ಮತ್ತೆ ಪ್ರವಾಹದ ಭೀತಿಯಲ್ಲಿ ಕಾಲ ಕಳೆಯುತ್ತಿರುವ ಕೊಡಗಿನ ಜನರು
ಮಡಿಕೇರಿ, ಆಗಸ್ಟ್ 8 : ಕೊಡಗು ಜಿಲ್ಲೆಯಲ್ಲಿನ ಜನತೆಗೆ ಕಳೆದ ವರ್ಷದ ಪ್ರವಾಹ ಮರುಕಳಿಸಿದಂತೆ ಭಾಸವಾಗುತ್ತಿದೆ. ಕಾರಣ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಚಾರ ಹಾಗೂ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 292.40 ಮಿ.ಮೀ. ದಾಖಲೆ ಮಳೆಯಾಗಿದೆ.
4 ಅಡಿ ನೀರು ಬಂದರೆ ಕಬಿನಿ ಭರ್ತಿ : ಹೇಗಿದೆ ಜಲಾಶಯಗಳ ಪರಿಸ್ಥಿತಿ
ಇದುವರೆಗೂ ಸರಾಸರಿ 145.58 ಮಿ.ಮೀ. ದಾಖಲೆ ಮಳೆಯಾಗಿದೆ. ಇಂದು ಸಹ ಜಿಲ್ಲೆಯಾದ್ಯಂತ ಬಿಡುವು ನೀಡದೆ ಮಳೆ ಸುರಿಯುತ್ತಿದ್ದು, ಭಾಗಮಂಡಲ-ಮಡಿಕೇರಿ ಮತ್ತು ಭಾಗಮಂಡಲ-ಅಯ್ಯಂಗೇರಿ ರಸ್ತೆ ಭರ್ತಿಯಾಗಿ, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.
ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕರಡಿಗೋಡು ಗ್ರಾಮದಲ್ಲಿನ ಜನವಸತಿ ಪ್ರದೇಶಕ್ಕೆ ಮಳೆ ನೀರು ಹರಿದಿದೆ. ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಎಮ್ಮೆತ್ತಾಳು ಸೇತುವೆ ಬಳಿ ಸಂಪರ್ಕ ರಸ್ತೆಯಲ್ಲಿ ನೀರಿನ ಹರಿವು ಭರ್ತಿಯಾಗಿದೆ.
ಹೊದ್ದೂರು-ನಾಪೋಕ್ಲು, ಮೂರ್ನಾಡು-ಬಲಮುರಿ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಭ್ಯತ್ಮಂಗಲ ಗ್ರಾಮದ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸಿದ್ದಾಪುರ ಬಳಿಯ ನೆಲ್ಯಹುದಿಕೇರಿ ಗ್ರಾಮದ 8 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ: ಕೇಂದ್ರದಿಂದ ಅಗತ್ಯ ನೆರವಿನ ಭರವಸೆ
ಕಾವೇರಿ ನದಿ ಮತ್ತು ಕೊಡಗಿನ ದಕ್ಷಿಣ ಭಾಗದ ಲಕ್ಷ್ಮಣ ತೀರ್ಥ ತುಂಬಿ ಹರಿಯುತ್ತಿದ್ದು, ಗದ್ದೆಗಳು ಜಲಾವೃತವಾಗಿವೆ. ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ವರುಣನ ರೌದ್ರ ಅವತಾರಕ್ಕೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗಿದ್ದ ಪರಿಣಾಮ ಅವರನ್ನು ಪಕ್ಕದ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಹಾಗೆಯೇ ಎನ್ ಡಿಆರ್ ಎಫ್ ರಕ್ಷಣಾ ತಂಡ ಹಲವರನ್ನು ರಕ್ಷಿಸಲು ಸಹ ಮುಂದಾಗಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಪ್ರದೇಶಕ್ಕೆ ನೀರು ನುಗ್ಗಿದ್ದು, ಗ್ರಾಮದಲ್ಲಿರುವ 130 ಮನೆಗಳ ಪೈಕಿ 13 ಮನೆಗಳಿಗೆ ನೀರು ನುಗ್ಗಿದ್ದು, ಇವರನ್ನು ಹತ್ತಿರದ ಕರಡಿಗೋಡು ಶಾಲೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ಇದು ಕೇವಲ ಈ ವರ್ಷ ಮಾತ್ರವಲ್ಲ ಪ್ರತಿ ವರ್ಷಕೂಡ ಇದೇ ಪರಿಸ್ಥಿತಿ ಅಧಿಕಾರಿಗಳು ಭೇಟಿ ನೀಡುತ್ತಾರೆಯೇ ಹೊರತು ಯಾವುದೇ ಶಾಶ್ವತ ಪರಿಹಾರ ನಡೆಯುತ್ತಿಲ್ಲ ಎಂದು ಇಲ್ಲಿನ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ತೆರೆದಿದೆ. 19 ಕುಟುಂಬಗಳ ಪೈಕಿ 70 ಮಂದಿ ಪರಿಹಾರ ಕೇಂದ್ರಗಳ ಆಶ್ರಯ ಪಡೆದಿದ್ದಾರೆ.
ಪರಿಹಾರ ಕೇಂದ್ರದ ನಿರಾಶ್ರಿತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಎನ್ ಡಿ ಆರ್ ಎಫ್ ತಂಡ ಬೀಡು ಬಿಟ್ಟಿದ್ದು, ಜನರ ರಕ್ಷಣೆಗೆ ಧಾವಿಸುತ್ತಿದ್ದಾರೆ.
ಮಳೆಯ ತೀವ್ರತೆಯಿಂದಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕುಸಿಯವ ಆತಂಕ ಎದುರಾಗಿದೆ. ಕಳೆದ ಭಾರಿ ಕುಸಿದ ಜಾಗದಲ್ಲೆ ಮಂಗಳೂರು ರಸ್ತೆ ಮತ್ತೆ ಕುಸಿಯುತ್ತಿದೆ. ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಜಿಲ್ಲಾದ್ಯಂತ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ಇನ್ನೆರಡು ದಿನಗಳು ರಜೆ ವಿಸ್ತರಿಸಿ ಆದೇಶಿಸಿದೆ.
ಹಲವೆಡೆ ಭೂಕುಸಿತ ಉಂಟಾಗಿದ್ದು, ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗಾಳಿ- ಮಳೆಯಿಂದ ಭೂಕುಸಿತ ಉಂಟಾಗಿ, ಮನೆಗಳಿಗೆ ಹಾನಿಯಾಗಿದೆ. ನದಿ, ತೋಡುಗಳು ತುಂಬಿ ಹರಿಯುತ್ತಿದ್ದು, ಸಮೀಪದ ಮನೆಗಳು ಜಲಾವೃತಗೊಂಡಿವೆ. ಹಾಗೆಯೇ ಅಪಾಯದ ಅಂಚಿನಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 145.58 ಮಿ.ಮೀ. ಕಳೆದ ವರ್ಷ ಇದೇ ದಿನ 13.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1304.40 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2647.96 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 188.35 ಮಿ.ಮೀ. ಕಳೆದ ವರ್ಷ ಇದೇ ದಿನ 11.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1744.56 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3724.28 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 142.50 ಮಿ.ಮೀ. ಕಳೆದ ವರ್ಷ ಇದೇ ದಿನ 9.63 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1355.06 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2107.24 ಮಿ.ಮೀ. ಮಳೆಯಾಗಿತ್ತು.