ಪ್ರವಾಸಿಗರಿಗೆ ತೆರೆದುಕೊಂಡ ಹಾರಂಗಿ ಜಲಾಶಯ, ಉದ್ಯಾನ
ಮಡಿಕೇರಿ, ನವೆಂಬರ್ 16: ಅನ್ ಲಾಕ್ 5.0 ನಂತರವೂ ಬಂದ್ ಆಗಿದ್ದ ಜಿಲ್ಲೆಯ ಪ್ರವಾಸಿ ತಾಣ ಹಾರಂಗಿಯನ್ನು ಸೋಮವಾರ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.
ಸೆಪ್ಟೆಂಬರ್ ತಿಂಗಳ ನಂತರ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಹಾರಂಗಿಯ ಉದ್ಯಾನ ಹಾಗೂ ಸಂಗೀತ ಕಾರಂಜಿಗೆ ಭೇಟಿ ನೀಡಲು ಅವಕಾಶವಿರಲಿಲ್ಲ. ಇದೀಗ ಸ್ಥಳೀಯರ ಒತ್ತಾಯದ ಮೇರೆಗೆ ಕಾವೇರಿ ನೀರಾವರಿ ನಿಗಮ ಪ್ರವೇಶ ಧನ ನಿಗದಿಪಡಿಸಿ ಭೇಟಿಗೆ ಅವಕಾಶ ಕಲ್ಪಿಸಿದೆ.
ಪ್ರವಾಸಿ ತಾಣ ತೆರೆಯಲು ಸರ್ಕಾರದ ಹೇಳಿದ್ದರೂ ಹಾರಂಗಿ ಉದ್ಯಾನವನ ಇನ್ನೂ ತೆರೆದಿಲ್ಲ
ಜಿಲ್ಲೆಗೆ ಬಂದ ಪ್ರವಾಸಿಗರು, ಹಾರಂಗಿ ಜಲಾಶಯ ನೋಡಲಾಗದೇ ನಿರಾಸೆಯಿಂದ ಮರಳುತ್ತಿದ್ದರು. ಹಾರಂಗಿ ಪ್ರವಾಸಿ ತಾಣ ಬಂದ್ ಮಾಡಿದ್ದರಿಂದ ಸ್ಥಳೀಯ ವ್ಯಾಪಾರಿಗಳಿಗೂ ತೊಂದರೆಯಾಗಿತ್ತು. "ಸರ್ಕಾರವೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದರೂ, ಹಾರಂಗಿ ಇಲಾಖೆ ಅಧಿಕಾರಿಗಳು ಮಾತ್ರ ಪ್ರೋತ್ಸಾಹಿಸುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ನಾವು, ಉದ್ಯಾನವನ ಮುಚ್ಚಿರುವುದರಿಂದ ಪ್ರವಾಸಿಗರು, ವ್ಯಾಪಾರವಿಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ'' ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದರು. ಹೀಗಾಗಿ, ಪ್ರವಾಸಿಗರು ಹಾಗೂ ಸ್ಥಳೀಯರ ಒತ್ತಡಕ್ಕೆ ಮಣಿದ ಕಾವೇರಿ ನೀರಾವರಿ ನಿಗಮ ಹಾರಂಗಿ ಪ್ರದೇಶವನ್ನು ಮುಕ್ತಗೊಳಿಸಿದೆ. ಕೋವಿಡ್ 19 ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಇಲ್ಲಿಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.
Recommended Video
ಆದರೆ ಉಚಿತವಾಗಿದ್ದ ಪ್ರವೇಶಕ್ಕೆ ಈಗ ಶುಲ್ಕ ವಿಧಿಸಲಾಗಿದೆ. ವಯಸ್ಕರಿಗೆ 10 ರೂ, 6-12 ವರ್ಷದ ಮಕ್ಕಳಗೆ 5 ರೂ, ಭಾರೀ ವಾಹನಗಳ ಪಾರ್ಕಿಂಗ್ ಗೆ 100 ರೂ, ಕಾರು, ಜೀಪ್, ಆಟೋ ಪಾರ್ಕಿಂಗ್ ಗೆ 25 ರೂಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ದಿನ ಸಂಜೆ 7.30ರಿಂದ ಸಂಗೀತ ಕಾರಂಜಿ ಪ್ರದರ್ಶನವೂ ಇರಲಿದೆ.