ಕೊಡಗಿನ ಸಂತ್ರಸ್ತರಿಗೆ ಡಿಸೆಂಬರ್ನಲ್ಲಿ ಮನೆ ಹಸ್ತಾಂತರ; ಸೋಮಣ್ಣ ಭರವಸೆ
ಮಡಿಕೇರಿ, ಸೆಪ್ಟೆಂಬರ್ 24: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ವರ್ಷ ಕಳೆದರೂ ಮನೆ ನೀಡುವ ಕಾರ್ಯ ನಡೆದಿಲ್ಲ. ಸದ್ಯ ಒಟ್ಟು 633 ಮನೆಗಳನ್ನು ನಿರ್ಮಿಸಲಾಗಿದ್ದರೂ ಯಾರಿಗೂ ಇದುವರೆಗೆ ವಿತರಣೆ ಮಾಡಿಲ್ಲ. ಈ ಬಾರಿಯೂ ಪ್ರವಾಹ ಸಂಭವಿಸಿ ಹಲವು ಅನಾಹುತವಾಗಿದೆ. ಆದರೆ ಕಳೆದ ವರ್ಷದಿಂದ ಸರ್ಕಾರದ ಮನೆಗಾಗಿ ಕಾಯುತ್ತಲೇ ಬರುತ್ತಿರುವುದು ಬೇಸರದ ಸಂಗತಿಯಾಗಿದೆ.
ಇದೀಗ ಮಡಿಕೇರಿಗೆ ಭೇಟಿ ನೀಡಿ ಸಭೆ ನಡೆಸಿರುವ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು, ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಮದೆನಾಡು, ಕರ್ಣಂಗೇರಿ ಮತ್ತು ಜಂಬೂರು ಗ್ರಾಮಗಳಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಹಸ್ತಾಂತರಿಸಲಾಗುವುದಾಗಿ ಹೇಳಿದ್ದಾರೆ.
ಕೊಡಗಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಿದ ಮನೆ ನೋಡಿದ್ರೆ ಬೆಚ್ಚಿ ಬೀಳ್ತೀರ...
ಕಳೆದ ವರ್ಷ ನಡೆದ ಭೂಕುಸಿತದಿಂದ ಹಲವರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಮನೆ ಕಳೆದುಕೊಂಡವರ ಪೈಕಿ ಕೆಲವರು ಬಾಡಿಗೆ ಮನೆ, ಸಂಬಂಧಿಕರ ಮನೆಯಲ್ಲಿ ನೆಲೆಯೂರಿದ್ದು ಸರ್ಕಾರ ನೀಡಲಿರುವ ಮನೆಗಾಗಿ ಕಾಯುತ್ತಿದ್ದಾರೆ. ಇದೀಗ ಜಂಬೂರು, ಕರ್ಣಂಗೇರಿ ಮತ್ತು ಮದೆನಾಡು ಮೊದಲಾದ ಕಡೆ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಮನೆಗಳನ್ನು ಡಿಸೆಂಬರ್ ನಲ್ಲಿ ಸಂತ್ರಸ್ತರಿಗೆ ವಿತರಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ.
ತಹಶೀಲ್ದಾರ್ ಶ್ರಮದಿಂದ ನಿರ್ಗತಿಕ ಕುಟುಂಬಕ್ಕೆ ಸಿಕ್ಕಿತು 'ಬೆಳಕು'
ಸದ್ಯ ಸರ್ಕಾರ ಈಗಾಗಲೇ ಪ್ರಕೃತಿ ವಿಕೋಪದ ಕಾಮಗಾರಿಗಳನ್ನು ಕೈಗೊಳ್ಳಲು 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಲೋಕೋಪಯೋಗಿ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಸಣ್ಣ ನೀರಾವರಿ ಹೀಗೆ ಹಲವು ಇಲಾಖೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರಕೃತಿ ವಿಕೋಪ ಸಂತ್ರಸ್ತರಿಗೆ 10 ಸಾವಿರ ರೂ. ಬಾಡಿಗೆ ಭತ್ಯೆ ಭರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.