ಕೊಡಗಿನಲ್ಲಿ ಕಾಂಗ್ರೆಸ್ ಏಳ್ಗೆಗೆ ಮುಳುವಾದ ಗುಂಪುಗಾರಿಕೆ
ಮಡಿಕೇರಿ, ಜುಲೈ 29: ಕಳೆದ ಎರಡು ದಶಕಗಳಿಂದ ಕೊಡಗಿನಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಆದರೆ ಕಾಂಗ್ರೆಸ್ ಇಲ್ಲಿ ತನ್ನ ಪ್ರಾಬಲ್ಯ ಸಾಧಿಸುವಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸುವ ನಾಯಕರ ಕೊರತೆ ಮತ್ತು ಗುಂಪುಗಾರಿಕೆಗಳು ಎದ್ದು ಕಾಣುತ್ತಿದೆ.
Recommended Video
ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಅರ್ಹತೆವುಳ್ಳಂತಹ ನಿಷ್ಠಾವಂತ ನಾಯಕರಿಗೆ ಪಕ್ಷದ ಸಾರಥ್ಯವನ್ನು ನೀಡದ ಕಾರಣದಿಂದಾಗಿ ಪಕ್ಷದಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳು ಮುಂದುವರೆಯುತ್ತಲೇ ಸಾಗಿದೆ. ಇದರಿಂದ ಪಕ್ಷ ಸಂಘಟನೆಗೊಳ್ಳುವ ಬದಲು ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.
ಕಾಂಗ್ರೆಸ್ ಪ್ರಾಬಲ್ಯಕ್ಕೆ ಭಾರೀ ಹೊಡೆತ
ಎರಡು ದಶಕಗಳ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡನ್ನು ಬದಿಗೆ ಸರಿಸಿ ಕಾಂಗ್ರೆಸ್ ಬೆಳೆದಿತ್ತು. ಪಕ್ಷದಲ್ಲಿ ಪ್ರಭಾವಿ ನಾಯಕರಿದ್ದರು. ತಳಮಟ್ಟದಿಂದ ಪಕ್ಷವು ಸಂಘಟನೆಯಾಗಿತ್ತು. ಹೀಗಾಗಿ ಮೂರು ತಾಲೂಕುಗಳಲ್ಲಿಯೂ ಕಾಂಗ್ರೆಸ್ ಭದ್ರವಾಗಿತ್ತು. ದಿವಂಗತ ಬೆಳ್ಯಪ್ಪ, ಡಿ.ಎ.ಚಿಣ್ಣಪ್ಪ. ಎಂ.ಎಂ.ನಾಣಯ್ಯ ಸೇರಿದಂತೆ ಹಲವು ನಾಯಕರು ಪಕ್ಷವನ್ನು ಮುನ್ನಡೆಸಿದ್ದರು. ದಿವಂಗತ ಬಿ.ಟಿ.ಪ್ರದೀಪ್ ಅವರು ಜಿಲ್ಲಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಪಕ್ಷವನ್ನು ಮುನ್ನಡೆಸಿದರಾದರೂ ಪಕ್ಷವನ್ನು ಸಂಘಟಿಸಿ ಬಿಜೆಪಿಗೆ ಸಮವಾಗಿ ಬೆಳೆಸುವುದು ಸಾಧ್ಯವಾಗಲಿಲ್ಲ. ಚುನಾವಣೆಗಳಲ್ಲಿ ಸೋಲಾಗುತ್ತಿದ್ದಂತೆಯೇ ಅವರು ರಾಜೀನಾಮೆ ನೀಡಿದ್ದರು.
