ಪ್ರಕೃತಿ ವಿರುದ್ಧ ಚಟುವಟಿಕೆ ನಿಲ್ಲಿಸದಿದ್ದರೆ ಕೊಡಗಿಗೆ ಉಳಿಗಾಲವಿಲ್ಲ!
ಮಡಿಕೇರಿ, ಅಕ್ಟೋಬರ್.21:ಆಗಸ್ಟ್ ನಲ್ಲಿ ಸುರಿದ ಮುಂಗಾರಿನ ಮಹಾಮಳೆ ಮತ್ತು ಅದು ತಂದ ದುರಂತ ಕೊಡಗಿನ ಜನ ಮಳೆ ಎಂದರೆ ಬೆಚ್ಚಿಬೀಳುವ ಸ್ಥಿತಿಗೆ ತಂದು ನಿಲ್ಲಿಸಿದೆ. ಒಂದು ಕಡೆಯಿಂದ ಮರುನಿರ್ಮಾಣ ಕಾರ್ಯ ನಡೆಯುತ್ತಿದ್ದರೆ, ಜನ ನಿಧಾನವಾಗಿ ದುರಂತವನ್ನು ಮರೆಯುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳುವತ್ತ ಮಗ್ಗಲು ಬದಲಿಸುತ್ತಿದ್ದಾರೆ.
ಆದರೂ ಕಣ್ಣಿನ ಮುಂದೆಯೇ ಇರುವ ದುರಂತದ ಚಿತ್ರಣಗಳು ಮತ್ತೆ ಮತ್ತೆ ನೆನಪಿಸುತ್ತಿರುವುದರಿಂದಾಗಿ ನೋವು, ನಿರಾಸೆ, ಹತಾಶೆ, ನಮ್ಮ ಬದುಕು ಹೀಗಾಯಿತಲ್ಲ ಎಂಬ ಸಂಕಟ ಹಲವರನ್ನು ಕಾಡುತ್ತಲೇ ಇದೆ. ಮತ್ತೆ ಕೊಡಗನ್ನು ಮೊದಲಿನಂತೆ ಮರು ನಿರ್ಮಾಣ ಮಾಡುವುದು ಅಸಾಧ್ಯ.
ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ: ಕುಮಾರಸ್ವಾಮಿ
ಸಂತ್ರಸ್ತರಿಗೆ ಸೂರು ನೀಡಿ ಬದುಕಿಗೊಂದು ಆಸರೆ ಮಾಡಿಕೊಡಬಹುದೇ ವಿನಃ ಅವರು ತಲತಲಾಂತರದಿಂದ ಬಾಳಿ ಬದುಕಿನ ಮನೆ, ತೋಟ, ಆ ಸುಂದರ ಪರಿಸರ ನಿರ್ಮಾಣ ಮಾಡಿಕೊಡುವುದು ಸಾಧ್ಯವಿಲ್ಲ.
ನಮ್ಮ ಕಣ್ಣಮುಂದೆಯೇ ದುರಂತ ಇರುವಾಗ ಅಭಿವೃದ್ಧಿ ಎನ್ನುತ್ತಾ ಬೆಟ್ಟ ಕೊರೆದು ರಸ್ತೆ ಮಾಡುವುದು, ಮರಕಡಿಯುವುದು, ದಿಬ್ಬದ ಮೇಲೆ ರೆಸಾರ್ಟ್ ನಿರ್ಮಾಣ ಮಾಡುವುದು ಹೀಗೆ ಪ್ರಕೃತಿ ವಿರುದ್ಧದ ಕಾರ್ಯಗಳಿಗೆ ಮತ್ತೆ ನಾವೇನಾದರೂ ಕೈ ಹಾಕಿದರೆ ಕೊಡಗಿಗೆ ಕಂಟಕ ತಪ್ಪಿದಲ್ಲ.
ಏಕೆಂದರೆ ದೇಶದ ಭೂವಿಜ್ಞಾನಿಗಳ ಸಂಸ್ಥೆ 'ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ' (ಜಿ.ಎಸ್.ಐ.) ನಡೆಸಿದ ಸರ್ವೆ ಕೂಡ ಕೊಡಗಿನ ಇವತ್ತಿನ ದುರಂತಕ್ಕೆ ಎಡೆಬಿಡದೆ ಸುರಿದ ಮುಂಗಾರು ಮಳೆ ಒಂದೆಡೆಯಾದರೆ, ಬೆಟ್ಟಗಳ ಇಳಿಜಾರು ಪ್ರದೇಶಗಳನ್ನು ಮಾರ್ಪಾಡು ಮಾಡಿದ ಮಾನವ ನಿರ್ಮಿತ ಕೃತಕತೆಯೂ ಭೂಕುಸಿತಕ್ಕೆ ಮುಖ್ಯ ಕಾರಣ ಎಂದು ಹೇಳಿದೆ.
