ಚಿತ್ರಗಳು : ಹಾರಂಗಿಯಿಂದ ಹಾಲ್ನೊರೆಯುಕ್ಕಿಸುತ್ತಾ ಹರಿದ ನೀರು
ಮಡಿಕೇರಿ, ಜುಲೈ 08 : ಕೊಡಗಿನಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯದ 4 ಗೇಟ್ಗಳ ಮೂಲಕ ನೀರನ್ನು ಹೊರ ಬಿಡಲಾಗಿದೆ. ಹಾಲ್ನೊರೆಯುಕ್ಕಿಸುತ್ತಾ ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿರುವ ಸುಂದರ ದೃಶ್ಯ ಜನರನ್ನು ವಿಸ್ಮಯಗೊಳಿಸುತ್ತಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಹಾರಂಗಿ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿ, ಶನಿವಾರ ಸಂಜೆಯ ವೇಳೆಗೆ ಜಲಾಶಯ ಭರ್ತಿಯಾಗಿದ್ದು, 24,470 ಕ್ಯುಸೆಕ್ ಒಳ ಹರಿವು ಇತ್ತು. ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ನಾಲ್ಕು ಗೇಟ್ಗಳನ್ನು ತೆರೆಯಲಾಯಿತು.
ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಆರ್ಭಟ, ಕೆಲವೆಡೆ ಪ್ರವಾಹ
ಶನಿವಾರ ಬೆಳಗ್ಗೆ ಜಲಾಶಯದ ಒಳ ಹರಿವಿನ ಪ್ರಮಾಣ ಕಡಿಮೆ ಆಗಿತ್ತು. ಸಂಜೆ ಒಳ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ಗೇಟ್ಗಳ ಮೂಲಕ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಯಿತು. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಜಲಾಶಯದ ಸಿಬ್ಬಂದಿ ಗೇಟುಗಳನ್ನು ತೆಗೆದು ಸುಮಾರು 1200 ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟರು.
ಕರ್ನಾಟಕ ಕರಾವಳಿ,ಕೊಂಕಣ ಗೋವಾದಲ್ಲಿ ಭಾರಿ ಮಳೆ!
ಜಲಾಶಯದಿಂದ ನದಿಗೆ ನೀರು ಹರಿಸುವ ವೇಳೆ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಪ್ರಸಾದ್, ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಅಭಿಯಂತರ ನಾಗರಾಜು, ಗೇಟ್ ರೀಡರ್, ಗಿರೀಶ್, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.
ಎಷ್ಟು ನೀರಿನ ಸಂಗ್ರಹವಿದೆ
ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಹಾರಂಗಿ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿ. ಜಲಾಶಯದಲ್ಲಿ 8.5 ಟಿ.ಎಂ.ಸಿ.ನೀರನ್ನು ಸಂಗ್ರಹಿಸಬಹುದಾಗಿದೆ. ಈಗ 7.25 ಟಿ.ಎಂ.ಸಿ. ನೀರಿನ ಸಂಗ್ರಹವಿದೆ.
ಈ ಬಾರಿ ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ತಗ್ಗಿತ್ತಾದರೂ ಏಪ್ರಿಲ್, ಮೇ ಮತ್ತು ಜೂನ್ ಎರಡನೇ ವಾರದಲ್ಲಿ ಸುರಿದ ಭಾರೀ ಮಳೆಗೆ ನೀರಿನ ಪ್ರಮಾಣ ಹೆಚ್ಚಾಗಿತ್ತು.
