ಕೊಡಗಿನಲ್ಲಿ ಬಿಡುವು ನೀಡದ ಮಳೆ, ಮುಂದುವರಿದ ಪ್ರವಾಹ
ಮಡಿಕೇರಿ, ಜೂನ್ 14: ವಾರದಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಬಾರಿ ಮೃಗಶಿರಾ ಮಳೆಯ ಅಬ್ಬರಕ್ಕೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮ ಜಲಮಯವಾಗಿದ್ದು, ಶ್ರೀಭಗಂಡೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ.
ಮಳೆಯಿಂದಾಗಿ ಭಾಗಮಂಡಲ ನಾಪೋಕ್ಲು, ಭಾಗಮಂಡಲ ಕರಿಕೆ, ಭಾಗಮಂಡಲ ತಲಕಾವೇರಿ, ಭಾಗಮಂಡಲ ಮಡಿಕೇರಿ ಹೀಗೆ ಎಲ್ಲ ಕಡೆಗೂ ಸಂಚಾರ ಸ್ಥಗಿತವಾಗಿದ್ದು, ಪ್ರವಾಹದ ಹಿನ್ನಲೆಯಲ್ಲಿ ದೋಣಿ ವ್ಯವಸ್ಥೆ ಮಾಡಲಾಗಿದ್ದು, ತುರ್ತು ಸೇವೆಗಾಗಿ ಅಗ್ನಿಶಾಮಕ ದಳ, ಗೃಹರಕ್ಷಕದಳ ಸೇರಿದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
ತೀರ್ಥಹಳ್ಳಿ : ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಡಿಸಿ ಭೇಟಿ
ಇನ್ನು ಜಿಲ್ಲೆಯ ಪ್ರವಾಹ ಸ್ಥಳವಾದ ಸಿದ್ದಾಪುರ, ಕರಡಿಗೋಡು, ಗುಹ್ಯ ವ್ಯಾಪ್ತಿಯ ನದಿ ಪಾತ್ರದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಭಯ ಸೃಷ್ಠಿಯಾಗಿದೆ. ಈಗಾಗಲೇ ಶಾಲಾ- ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ.
ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಭಾಗಮಂಡಲದಲ್ಲಿ 195 ಮಿ.ಮೀ. (19 ಸೆಂ.ಮೀ) ಮಳೆ ದಾಖಲಾಗಿದೆ. ಸಂಪಾಜೆ 156 ಮಿ.ಮೀ, ನಾಪೋಕ್ಲು 131 ಮಿ.ಮೀ, ಮಡಿಕೇರಿಯಲ್ಲಿ 111.80 ಮಿ.ಮೀ. (11 ಸೆಂ.ಮೀ) ದಾಖಲೆಯ ಮಳೆಯಾಗಿದೆ.
ಹುದಿಕೇರಿಯಲ್ಲಿ 98.50 ಮಿ.ಮೀ., ವಿರಾಜಪೇಟೆಯಲ್ಲಿ 94.20 ಮಿ.ಮೀ., ಶ್ರೀಮಂಗಲದಲ್ಲಿ 88.40 ಮಿ.ಮೀ, ಪೊನ್ನಂಪೇಟೆಯಲ್ಲಿ 80.20 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯ ಅನೇಕ ಕಡೆಗಳಲ್ಲಿ ಸಾರಿಗೆ ಸಂಚಾರ ಅಸ್ತವ್ಯಸ್ತವಾಗಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 85.06 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 1034.72 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 446.64 ಮಿ.ಮೀ ಮಳೆಯಾಗಿತ್ತು.