ 4 ಗ್ರಾಂ. ಬೇವಿಸ್ಟಿನ್(ಕಾರ್ಬನ್ಡೈಜಿಂ) ಶಿಲೀಂಧ್ರನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವಂತೆಯೂ ಹಾಗೂ ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ನಂತರ ಮೊಳಕೆಗೆ ಇಡುವ ಮೊದಲು ಬೀಜೋಪಚಾರ ಮಾಡುವುದು ಒಳಿತು," ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಕಿ ರೋಗ ತಡೆಗೆ ಏನು ಮಾಡಬೇಕು ?
"ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತೀ ಒಂದು ಕೆ.ಜಿ .ಬಿತ್ತನೆ ಬೀಜಕ್ಕೆ 4 ಗ್ರಾಂ.ನಂತೆ ಕಾರ್ಬನ್ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು ಮೊಳಕೆ ಬಂದ ನಂತರ ಸಸಿಮಡಿಯಲ್ಲಿ ಬಿತ್ತನೆ ಮಾಡುವಂತೆ," ತಿಳಿಸಿದ್ದಾರೆ.
Recommended Video