ಕೊಡಗು : ಮಳೆ, ಗುಡ್ಡ ಕುಸಿತ 5 ಜನರು ಸಾವು, ರಕ್ಷಣೆಗೆ ಬಂದ ಸೇನಾಪಡೆ
ಕೊಡಗು, ಆಗಸ್ಟ್ 17 : ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ 24 ಗಂಟೆಯಲ್ಲಿ 5 ಜನರು ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ಸೇನಾಪಡೆ ಆಗಮಿಸಿದೆ.
ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕಳೆದ 24 ಗಂಟೆಗಳಲ್ಲಿ ಕೊಡಗಿನಲ್ಲಿ 5 ಜನರು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಚುರುಕಾಗಲಿದ್ದು, ಸೇನಾಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಲಿದೆ.
ಕೊಡಗಿಗೆ ನೆರವಾಗಿ ಎಂದು ದರ್ಶನ್, ಕಿಚ್ಚ ಸುದೀಪ ಮನವಿ
ಸೇನಾ ಸಿಬ್ಬಂದಿ ನಿಯೋಜನೆ : ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಗೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ.
ಕೊಡಗಿನಲ್ಲಿ ಮಳೆಯ ರೌದ್ರನರ್ತನ : ಕುಶಾಲನಗರ ಜಲಾವೃತ
ರಕ್ಷಣಾ ಸಚಿವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು ಭೂಸೇನೆಯ ಸಿಬ್ಬಂದಿ ಹಾಗೂ ವಾಯುಪಡೆಯ ಹೆಲಿಕಾಪ್ಟರ್ ಗಳ ಮೂಲಕ ಈಗಾಗಲೇ ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಜಿಲ್ಲೆಯ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಲು ವೈಮಾನಿಕ ಸಮೀಕ್ಷೆ ನಡೆಸಲು ವಾಯುಪಡೆಯ ಹೆಲಿಕಾಪ್ಟರ್ ಒದಗಿಸುವಂತೆಯೂ ಮನವಿ ಮಾಡಿದರು.