ಸಂಸದರೇ ಎಲ್ಲಿದ್ದೀರಪ್ಪಾ?: ಪ್ರತಾಪ್ ಸಿಂಹ ವಿರುದ್ಧ ಕೊಡಗು ಕಾಂಗ್ರೆಸ್ ಅಸಮಾಧಾನ
ಕಾಂಗ್ರೆಸ್ನಲ್ಲಿ ಶಮನವಾಗದ ಭಿನ್ನಾಭಿಪ್ರಾಯ
ಆ ನಂತರ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆಗಳು ಆರಂಭವಾಗತೊಡಗಿತು. ಅಷ್ಟೇ ಅಲ್ಲದೆ, ಅಧ್ಯಕ್ಷ ಗಾದಿಗೆ ಪೈಪೋಟಿ ಆರಂಭವಾದವು. ಜನತಾದಳ ವಿಭಜನೆ ಬಳಿಕ ಹೊರಬಂದು ಕಾಂಗ್ರೆಸ್ ಸೇರಿದ ಟಿ.ಪಿ.ರಮೇಶ್ ಒಂದಷ್ಟು ವರ್ಷಗಳ ಕಾಲ ಪಕ್ಷದ ಪ್ರಭಾರಿ ಅಧ್ಯಕ್ಷರಾದರೂ ಪಕ್ಷವನ್ನು ಸಂಘಟಿಸಿ ಬಿಜೆಪಿಗೆ ಪರ್ಯಾಯವಾಗಿ ಬೆಳೆಸುವಲ್ಲಿ ಯಶಸ್ಸು ಕಾಣಲಿಲ್ಲ. ಪರಿಣಾಮ, ಕಳೆದ ಎರಡು ದಶಕಗಳಿಂದಲೂ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ. ಇಂದು ಬಿಜೆಪಿ ಜಿಲ್ಲೆಯಲ್ಲಿ ಭದ್ರವಾಗಿ ತಳವೂರಿದೆ. ಇದು ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮೌನಕ್ಕೆ ಜಾರಿದ ಹಿರಿಯ ನಾಯಕರು
ಕಾಂಗ್ರೆಸ್ನಲ್ಲಿ ಬದಲಾದ ಬೆಳವಣಿಗೆಯಲ್ಲಿ ಶಿವು ಮಾದಪ್ಪ ಎಂಬುವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತಾದರೂ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ದಿಢೀರ್ ಶಿವು ಮಾದಪ್ಪ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಕೆ.ಕೆ. ಮಂಜುನಾಥ್ ಎಂಬುವರಿಗೆ ಪಟ್ಟ ನೀಡಲಾಯಿತು. ಅಲ್ಲಿಂದ ಶುರುವಾದ ಗುಂಪುಗಾರಿಕೆ ಇನ್ನೂ ಶಮನವಾಗಿಲ್ಲ. ಒಂದು ಕಾಲದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರು ಮೌನವಾಗಿದ್ದಾರೆ. ಉಳಿದಂತೆ ಕಾರ್ಯಕರ್ತರನ್ನು ಕೇಳುವವರೇ ಇಲ್ಲವಾಗಿದ್ದಾರೆ. ಪ್ರಭಾವಿ ಮಹಿಳಾ ನಾಯಕಿಯರಿದ್ದರೂ ಅವರ ನಡುವೆ ಎಲ್ಲವೂ ಸರಿಯಿಲ್ಲ.
ಕೊಡಗಿನ ಕೈ ಒಡಕಿಗೆ ಮುಲಾಮು ಹಚ್ಚೋ ಯತ್ನ!
ಭಿನ್ನಾಭಿಪ್ರಾಯಗಳಿಂದಾಗಿ ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು ಎಂಬಂತಾಗಿದೆ. ಇದೀಗ ಅಧ್ಯಕ್ಷರಾಗಿರುವ ಕೆ.ಕೆ. ಮಂಜುನಾಥ್ ವಿರುದ್ಧ ಪಕ್ಷದಲ್ಲಿಯೇ ಅಸಮಾಧಾನವಿರುವುದು ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ನ ಸಾರಥ್ಯವನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಅವರ ಪದಗ್ರಹಣ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜತೆಯಾಗಿ ವೀಕ್ಷಣೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದರು.
ಕೈ ನಾಯಕರಲ್ಲಿ ಒಗ್ಗಟ್ಟು ಬರೀ ಭ್ರಮೆ
ಆದರೆ ಇದೀಗ ಆ ಒಗ್ಗಟ್ಟು ಬರೀ ಭ್ರಮೆ ಎಂಬುದು ಸಾಬೀತಾಗಿದೆ. ಸದ್ದಿಲ್ಲದೆ ಕೆಲವು ನಾಯಕರು ಮಂಜುನಾಥ್ ಹಠಾವೋ, ಕಾಂಗ್ರೆಸ್ ಬಚಾವೋ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ನಡುವೆ ಕೆಲವು ನಾಯಕರು ಮತ್ತು ಕಾರ್ಯಕರ್ತರು ಜಿಲ್ಲಾಧ್ಯಕ್ಷರ ವಿರುದ್ಧ ಗುಂಪುಗಾರಿಕೆ ಮಾಡುತ್ತಿದ್ದು, ಜಿಲ್ಲೆಯಾದ್ಯಂತ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರನ್ನು ಸಂಘಟಿಸಿ ಗೌಪ್ಯವಾಗಿ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲಾಧ್ಯಕ್ಷ ಮಂಜುನಾಥ್ ವಿರುದ್ಧ ನಡೆದ ಸಭೆಯಲ್ಲಿ ಪಕ್ಷದ ಘಟಾನುಘಟಿ ನಾಯಕ, ನಾಯಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಈ ಗುಂಪುಗಾರಿಕೆ ಹೀಗೆಯೇ ಮುಂದುವರೆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದಂತೂ ಸತ್ಯ.