ಮಡಿಕೇರಿ; ಜನರಲ್ ತಿಮ್ಮಯ್ಯ ಮ್ಯೂಸಿಯಂ ನಿರ್ವಹಣೆ ಯಾರಿಗೆ?
ಮಡಿಕೇರಿ, ಮಾರ್ಚ್ 25; ಮಡಿಕೇರಿಯಲ್ಲಿನ ಜನರಲ್ ತಿಮ್ಮಯ್ಯ ಅವರ ಮ್ಯೂಸಿಯಂ ನಿರ್ವಹಣೆಯ ಕುರಿತು ಸರ್ಕಾರ ಇನ್ನೂ ತೀರ್ಮಾನ ಕೈಗೊಳ್ಳಬೇಕಿದೆ. ಫೆಬ್ರವರಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮ್ಯೂಸಿಯಂ ಉದ್ಘಾಟನೆ ಮಾಡಿದ್ದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮ್ಯೂಸಿಯಂ ನಿರ್ವಹಣೆ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ ಸುರೇಶ್ ಕುಮಾರ್ ವಿಧಾನ ಪರಿಷತ್ ಕಲಾಪದಲ್ಲಿ ಉತ್ತರ ನೀಡಿದ್ದಾರೆ.
ಜನರಲ್ ಕೆ. ಎಸ್. ತಿಮ್ಮಯ್ಯ ಮ್ಯೂಸಿಯಂ ವಿಶೇಷತೆಗಳು
ಮ್ಯೂಸಿಯಂ ನಿರ್ವಹಣೆಯ ಜವಾಬ್ದಾರಿಯನ್ನು ನಿವೃತ್ತ ಸೇನಾಧಿಕಾರಿಗಳಿಗೆ ನೀಡುವುದು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ವಿಧಾನ ಪರಿಷತ್ನಲ್ಲಿ ಹೇಳಿದ್ದಾರೆ.
ಕೊಡಗಿನ ವೀರ ಯೋಧ ಕಾರ್ಯಪ್ಪ, ತಿಮ್ಮಯ್ಯ ಕಂಚಿನ ಪ್ರತಿಮೆ ಅನಾವರಣ
ಜನರಲ್ ತಿಮ್ಮಯ್ಯ ಮ್ಯೂಸಿಯಂನ ಸಂಪೂರ್ಣ ಕಾಮಗಾರಿಯನ್ನು ಪೂರೈಸುವುದು ಸರಕಾರದ ಜವಾಬ್ದಾರಿಯಾಗಿದೆ. 2.25 ಕೋಟಿ ರೂ.ಗಳ ಅನುದಾನ ನೀಡಲು ಬಾಕಿ ಉಳಿದಿದ್ದು ಆ ಹಣದಲ್ಲಿ ಎಲ್ಲಾ ಕಾಮಗಾರಿಯನ್ನು ಪೂರ್ಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಾಗ ಹಸ್ತಾಂತರ
ಜನರಲ್ ತಿಮ್ಮಯ್ಯ ಮ್ಯೂಸಿಯಂನ ಒಟ್ಟು ವೆಚ್ಚ, ಬಿಡುಗಡೆ ಮಾಡಿರುವ ಅನುದಾನ ಮತ್ತು ಬಾಕಿ ಉಳಿದ ಅನುದಾನ ಹಾಗೂ ಮ್ಯೂಸಿಯಂ ಕಾಮಗಾರಿ ಪೂರ್ಣವಾಗುವ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಮತ್ತು ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರನ್ನು ಪ್ರಶ್ನಿಸಿದ್ದರು.