ಜೋಡುಪಾಲ ದುರಂತದಲ್ಲಿ ಮಗಳು ನಾಪತ್ತೆ: ಪ್ರತಿರೂಪಕ್ಕೆ ಅಂತ್ಯಸಂಸ್ಕಾರ ಮಾಡಿದ ಪೋಷಕರು
ಇದನ್ನು ಕೆಲವು ಹೋಂಸ್ಟೇ, ರೆಸಾರ್ಟ್ ನಡೆಸುತ್ತಿರುವವರು ಒಪ್ಪುತ್ತಿಲ್ಲವಾದರೂ ನೈಜ ಕಾರಣ ಇದೇ ಎಂಬುದು ಎಲ್ಲರೂ ಒಪ್ಪಬೇಕಾದ ವಿಚಾರವೇ... ಮುಂದೆ ಓದಿ...
ದುರಂತಕ್ಕೆ ಕಾರಣ
ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನಿಂದ ಬಂದ ಪ್ರಭಾವಿಗಳು ಕಡಿಮೆ ಬೆಲೆಗೆ ಜಾಗಗಳನ್ನು ಖರೀದಿಸಿ ರೆಸಾರ್ಟ್ ಮಾಡಿ ಅದಕ್ಕೆ ಬೇಕಾದ ರಸ್ತೆಗಳನ್ನು ಬೆಟ್ಟ ಕೊರೆದು ಮಾಡಿ ಹಣ ಸಂಪಾದನೆಗೆ ದಾರಿ ಮಾಡಿಕೊಂಡರು.
ಇದನ್ನು ನೋಡಿದ ಸ್ಥಳೀಯರು ಕೂಡ ಬೆಟ್ಟವನ್ನೆಲ್ಲ ಅಗೆದು ರಸ್ತೆ, ತೋಟ ಮಾಡಿ ತಾವು ಬದುಕಿಗೆ ದಾರಿ ಹುಡುಕುವ ಪ್ರಯತ್ನ ಮಾಡಿದರು. ಅದೆಲ್ಲದರ ಪರಿಣಾಮ ಇವತ್ತು ದುರಂತವನ್ನು ಎದುರಿಸುವಂತಾಗಿದೆ.
ಭೂಕುಸಿತಕ್ಕೆ ಕಾರಣ
ಕೊಡಗಿಗೆ ಆಗಮಿಸಿದ ಜಿ.ಎಸ್.ಐ.ನ ನಿರ್ದೇಶಕ ಕೆ.ವಿ ಮಾರುತಿ, ಭೂವಿಜ್ಞಾನಿಗಳಾದ ಅಂಕುರ್ ಕುಮಾರ್ ಶ್ರೀವಾಸ್ತವ ಮತ್ತು ಸುನಂದನ್ ಬಾಸು ಭೂವಿಜ್ಞಾನಿಗಳ ತಂಡ, ಜಿಲ್ಲೆಯ ಭೂಕುಸಿತ ಪ್ರದೇಶಗಳಿಗೆ ಆಗಸ್ಟ್ 27 ರಿಂದ ಸೆಪ್ಟೆಂಬರ್ 1 ರ ವರೆಗೆ ತೆರಳಿ ತಮ್ಮ ವೀಕ್ಷಣೆಗಳ ಪ್ರಾಥಮಿಕ ವರದಿಯನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ರವರಿಗೆ ಸಲ್ಲಿಸಿದ್ದಾರೆ.
ಅದರಲ್ಲಿ ರಸ್ತೆ, ಮನೆ, ಹೋಟೆಲ್ ಹಾಗೂ ಹೋಂಸ್ಟೇಗಳ ನಿರ್ಮಾಣಕ್ಕೆ ಹಾಗೂ ಕಾಫಿ ತೋಟಗಳ ರಚನೆಗೆ ಬೆಟ್ಟಗಳ ಇಳಿಜಾರು ಪ್ರದೇಶಗಳನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಇದು ಕೂಡ ಭೂಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂಬುದನ್ನು ತಿಳಿಸಿದ್ದಾರೆ.
20 ವರ್ಷಗಳಲ್ಲಿ ಜಿಲ್ಲೆ ಕಾಣದ ಧಾರಾಕಾರ ಮಳೆಯು ಸೇರಿದಂತೆ, ಮಾನವ ನಿರ್ಮಿತ ಕಾರಣಗಳೂ ಸೇರಿ ಭೂಕುಸಿತಕ್ಕೆ ದಾರಿ ಮಾಡಿಕೊಟ್ಟಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಬದುಕಿ ಬಾಳಿದ ಜಾಗ ವಾಸಕ್ಕೆ ಅಪಾಯಕಾರಿ, ಕಣ್ಣೀರಿಟ್ಟ ಸಂತ್ರಸ್ತರು
ಭೂವಿಜ್ಞಾನಿಗಳು ಹೇಳಿರುವುದು
ಕಾಫಿ ತೋಟ ನಿರ್ಮಿಸಲು ಮಾಡುವ ಇಳಿಜಾರಿನ ಮಾರ್ಪಾಡುವಿಕೆ, ನೀರಿನ ಸಹಜ ಹರಿಯುವಿಕೆಯನ್ನು ತಡೆಗಟ್ಟುತ್ತಿದೆ. ಅಲ್ಲದೆ, ನೀರಿನ ಒತ್ತಡ ಹೆಚ್ಚಿಸಿ ಭೂಕುಸಿತಕ್ಕೆ ದಾರಿ ನೀಡಿರಬಹುದು. ಹೆಚ್ಚಾಗಿ ತೋಟಗಳಲ್ಲಿ ನಿರ್ಮಿಸಲ್ಪಡುತ್ತಿರುವ ಟ್ಯಾಂಕ್ ಹಾಗೂ ಕೊಳಗಳಲ್ಲಿನ ನೀರು ಸೋರುವಿಕೆಯಿಂದಲೂ ಭೂ ಭಾಗಗಳು ಕುಸಿದಿವೆ. ಹೀಗೆ ಹತ್ತಾರು ಕಾರಣಗಳನ್ನು ನೀಡಿದ್ದಾರೆ ಭೂವಿಜ್ಞಾನಿಗಳು.
