ಮಡಿಕೇರಿ ರೆಸಾರ್ಟ್ ಸೇರಿದ ಕುಮಾರಸ್ವಾಮಿ, ಬಿಗಿ ಭದ್ರತೆ
ಮಡಿಕೇರಿ, ಮೇ 10 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು ಮಡಿಕೇರಿ ರೆಸಾರ್ಟ್ಗೆ ತೆರಳಿದ್ದಾರೆ. ಸೋಮವಾರ ಅವರು ಕುಂದಗೋಳದಲ್ಲಿ ಪ್ರಚಾರವನ್ನು ನಡೆಸಲಿದ್ದಾರೆ.
ಶುಕ್ರವಾರ ರಾತ್ರಿ 7.45ರ ಸುಮಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಯ ಇಬ್ಬನಿ ರೆಸಾರ್ಟ್ಗೆ ಆಗಮಿಸಿದರು. ರೆಸಾರ್ಟ್ ಬಳಿ ಮಾಧ್ಯಮಗಳನ್ನು ನೋಡಿ ಕೋಪ ಮಾಡಿಕೊಂಡು, ಪ್ರತಿಕ್ರಿಯೆ ನೀಡದೆ ತೆರಳಿದರು.
5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ
ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಮತ್ತು ಭಾನುವಾರ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕುಮಾರಸ್ವಾಮಿ ಅವರ ಜೊತೆ ಇರಲಿದ್ದಾರೆ.
ಮಡಿಕೇರಿ-ಮೈಸೂರು ರಸ್ತೆಯಲ್ಲಿರುವ ಇಬ್ಬನಿ ರೆಸಾರ್ಟ್ ಮಡಿಕೇರಿಯ ಐಷಾರಾಮಿ ರೆಸಾರ್ಟ್ಗಳಲ್ಲಿ ಒಂದಾಗಿದೆ. ಕಾಫಿ ತೋಟದ ನಡುವೆ ಇರುವ ರೆಸಾರ್ಟ್ ಸುತ್ತಲೂ ಹಚ್ಚ ಹಸಿರನ ವಾತಾವರಣವಿದೆ. ಪ್ರತಿ ರೂಂಗಳಿಗೂ ಪ್ರತ್ಯೇಕ ಈಜುಕೊಳ ಸೇರಿದಂತೆ ಹಲವು ವ್ಯವಸ್ಥೆಗಳಿವೆ.
ಮೇ 13, 14ರಂದು ಉಪ ಚುನಾವಣೆಗೆ ಕುಮಾರಸ್ವಾಮಿ ಪ್ರಚಾರ
ರೆಸಾರ್ಟ್ನಲ್ಲಿ ಒಟ್ಟು 6 ರೂಂಗಳನ್ನು ಭಾನುವಾರದ ತನಕ ಬುಕ್ ಮಾಡಲಾಗಿದೆ. ಪ್ರತಿ ರೂಂ ಬಾಡಿಗೆ ಸುಮಾರು 28 ಸಾವಿರ ರೂ.ನಿಂದ ಆರಂಭವಾಗುತ್ತದೆ. ಕೊಡಗಿನ ವಿಶಿಷ್ಟ ಆಹಾರ ಪದಾರ್ಥಗಳು ರೆಸಾರ್ಟ್ನಲ್ಲಿ ದೊರೆಯಲಿವೆ.
ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯದ ಹಿನ್ನಲೆಯಲ್ಲಿ ರೆಸಾರ್ಟ್ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿದೆ. ರೆಸಾರ್ಟ್ ಸಿಬ್ಬಂದಿ ಮೊಬೈಲ್ನಲ್ಲಿ ಫೋಟೋ, ವಿಡಿಯೋ ತೆಗೆಯದಂತೆ ಸೂಚನೆ ನೀಡಲಾಗಿದೆ.
ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?
ಕಳೆದ ವಾರ ಇದೇ ರೆಸಾರ್ಟ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಸಿದ್ದರಾಮಯ್ಯ ವಾಪಸ್ ಹೋಗುವಾಗ ರೆಸಾರ್ಟ್ನಲ್ಲಿ ಸಸಿಯೊಂದನ್ನು ನೆಟ್ಟಿದ್ದು, ಅದರ ಫೋಟೋವನ್ನು ರೆಸಾರ್ಟ್ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಭಾನುವಾರದ ತನಕ ಎಚ್.ಡಿ.ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದು, ಮೇ 13ರ ಸೋಮವಾರ ಕುಂದಗೋಳ, ಮೇ 14ರ ಮಂಗಳವಾರ ಚಿಂಚೋಳಿಯಲ್ಲಿ ಉಪ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ. ಮೇ 19ರಂದು ಉಪ ಚುನಾವಣೆ ನಡೆಯಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಏಪ್ರಿಲ್ 28ರಿಂದ 5 ದಿನಗಳ ಕಾಲ ಉಡುಪಿಯ ಕಾಪು ಸಮೀಪದ ಆಯುರ್ವೇದ ಚಿಕಿತ್ಸಾಲಯದಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಈಗ ಅವರು ಪುನಃ ವಿಶ್ರಾಂತಿಗಾಗಿ ತೆರಳಿದ್ದಾರೆ.