ಕೊಡಗಿನಲ್ಲಿ ಕಸ ವಿಲೇವಾರಿಯದ್ದೇ ಚಿಂತೆ!
ಮಡಿಕೇರಿ, ಆಗಸ್ಟ್ 14 : ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಕಸ ವಿಲೇವಾರಿಯದ್ದೇ ಸಮಸ್ಯೆಯಾಗಿದೆ. ಇದೀಗ ಕೊಡಗಿನಲ್ಲೂ ಸಹ ಇದರದ್ದೇ ಸಮಸ್ಯೆ ಉದ್ಭವಿಸಿದೆ.
ಈ ಹಿಂದೆ ಸಣ್ಣಪುಟ್ಟ ಗ್ರಾಮಗಳಾಗಿದ್ದವುಗಳು ಇದೀಗ ಪಟ್ಟಣಗಳಾಗಿ ಬೆಳೆಯುತ್ತಿವೆ. ಹೀಗಾಗಿ ಹೆಚ್ಚು ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದು, ಅದನ್ನು ಎಲ್ಲಿ ವಿಲೇವಾರಿ ಮಾಡುವುದೆಂಬ ಚಿಂತೆ ಕಾಡತೊಡಗಿದೆ.
ಗದ್ದೆ ಬಯಲುಗಳು ವಿವೇಶನಗಳಾಗಿ ಮಾರ್ಪಾಡಾಗುತ್ತಿದ್ದು, ಮನೆ ಕಟ್ಟುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನವಸತಿ, ರೆಸಾರ್ಟ್, ಹೋಂ ಸ್ಟೇ ಹೀಗೆ ವಿವಿಧ ವಾಣಿಜ್ಯ ವಹಿವಾಟುಗಳು ತಲೆ ಎತ್ತುತ್ತಿದ್ದಂತೆಯೇ ಕಸ ತುಂಬತೊಡಗಿದೆ. ಇದೀಗ ಕಸವನ್ನು ವಿಲೇವಾರಿ ಮಾಡುವುದು ಎಲ್ಲಿ ಎಂದು ಸ್ಥಳೀಯ ಗ್ರಾಮ, ಪಟ್ಟಣ ಪಂಚಾಯಿತಿ, ನಗರಸಭೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ತಾಲೂಕು ಕೇಂದ್ರಗಳಲ್ಲಿ ಕಸ ವಿಲೇವಾರಿಗೆಂದೇ ಸೂಕ್ತ ಸ್ಥಳವಿರುವುದರಿಂದ ತೊಂದರೆಯಿಲ್ಲವಾದರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗಳು ಆರಂಭವಾಗಿವೆ. ಕೆಲವು ವಾಣಿಜ್ಯ ವಹಿವಾಟುಗಳನ್ನು ನಡೆಸುವವರು ಕಸವನ್ನು ರಾತ್ರೋರಾತ್ರಿ ತಂದು ರಸ್ತೆ ಬದಿಯಲ್ಲಿ, ಅರಣ್ಯದಂಚಿನಲ್ಲಿ, ಹೊಳೆ ಬದಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸುರಿದು ಹೋಗುತ್ತಿರುವುದು ಇಲ್ಲಿನ ಸ್ವಚ್ಛತೆಗೆ ಭಂಗ ತರುತ್ತಿದೆ.
ಜನ ವಸತಿ ಪ್ರದೇಶದಲ್ಲಿ ಕೆಲವು ಕಡೆ ಕಸದ ತೊಟ್ಟಿ ಇಡಲಾಗಿದೆಯಾದರೂ ಅದು ತುಂಬಿ ತುಳುಕುತ್ತಿದ್ದರೂ ಅದನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಎಲ್ಲಿಗೆ ವಿಲೇವಾರಿ ಮಾಡುವುದು ಎಂಬ ಚಿಂತೆ ಕೆಲವು ಗ್ರಾಮಪಂಚಾಯಿತಿಗಳದ್ದಾಗಿದೆ. ಇದರಿಂದಾಗಿ ಅವು ಅಲ್ಲಿಯೇ ಕೊಳೆತು ದುರ್ನಾತ ಬೀರುವಂತಾಗಿದೆ.
ಇತ್ತೀಚೆಗಷ್ಟೆ ಜಿಲ್ಲೆಯ ನೆಲ್ಯಹುದಿಕೇರಿಯ ಜನ ಕಸವಿಲೇವಾರಿ ಮಾಡುವಂತೆ ಪಟ್ಟಣವನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇಲ್ಲಿಗೆ ಹೊಂದಿಕೊಂಡಂತಿರುವ ಚೆಟ್ಟಳ್ಳಿಯಲ್ಲಿಯೂ ಕಸದ ಸಮಸ್ಯೆ ಜನರನ್ನು ಕಾಡತೊಡಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಇಲ್ಲಿನ ಪಂಚಾಯಿತಿ ಸಮೀಪದ ಬೇರಂಗಿ ಬೆಟ್ಟದಜಾಗದಲ್ಲಿ ಕಸ ಸುರಿಯಲು ವ್ಯವಸ್ಥೆ ಮಾಡಿ ಟ್ರ್ಯಾಕ್ಟರ್ ನಲ್ಲಿ ಹೊತ್ತೊಯ್ದು ಸುರಿಯಲಾಗಿತ್ತು. ಆದರೆ ಅಲ್ಲಿಯೂ ಸಮಸ್ಯೆ ಉಂಟಾಗಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ.
ಕೋಳಿ, ಮಾಂಸಗಳ ತ್ಯಾಜ್ಯವನ್ನು ಸುರಿಯಲು ಸೂಕ್ತ ಸ್ಥಳವಿಲ್ಲದ ಕಾರಣದಿಂದ ವ್ಯಾಪಾರಸ್ಥರು ಪಟ್ಟಣದ ಕಸದ ತೊಟ್ಟಿಗೆ ತಂದು ಸುರಿಯುತ್ತಿದ್ದಾರೆ. ಇದನ್ನು ಗ್ರಾಪಂ ಸಕಾಲದಲ್ಲಿ ವಿಲೇವಾರಿ ಮಾಡದ ಕಾರಣದಿಂದ ಅದು ಕೊಳೆತು ದುರ್ನಾತ ಬೀರುತ್ತಿದೆ. ಪರಿಣಾಮ ಜನ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಇದು ಕೇವಲ ಒಂದು ಪಟ್ಟಣದ ಕಥೆಯಲ್ಲ. ಕೊಡಗಿನ ಬಹುತೇಕ ಗ್ರಾಪಂಗಳು ಕಸದ ವಿಲೇವಾರಿ ಸಮಸ್ಯೆಯನ್ನು ಎದುರಿಸುತ್ತಿವೆ.
ಇಲ್ಲಿನ ಕಸದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳದೆ ಹೋದರೆ ಮುಂದೊಂದು ದಿನ ಸ್ವಚ್ಛ ಕೊಡಗು ಕಸದ ಕೊಂಪೆಯಾಗಿ ಪರಿಣಮಿಸುವುದರಲ್ಲಿ ಅಚ್ಚರಿಯಿಲ್ಲ. ಆದ್ದರಿಂದ ಕಸದ ಸಮಸ್ಯೆಗೆ ಈಗಿನಿಂದಲೇ ಪರಿಹಾರ ಹುಡುಕುವುದು ಅನಿವಾರ್ಯವಾಗಿದೆ.