ದೇವಸ್ಥಾನಗಳ ಹುಂಡಿಯ 12 ಕೋಟಿ ಹಣ ಪ್ರವಾಹ ಸಂತ್ರಸ್ತರ ನಿಧಿಗೆ
ಬೆಂಗಳೂರು, ಆಗಸ್ಟ್ 22: ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಸಹಾಯ ನೀಡುವ ಸಲುವಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಧನಸಹಾಯ ಕ್ರೋಢೀಕರಣಕ್ಕೆ ವಿಶೇಷ ಕೌಂಟರ್ ತೆಗೆಯುವುದಲ್ಲದೇ ದೇವಸ್ಥಾನಗಳ ನಿಧಿಯಲ್ಲಿ ಲಭ್ಯವಿರುವ ಮೊತ್ತದಲ್ಲಿ ಒಟ್ಟು 12.30 ಕೋಟಿ ರೂ.ಗಳನ್ನು ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಕಂದಾಯ ಇಲಾಖೆಯ (ಮುಜರಾಯಿ) ಆಧೀನ ಕಾರ್ಯದರ್ಶಿ ಮಂಗಳವಾರ ಆದೇಶ ಹೊರಡಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ 81 ದೇವಾಲಯಗಳ ನಿಧಿಯಿಂದ 12.30 ಕೋಟಿ ರೂ.ಗಳನ್ನು ಧಾರ್ಮಿಕ ದತ್ತಿ ಆಯುಕ್ತರ ಖಾತೆಗೆ ಭರಿಸುವಂತೆ ಆದೇಶಿಸಲಾಗಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 3 ಕೋಟಿ ರೂ.ಗಳು, ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ 1 ಕೋಟಿ ರೂ.ಗಳು, ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ 1 ಕೋಟಿ ರೂ.ಗಳು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ 1 ಕೋಟಿ ರೂ.ಗಳು, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ 75 ಲಕ್ಷ ರೂ.ಗಳು, ಕೊಪ್ಪಳ ಹುಲಿಗೆಮ್ಮ ದೇವಸ್ಥಾನದ 50 ಲಕ್ಷ ರೂ.ಗಳನ್ನು ಪಡೆಯಲಾಗಿದೆ.
ಕೊಡಗು, ಕೇರಳ ಸಂತ್ರಸ್ತರಿಗಾಗಿ ಮಿಡಿದ ಕಡಲ ತಡಿಯ ಹೃದಯ
ಬೆಂಗಳೂರಿನ ಬನಶಂಕರಿ ದೇವಸ್ಥಾನದ 50 ಲಕ್ಷ ರೂ.ಗಳು, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ 50 ಲಕ್ಷ ರೂ.ಗಳು, ಸವದತ್ತಿಯ ರೇಣುಕಾ ಯಲ್ಲಮ್ಮನ ದೇವಸ್ಥಾನದ 50 ಲಕ್ಷ ರೂ.ಗಳು ಸೇರಿದಂತೆ 25 ಲಕ್ಷ ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ವಿವಿಧ ದೇವಸ್ಥಾನಗಳ ನಿಧಿಯಿಂದ ಹಣವನ್ನು ಸಹಾಯಧನವಾಗಿ ಪಡೆಯಲಾಗಿದೆ ಎಂದು ತಿಳಿಸಿದೆ.