ಮಡಿಕೇರಿಯಲ್ಲಿ ಎಲ್ಐಸಿ ಉದ್ಯೋಗಿ ಮನೆಮೇಲೆ ಗುಂಡಿನ ದಾಳಿ
ಮಡಿಕೇರಿ, ಜುಲೈ 30: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ದಕ್ಷಿಣ ಕೊಡಗಿನ ರಾಜಕೀಯ ವ್ಯಕ್ತಿಯೊಬ್ಬರ ಮನೆ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿದ ಪ್ರಕರಣ ಹಸಿರಿರುವಾಗಲೇ ಇದೀಗ ನಗರದಲ್ಲಿ ದುಷ್ಕರ್ಮಿಗಳು ಜೀವ ವಿಮಾ ನಿಗಮದ ಉದ್ಯೋಗಿ ಮನೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ಜೀವ ವಿಮಾ ನಿಗಮದ ಉದ್ಯೋಗಿ ಜನಾರ್ಧನ ಎಂಬುವರ ಮೇಲೆ ದಾಳಿ ನಡೆದಿದ್ದು ಇದೀಗ ಭಯಹುಟ್ಟಿಸುವಂತೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜನಾರ್ಧನ ಅವರ ಮನೆಯು ನಗರದ ಫೀ.ಮಾ.ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿದ್ದು, ಮಡಿಕೇರಿಯ ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿರುವ ಜನಾರ್ಧನ ಎಂಬವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಜು.30ರ ಬೆಳಗಿನ ಜಾವ 3 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ದಾರೆ. ಮನೆಯ ಸಮೀಪ ಗುಂಡಿನ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯೊಳಗೆ ಮಲಗಿದ್ದ ಜನಾರ್ಧನ ಹೊರ ಬಂದು ನೋಡಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳು ಮತ್ತೊಂದು ಗುಂಡನ್ನು ಮನೆಗೆ ಹಾರಿಸಿ ಪರಾರಿಯಾಗಿದ್ದು, ಆ ಗುಂಡು ಕಿಟಕಿಯ ಗಾಜುಗಳನ್ನು ಪುಡಿಪುಡಿಯಾಗಿಸಿದೆ. ಕಿಟಕಿಯ ಚೌಕಟ್ಟಿಗೂ ಗುಂಡು ತಗುಲಿದ್ದು, ಆದರೆ ಅದೃಷ್ಟವಶಾತ್ ಮನೆಯೊಳಗಿದ್ದ ಜನಾರ್ಧನ ಸೇರಿದಂತೆ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುಷ್ಕರ್ಮಿಗಳು ಏಕೆ ಗುಂಡು ಹಾರಿಸಿದರು? ಕಾರಣವೇನು? ಮುಂತಾದ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್, ವೃತ್ತ ನಿರೀಕ್ಷಕ ಮೇದಪ್ಪ ಠಾಣಾಧಿಕಾರಿ ಷಣ್ಮುಗ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮನೆ ಮಾಲಿಕ ಜನಾರ್ಧನ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.