ಕೊಡಗಿನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಬಹಿರಂಗ!
ಮಡಿಕೇರಿ, ಮೇ27: "ಜಿಲ್ಲೆಯ ಕಾಂಗ್ರೆಸ್ ಪಕ್ಷ ಬಡವ, ದೀನ, ದಲಿತರ ಪರ ಒಲವು ಹೊಂದಿಲ್ಲ. ಪಕ್ಷದ ಪ್ರಮುಖರು ಜಾತಿ ರಾಜಕೀಯದ ನೆಲೆಗಟ್ಟಿನಲ್ಲಿ ಪಕ್ಷವನ್ನು ಮುನ್ನೆಡೆಸುವ ಪ್ರಯತ್ನ ಮಾಡುತ್ತಿರುವುದು ಹೀನಾಯ ಸೋಲಿಗೆ ಕಾರಣವಾಗುತ್ತಿದೆ" ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್. ಬಿ. ಕಾಟಿ ಮುರುಘ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ ನಾಯಕರೆನಿಸಿಕೊಂಡವರು ದಲಿತರು ಮತ್ತು ಓಬಿಸಿ ವರ್ಗದವರನ್ನು ತೀವ್ರವಾಗಿ ಕಡೆಗಣಿಸುತ್ತಿದ್ದಾರೆ. ಸಮಾಜದಲ್ಲಿ ಕೆಳಸ್ಥಾನದಲ್ಲಿ ಗುರುತಿಸಿಕೊಂಡವರನ್ನು ಪರಿಗಣನೆಗೆ ತೆಗೆದು ಮುನ್ನೆಲೆಗೆ ತರಬೇಕಾದ ನಾಯಕರುಗಳು, ಜಾತಿ ರಾಜಕೀಯವನ್ನು ಬೆರೆಸಿ ದಲಿತರನ್ನು ತುಳಿಯುವ ಪ್ರಯತ್ನ ಮುಂದುವರಿಸಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಮನ್ನಣೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ಕಳೆದ 15 ವರ್ಷಗಳಿಂದ ನಿರಂತರವಾಗಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಿದೆ" ಎಂದರು.
"ಪಕ್ಷದ ನಾಯಕರೆನಿಸಿಕೊಂಡವರಿಗೆ ಪ್ರತಿಯೊಂದು ಸಮುದಾಯದವರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ನಾಯಕತ್ವದ ಗುಣಗಳು ಇಲ್ಲದೇ ಇರುವುದು ಮತ್ತು ಸಮಾನತೆಯ ಚಿಂತನೆಗೆ ಒಳಪಡದೇ ಇರುವುದು ಪಕ್ಷ ಜಿಲ್ಲೆಯಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳಲು ಕಾರಣವಾಗಿದೆ" ಎಂದು ಆರೋಪಿಸಿದರು.
"ಒಬಿಸಿ ಮಹಿಳೆಯರಿಗೆ ಸರಿಯಾದ ಸ್ಥಾನಮಾನಗಳನ್ನು ನೀಡದೇ ಕಡೆಗಣನೆ ಮಾಡಲಾಗುತ್ತಿದೆ. ಪಕ್ಷದ ನಿಷ್ಠಾವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತರಾಗಿ ಕಳೆದ 20 ವರ್ಷಗಳಿಂದ ನಿರಂತರವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದು, ಅಂತಹವರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಮಾಧ್ಯಮಗಳಲ್ಲಿ ಮಹಿಳಾ ಕಾರ್ಯಕರ್ತರ ಬಗ್ಗೆ ಹೇಳಿಕೆಗಳನ್ನು ನೀಡುವ ಮೂಲಕ ಅಗೌರವ ತೋರುತ್ತಿದ್ದಾರೆ" ಎಂದು ದೂರಿದರು.
"ಜಿಲ್ಲೆಯಲ್ಲಿ ಪ್ರಚಾರದಲ್ಲಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ನಡೆಯನ್ನು ಸಹಿಸದ ಜಿಲ್ಲೆಯ ನಾಯಕರುಗಳು ಕಡೆಗಣಿಸುವ ಮೂಲಕ ಅವರು ಪಕ್ಷದ ಮುಖ್ಯವಾಹಿನಿಗೆ ಬಾರದಂತೆ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದ ಹಿನ್ನೆಡೆಗೆ ಕಾರಣವಾಗುತ್ತಿದೆ" ಎಂದು ಹೇಳಿದರು.
ನಾಯಕರುಗಳು ಮುಂದಾಗಬೇಕು; "ಪಕ್ಷದಲ್ಲಿ ಪ್ರಾಮಾಣಿಕವಾಗಿ ಗುರುತಿಸಿಕೊಂಡ ನಾಲ್ವರನ್ನು ಅಮಾನತು ಮಾಡಲು ಆದೇಶ ನೀಡಿರುವುದು ಗೋಣಿಕೊಪ್ಪ ನಗರ ಮತ್ತು ಬ್ಲಾಕ್ ಅಧ್ಯಕ್ಷರ ಪಕ್ಷ ಸಂಘಟನೆಯ ವೈಫಲ್ಯತೆಗೆ ಸಾಕ್ಷಿಯಾಗಿದೆ. ಇಂತಹ ಘಟನೆಗಳ ಬಗ್ಗೆ ಪ್ರಶ್ನಿಸುವ ಮೂಲಕ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನಾಯಕರುಗಳು ಮುಂದಾಗಬೇಕೆಂದು" ಎಂದು ಮನವಿ ಮಾಡಿದರು.