ಒಳ ಹರಿವು ಕಡಿಮೆಯಾಗಿತ್ತು
ಜೂನ್ ತಿಂಗಳ ಕೊನೆಯ ವಾರದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜಲಾಶಯಕ್ಕೆ ಒಳ ಹರಿವು ತಗ್ಗಿತ್ತು. ಆದರೆ, ಶುಕ್ರವಾರದಿಂದ ಮತ್ತೆ ಮಳೆ ಚೇತರಿಸಿಕೊಂಡು ಅಬ್ಬರಿಸಿದ್ದರಿಂದ ನೀರಿನ ಒಳ ಹರಿವು ಹೆಚ್ಚಾಗಿದ್ದು ಜಲಾಶಯ ಭರ್ತಿಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಶನಿವಾರ ಜಲಾಶಯದ 4 ಗೇಟ್ ತೆಗೆದು ನೀರನ್ನು ಹರಿಸಲಾಗುತ್ತಿದೆ. ಕಳೆದ ವರ್ಷ ಜುಲೈ ತಿಂಗಳ ಕೊನೆಯವಾರದಲ್ಲಿ ಜಲಾಶಯ ಭರ್ತಿಯಾಗಿದ್ದರೆ, ಈ ಬಾರಿ ಕಳೆದ ವರ್ಷಕ್ಕಿಂತಲೂ ಬೇಗನೇ ಭರ್ತಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಅರ್ಚಕರಿಂದ ಪೂಜೆ
ಶನಿವಾರ ಸಂಜೆ 4.30ಕ್ಕೆ ಅರ್ಚಕ ಗಣಪತಿ ಹೆಗಡೆ ಅವರು ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತಾಯಿ ಕಾವೇರಿಗೆ ಪೂಜೆ ಸಲ್ಲಿಸಿದರು. ಬಳಿಕ 4 ಗೇಟುಗನ್ನು ತೆರದು ನದಿಗೆ ನೀರನ್ನು ಹರಿಸಲಾಗಿದೆ. ಜಲಾಶಯದಿಂದ 1,200 ಕ್ಯುಸೆಕ್ ನೀರನ್ನು ಬಿಡಲಾಗಿದೆ.
ಜುಲೈ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಕಾಲುವೆ ಮೂಲಕ ನೀರನ್ನು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.
ಪ್ರವಾಸಿಗರ ದಂಡು
ಜಲಾಶಯದಿಂದ ನೀರು ಬಿಟ್ಟ ವಿಚಾರ ತಿಳಿದ ಸುತ್ತಮುತ್ತಲಿನ ಜನರು ಹಾಗೂ ಪ್ರವಾಸಿಗರು ಅಣೆಕಟ್ಟೆ ಬಳಿ ಬಂದು ವೀಕ್ಷಿಸಿ ಸಂಭ್ರಮಿಸಿದರು. ಹಾಲ್ನೊರೆಯುಕ್ಕಿಸುತ್ತಾ ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿರುವ ಸುಂದರ ದೃಶ್ಯ ಜನರನ್ನು ಕಣ್ತುಂಬಿಕೊಂಡರು.
ಇಂದು ಭಾನುವಾರ ಮತ್ತಷ್ಟು ಪ್ರವಾಸಿಗರು ಜಲಾಶಯ ವೀಕ್ಷಣೆಗೆ ಆಗಮಿಸುವ ಸಾಧ್ಯತೆ ಇದೆ. ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನೀರಾವರಿಗೆ ಆಸರೆ
ಹಾರಂಗಿ ಕಾವೇರಿ ಕಣಿಯವ ಪ್ರಮುಖ ಜಲಾಶಯವಾಗಿದೆ. ಕೊಡಗು ಸೇರಿದಂತೆ ಮೈಸೂರು, ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರಕ್ಕೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಸೇರಿದಂತೆ 1,34,895 ಎಕರೆ ಪ್ರದೇಶಕ್ಕೆ ನೀರನ್ನು ಪೂರೈಸಲಾಗುತ್ತದೆ. ಹಾರಂಗಿ ನದಿ ಕಾವೇರಿ ನದಿಯನ್ನು ಸೇರಿ ಬಳಿಕ ಕೃಷ್ಣರಾಜ ಸಾಗರ ಸೇರಲಿದೆ.