ಲಿಖಿತ ಉತ್ತರ ನೀಡಿರುವ ಸಚಿವ ಅರವಿಂದ ಲಿಂಬಾವಳಿ, ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಂದಾಜು ಮೊತ್ತ 5.50 ಕೋಟಿ ರೂ.ಗಳಾಗಿದ್ದು, ಈಗಾಗಲೇ 3.25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸರಕಾರದಿಂದ 2.25 ಕೋಟಿ ರೂ.ಗಳನ್ನು ನೀಡಲು ಬಾಕಿ ಉಳಿದಿದೆ. ಈ ಅನುದಾನ ಲಭ್ಯವಾದ ಬಳಿಕ ಇತರ ಕಾಮಗಾರಿಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮ್ಯೂಸಿಯಂನ ಸುತ್ತ ಕಾಂಪೌಂಡ್ ನಿರ್ಮಾಣ, ಸೇನೆಯ ಮಾಹಿತಿ ಕೇಂದ್ರ ಸ್ಥಾಪನೆ, ಜನರಲ್ ತಿಮ್ಮಯ್ಯ ಅವರು ಸೇವೆಯ ಧ್ಯೋತಕವಾಗಿರುವ ವಸ್ತುಗಳ ಸಂಗ್ರಹ ಮತ್ತು ನೀಲಿ ನಕ್ಷೆಯಂತೆ ಸಂಪೂರ್ಣ ಕಾಮಗಾರಿ ಮುಕ್ತಾಯ ಮಾಡಲು ಅನುದಾನ ಲಭ್ಯತೆ ಆಧರಿಸಿ ಕಾಮಗಾರಿ ನಡೆಸಲಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಉತ್ತರಿಸಿದ್ದರು.
ವಿಧಾನ ಪರಿಷತ್ನಲ್ಲಿ ಈ ಕುರಿತು ಮಾತನಾಡಿದ ಸದಸ್ಯೆ ವೀಣಾ ಅಚ್ಚಯ್ಯ, "ಜನರಲ್ ತಿಮ್ಮಯ್ಯ ಮ್ಯೂಸಿಯಂನ ಒಳಭಾಗ ಯುದ್ದ ಟ್ಯಾಂಕರ್, ಯುದ್ದ ವಿಮಾನ ಮತ್ತು ಜನರಲ್ ತಿಮ್ಮಯ್ಯ ಅವರ ಅಪರೂಪದ ಸೇವಾ ವಸ್ತು ಸಂಗ್ರಹಾಲಯವಿದೆ. ಇದನ್ನು ಸಂರಕ್ಷಿಸಲು ಸುತ್ತಲೂ ತಡೆ ಗೋಡೆಯ ಅಗತ್ಯವಿದೆ. ಈ ಹಿನ್ನೆಯಲ್ಲಿ ಸರಕಾರ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ವಹಿಸಬೇಕು" ಎಂದು ಆಗ್ರಹಿಸಿದರು.
ಇನ್ನು ಮ್ಯೂಸಿಯಂನ ಬಗ್ಗೆ ಮಾಹಿತಿ ನೀಡಲು ನಿವೃತ್ತ ಸೇನಾಧಿಕಾರಿಗಳನ್ನು ಅಲ್ಲಿ ನಿಯೋಜಿಸಬೇಕು. ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆಯ ಮೂಲಕ ಸರಕಾರದ ಗಮನ ಸೆಳೆದರು.
Recommended Video
ಮ್ಯೂಸಿಯಂನ ನಿರ್ವಹಣೆಗೆ ನಿವೃತ್ತ ಸೇನಾಧಿಕಾರಿಗಳನ್ನು ನಿಯೋಜಿಸುವುದು ಮತ್ತು ಮಕ್ಕಳಿಗೆ ಉಚಿತ ಪ್ರವೇಶ ನೀಡುವುದು ಕೂಡ ಉತ್ತಮ ಸಲಹೆಯಾಗಿದೆ. ಮಕ್ಕಳಿಗೆ ಮಹಾನ್ ವ್ಯಕ್ತಿಗಳ ಬದುಕಿನ ಪ್ರೇರಣೆ ಸಿಗಬೇಕು. ಈ ಕುರಿತು ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಸದನಕ್ಕೆ ಉತ್ತರಿಸಿದರು.