ಭಣಗುಡುತ್ತಿದ್ದ ಹಾರಂಗಿ ಜಲಾಶಯ ಭರ್ತಿ, ರೈತರಲ್ಲಿ ಸಂತಸ
ಮಡಿಕೇರಿ, ಜುಲೈ 24 : ಸರಿಯಾದ ಸಮಯಕ್ಕೆ ಮಳೆ ಇಲ್ಲದೆ ಭಣಗುಡುತ್ತಿದ್ದ ಹಾರಂಗಿ ಜಲಾಶಯ ಭರ್ತಿಯಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯ ಭರ್ತಿಯಾಗಿದೆ. ಭರ್ಜರಿಯಾಗಿ ಸುರಿಯುತ್ತಿರೋ ಪುನರ್ವಸು ಮಳೆಯ ಅಬ್ಬರಕ್ಕೆ ಕಾವೇರಿಯ ಪ್ರಮುಖ ಉಪನದಿಗಳಲ್ಲಿ ಒಂದಾದ ಹಾರಂಗಿಯೂ ಉಕ್ಕಿ ಹರಿಯುತ್ತಿರುವ ಹಿನ್ನಲೆಯಲ್ಲಿ ಜಲಾಶಯ ಭರ್ತಿಯಾಗಿದೆ.
'ಮಡಿಕೇರಿಯಲ್ಲಿ ಇದೇನ್ ಮಹಾ ಮಳೆ ? ಈ ಬಾರಿ ತಡವಾಯ್ತು'
ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜುಲೈ 2ನೇ ವಾರದ ಬಳಿಕ ವಾಡಿಕೆಯಂತೆ ಮಳೆ ಆಗುತ್ತಿದ್ದು, ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2857.21 ಅಡಿ ನೀರು ಸಂಗ್ರಹವಾಗಿದೆ.
6640 ಸಾವಿರ ಕ್ಯೂಸೆಕ್ ಒಳಹರಿವು ಇದ್ದು ಭಾನುವಾರ ಮಧ್ಯಾಹ್ನ ನಾಲ್ಕು ಗೇಟ್ ಗಳ ಮೂಲಕ 1200 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ.
ಗರಿಗೆದರಿದ ಕೃಷಿ ಚಟುವಟಿಕೆ
ಮುಂಗಾರು ಮಳೆ ಪ್ರಾರಂಭದಲ್ಲಿ ಮಂಕಾಗಿದ್ದರಿಂದ ಕೈಕಟ್ಟಿಕೊಂಡು ಕುಳಿತ್ತಿದ್ದ ರೈತರಿಗೆ ಮಳೆಯ ಅರ್ಭಟದಿಂದ ಜಲಾಶಯ ಭರ್ತಿಯಾಗಿರುವುದು ಸಂತಸ ಮೂಡಿಸಿದೆ. ಹಾರಂಗಿ ಭರ್ತಿಯಾಗಿರುವುದರಿಂದ ಈ ಬಾಗದ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ
ಎತ್ತರದಿಂದ ಧುಮ್ಮುಕ್ಕಿ ಹರಿಯುವ ನೀರು
ಜಲಾಶಯದ ನಾಲ್ಕು ಗೇಟ್ ಗಳ ಮೂಲಕ ಎತ್ತರದಿಂದ ಧುಮ್ಮುಕ್ಕಿ ಹರಿಯುವ ನೀರು ಹಾಲ್ನೋರೆಯಂತೆ ರಭಸವಾಗಿ ಕೆಳಗಿಳಿಯೋ ದೃಶ್ಯ ನಯನಮನೋಹರಕವಾಗಿದೆ
ಹಾರಂಗಿ ಜಲಾಶಯದತ್ತ ಪ್ರವಾಸಿಗರ ದಂಡು
ನೀರಿನ ಅಂದ ನೋಡಲು ಪ್ರವಾಸಿಗರ ದಂಡು ಹಾರಂಗಿ ಆಗಮಿಸುತ್ತಿದ್ದು, ಬೇಸಿಗೆಯಲ್ಲಿ ಸೊರಗಿದ್ದ ಜಲಾಶಯ ಮುಂಗಾರಿನ ಅಬ್ಬರಕ್ಕೆ ತುಂಬಿಹರಿಯುತ್ತಿದೆ. ಶನಿವಾರ ಮತ್ತು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಹಾರಂಗಿಯ ಅಪರೂಪದ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳುತ್ತಿದ್ದಾರೆ.
ಉತ್ತರ ಕರ್ನಾಟಕ ಜೀವನಾಡಿ ತುಂಗಭದ್ರಾ
ಕರ್ನಾಟಕದ ಪ್ರಮುಖ ಜಲಾಶಗಳಲ್ಲಿ ಒಂದಾದ ಉತ್ತರ ಕರ್ನಾಟಕ ಜೀವನಾಡಿ ತುಂಗಭದ್ರಾರ ಜಲಾಶಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು, ಜಲಾಶಯ ತುಂಬುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.