ಡೆಂಗ್ಯೂ ಸೊಳ್ಳೆಯನ್ನು ನಿರ್ನಾಮ ಮಾಡುವ ಗಪ್ಪಿ ಮೀನು!
ಇದೀಗ ಎಲ್ಲೆಡೆ ಕೇಳಿ ಬರುತ್ತಿರುವ ಮತ್ತು ಜನರನ್ನು ಕಾಡುತ್ತಿರುವ ಕಾಯಿಲೆ ಎಂದರೆ ಅದು ಡೆಂಗ್ಯೂ. ಸಾಮಾನ್ಯವಾಗಿ ಮೊದಲಿನಿಂದಲೂ ಮಳೆಗಾಲ ಆರಂಭವಾಯಿತೆಂದರೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ಮಾತ್ರೆನೋ, ಕಶಾಯನೋ ಕುಡಿದರೆ ಜ್ವರ ಕಡಿಮೆಯಾಗಿ ಬಿಡುತ್ತಿತ್ತು. ಈಗ ಅದೇ ರೀತಿ ನಂಬಿ ಮಾತ್ರೆ ಸೇವಿಸುವುದು ಮಾಡಿದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಯಾವ ಜ್ವರ ಎಂಬುದನ್ನು ಕಂಡು ಹಿಡಿದು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ಇತ್ತೀಚೆಗೆ ಹರಡಿರುವ ಮಹಾಮಾರಿ ಡೆಂಗ್ಯೂವನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದಲ್ಲ. ಡೆಂಗ್ಯೂ ಅಶುಚಿತ್ವದಿಂದ ಬರುವ ಕಾಯಿಲೆ ಎಂಬುದಕ್ಕೆ ಎರಡು ಮಾತಿಲ್ಲ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಒಳ್ಳೆಯದು. ಕೊಳಚೆ ನೀರು ನಿಲ್ಲುವ ಜಾಗವೇ ಡೆಂಗ್ಯೂ ಹರಡುವ ಸೊಳ್ಳೆಗಳ ಆವಾಸ ಸ್ಥಾನ. ಆದ್ದರಿಂದ ಶುಚಿತ್ವಕ್ಕೆ ಮೊದಲು ಆದ್ಯತೆ ನೀಡಬೇಕು. [ಡೆಂಗ್ಯೂ ಜ್ವರ ಹೆಚ್ಚಾಗಲು ರಬ್ಬರ್ ಬೆಳೆಗಾರರು ಕಾರಣ?]
ಕಾಯಿಲೆ ಬಂದ ಬಳಿಕ ಪರದಾಡುವುದಕ್ಕಿಂತ, ಬಾರದಂತೆ ಮುಂಜಾಗ್ರತೆ ವಹಿಸುವುದು ಜಾಣತನ. ಹೀಗಾಗಿ ಡೆಂಗ್ಯೂ ಮಹಾಮಾರಿ ನಮ್ಮನ್ನು ಬಾಧಿಸುವ ಮುನ್ನ ಅದನ್ನು ನಿಯಂತ್ರಿಸಲು ಶುಚಿತ್ವಕ್ಕೆ ಒತ್ತು ನೀಡುವುದರಿಂದ ಜತೆಗೆ, ಗಪ್ಪಿ ಮೀನಿನಿಂದಲೂ ಸಾಧ್ಯ ಎಂಬುದು ಗೊತ್ತಾಗಿದೆ. ಏಕೆಂದರೆ ಡೆಂಗ್ಯೂ ಹರಡುವ ಸೊಳ್ಳೆಯನ್ನು ನಾಶ ಮಾಡುವ ಶಕ್ತಿ ಗಪ್ಪಿ ಮೀನಿಗಿದೆಯಂತೆ. ಹೀಗಾಗಿ ಗಪ್ಪಿ ಮೀನನ್ನು ಸಾಕುವುದರಿಂದ ಸೊಳ್ಳೆಗಳ ನಾಶ ಮಾಡಿ ರೋಗ ಹರಡುವುದನ್ನು ನಿಯಂತ್ರಿಸಬಹುದು ಎಂಬುದು ಅಭಿಪ್ರಾಯವಾಗಿದೆ.
ಮನೆಯ ಸುತ್ತಮುತ್ತ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳೇ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಕ್ಕೆ ಕಾರಣ. ಅವುಗಳ ನಿರ್ಮೂಲನೆಗಾಗಿ ಫಾಗಿಂಗ್ನಂತಹ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಸೊಳ್ಳೆಗಳು ನಿರ್ಮೂಲನೆಯಾದರೂ ಅವುಗಳ ಮೊಟ್ಟೆ ಹಾಗೆ ಉಳಿದ ಪರಿಣಾಮ ಕಾಯಿಲೆ ನಿಯಂತ್ರಣ ಅಸಾಧ್ಯವಾಗಿದೆ.
ಸೊಳ್ಳೆ ಹಾಗೂ ಸೊಳ್ಳೆಯ ಮೊಟ್ಟೆಯಲ್ಲದೆ ಪಾಚಿಯನ್ನು ತಿನ್ನುವ ಗುಣವನ್ನು ಹೊಂದಿರುವುದರಿಂದ ರೋಗನಿಯಂತ್ರಣಕ್ಕೆ ಗಪ್ಪಿ ಮೀನು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. [ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?]
ಡೆಂಗ್ಯೂ ಬಾರದಂತೆ ನೋಡಿಕೊಳ್ಳಲು ಎಲ್ಲೆಡೆ ಗಪ್ಪಿ ಮೀನು ಬಿಡುವ ಕಾರ್ಯ ಮಡಿಕೇರಿಯಲ್ಲಿ ಸಮಾರೋಪಾದಿಯಲ್ಲಿ ಸಾಗಿದೆ. ರೋಗಕ್ಕೆ ಕಾರಣವಾಗುವ ಈಡಿಸ್ ಈಜಿಪ್ಟೆ ಸೊಳ್ಳೆಗಳು ಕೊಳಚೆ ನೀರಿನಲ್ಲಿ ಮಾತ್ರವಲ್ಲದೆ, ಶುದ್ದ ನೀರಲ್ಲೂ ತನ್ನ ಸಂತಾನಾಭಿವೃದ್ಧಿ ಮಾಡುವುದರಿಂದ ಅವುಗಳನ್ನು ಬೇರೆ ಯಾವುದೇ ವಿಧಾನಗಳಿಂದ ನಿಯಂತ್ರಣ ಮಾಡುವುದು ಕಷ್ಟ ಸಾಧ್ಯ. ಹೀಗಾಗಿ ಈ ಸೊಳ್ಳೆಗಳ ನಿರ್ಮೂಲನೆಗೆ ಗಪ್ಪಿ ಮೀನು ರಾಮಬಾಣ ಎಂದರೆ ತಪ್ಪಾಗಲಾರದು.
ಮೀನುಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಸಣ್ಣ ನೀರಿನ ತೊಟ್ಟಿಯನ್ನಿಟ್ಟು ಸಾಕಬಹುದು. ಈ ಮೀನುಗಳ ಸಾಕಣೆಗೆ ಅತಿ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಇವು ನೀರಿನ ತೊಟ್ಟಿಯಲ್ಲಿ ಉತ್ಪತ್ತಿಯಾಗುವ ಪಾಚಿಯನ್ನೇ ತಿಂದು. 3 ವರ್ಷಗಳ ಕಾಲ ಜೀವಿಸುತ್ತವೆ. [ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]