ಚರಂಡಿಯ ವ್ಯವಸ್ಥೆ ಸರಿಯಿಲ್ಲ
ಹಾಗಾದರೆ ಕೊಡಗನ್ನು ಹೇಗೆ ಉಳಿಸಿಕೊಳ್ಳುವುದಾದರೂ ಹೇಗೆ ಮುಂದೆ ಇಂತಹ ದುರಂತವಾಗದಂತೆ ತಡೆಗಟ್ಟಲು ಸಾಧ್ಯನಾ? ಏನು ಮಾಡಬಹುದು? ಎಂಬುದರ ಬಗ್ಗೆಯೂ ಒಂದಷ್ಟು ಸಲಹೆಗಳನ್ನು ನೀಡಿರುವುದನ್ನು ನಾವು ಗಮನಿಸಬಹುದಾಗಿದ್ದು, ಅದು ಏನೆಂದರೆ, ರಾಜ್ಯ ಸರಕಾರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಕೊಡಗಿನಲ್ಲಿ ಭೂ ನಿಂಧನೆಯ ಕಟ್ಟುನಿಟ್ಟಿನ ಮಾರ್ಗಸೂಚಿ ರಚಿಸಬೇಕು.
ಕೊಡಗಿನಲ್ಲಿ ಭೂಬಳಕೆಯ ಕಟ್ಟುನಿಟ್ಟಾದ ಮಾರ್ಗಸೂಚಿಗಳಿಲ್ಲ. ಇದರ ಅವಶ್ಯಕತೆ ಪಶ್ಚಿಮ ಘಟ್ಟದ ಪ್ರದೇಶಗಳಿಗೆ, ಮುಖ್ಯವಾಗಿ ಕೊಡಗಿನ ಪ್ರದೇಶಕ್ಕೆ ಇದೆ.
ಕೊಡಗಿನಲ್ಲಿ ಚರಂಡಿಯ ವ್ಯವಸ್ಥೆ ಸರಿಯಿಲ್ಲದ ಕಾರಣ, ಇದಕ್ಕೆ ತಕ್ಷಣ ವ್ಯವಸ್ಥಿತ ಸೌಲಭ್ಯ ಕಲ್ಪಿಸಬೇಕು. ಭೂ ವಿಜ್ಞಾನಿಗಳು ಹಾಗೂ ರಚನಾತ್ಮಕ ಇಂಜಿನಿಯರ್ ಗಳ ಸಹಾಯ ಪಡೆದ ನಂತರವೇ ರಸ್ತೆ ಹಾಗೂ ಪಟ್ಟಣ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಹತ್ತು ಹಲವು ಸಲಹೆಗಳನ್ನು ನೀಡಿದೆ.
'ಪ್ರವಾಹದಲ್ಲಿ ಕೊಚ್ಚಿಹೋದ ಮಗಳು ಬದುಕಿ ಬರ್ತಾಳೆ ಅನ್ನೋ ಭರವಸೆ ಇಲ್ಲ'
ಎಚ್ಚೆತ್ತುಕೊಳ್ಳದಿದ್ದಲ್ಲಿ ಉಳಿಗಾಲವಿಲ್ಲ
ಮೊದಲು ಜನ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ತೆಗೆದುಕೊಳ್ಳುವ ಕ್ರಮಗಳು ಒಂದೆಡೆಯಾದರೆ, ಜಿಲ್ಲೆಯ ಜನತೆ ಮೊದಲು ಎಚ್ಚೆತ್ತುಕೊಂಡು ಪ್ರಕೃತಿ ವಿರುದ್ಧ ನಡೆಸುತ್ತಿರುವ ಚಟುವಟಿಕೆಯನ್ನು ನಿಲ್ಲಿಸಬೇಕಿದೆ. ದುರಂತ ಕಣ್ಣಮುಂದೆಯೇ ಇರುವಾಗ ಎಚ್ಚೆತ್ತುಕೊಳ್ಳದೆ ಹೋದರೆ ಉಳಿಗಾಲವಿಲ್ಲ ಎನ್ನುವುದನ್ನು ಯಾರೂ ಕೂಡ ಮರೆಯಬಾರದು.