ಮಳೆಗಾಲದ ಸ್ಪೆಷಲ್ ಕಣಿಲೆ, ಏಡಿಗೆ ಮನ ಸೋತ ಮಡಿಕೇರಿ; ಕೇಜಿ ಏಡಿಗೆ 300 ರು.
ಮಡಿಕೇರಿ, ಜುಲೈ 16: ಮಡಿಕೇರಿ ರಸ್ತೆ ಬದಿಯಲ್ಲಿ ಕಣಿಲೆ, ಏಡಿ ನೋಡಿದರೆ ಆಹಾರಪ್ರಿಯರು (ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳ ಆದ್ಯತೆಗೆ ತಕ್ಕಂತೆ) ಬರಿಗೈಲಿ ಮುಂದೆ ಸಾಗುವುದು ಅಪರೂಪ. ನಾಲಗೆ ಮೇಲೆ ನೀರೂರುವಂತೆ ಮಾಡುವ ಖಾದ್ಯ ಆ ಕ್ಷಣವೇ ನೆನಪಾಗಿ, ಖರೀದಿಗೆ ಮುಂದಾಗುವವರೇ ಹೆಚ್ಚು.
ಮಂಜಿನ ನಗರಿ ಮಡಿಕೇರಿಯಲ್ಲಿ ಈಗ ಏಡಿ, ಕಣಿಲೆ ಮಾರಾಟ ಬಲು ಜೋರಾಗಿ ನಡೆಯುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದೆ. ಆದರೆ ಏಡಿ ಕಣಿಲೆಗೇನೂ ಕೊರತೆ ಆಗಿಲ್ಲ. ಇನ್ನು ಮಳೆಗಾಲವಾದ ಕಾರಣ ಆಹಾರ ಪ್ರಿಯರು ಈ ಭಾಗದಲ್ಲಿ ಹೆಚ್ಚು ತಯಾರು ಮಾಡುವ ಖಾದ್ಯಗಳು ಕಣಿಲೆ ಹಾಗೂ ಏಡಿಯದ್ದೇ ಆಗಿರುತ್ತವೆ.
ಮಳೆಗಾಲ ಸ್ಪೆಷಲ್: ಬಾಯಲ್ಲಿ ನೀರೂರಿಸುವ ದ.ಕನ್ನಡದ ಏಡಿ ಊಟ!
ಹೊರ ಜಿಲ್ಲೆಗಳಿಂದಲೂ ಕಣಿಲೆಗಳನ್ನು ತಂದು, ಈಗಾಗಲೇ ಮಾರಾಟ ಮಾಡುತ್ತಿದ್ದಾರೆ ವ್ಯಾಪಾರಿಗಳು. ಮಳೆಗಾಲವಾದ ಕಾರಣ ಇದೇ ವೇಳೆ ಲಭ್ಯವಿರುವ ಈ ಕಣಿಲೆಯನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಈ ಹಿಂದೆ ಅಪಾರ ಪ್ರಮಾಣದಲ್ಲಿ ದೊರೆಯುತ್ತಿದ್ದ ಕಣಿಲೆ ಈಗ ಅಪರೂಪವಾಗಿರುವುದರಿಂದ ಇದರ ಬೆಲೆಯೂ ಹೆಚ್ಚಿದೆ.
ಬಿದಿರು ಹಾಗೂ ವಾಟೆ ಅಭಾವಕ್ಕೆ ಕಾರಣ ಆಗಿರುವುದೇ ಕಣಿಲೆಯ ಮಾರಾಟದ ಪ್ರಮಾಣದಲ್ಲಿ ಇಳಿಮುಖವಾಗಿದೆ ಎನ್ನುತ್ತಾರೆ ಮಾರಾಟಗಾರರು. ಸದ್ಯ ಕಣಿಲೆ ಒಂದು ಕೆ.ಜಿ.ಗೆ 120 ರಿಂದ 150 ರುಪಾಯಿ ಇದ್ದರೂ ಖರೀದಿಸುವವರು ಬೆಲೆಯ ಮುಖ ನೋಡುತ್ತಿಲ್ಲ.
ಬೇಕೆ ಬೇಕು ನಾನ್ವೆಜ್ ಬೇಕು: ಪರಪ್ಪನ ಅಗ್ರಹಾರ ಕೈದಿಗಳ ಪ್ರತಿಭಟನೆ!
ಕೊಡಗಿನಲ್ಲಿ ಚುಮು ಚುಮು ಚಳಿ ತಡೆಯುವಂಥ ಆಹಾರಗಳನ್ನೇ ಮಳೆಗಾಲದಲ್ಲಿ ಸೇವಿಸಲಾಗುತ್ತದೆ. ಹಾಗಾಗಿ ಜಿಲ್ಲೆಯ ಜನರಿಗೆ ಏಡಿಗಳೆಂದರೆ ಪಂಚಪ್ರಾಣ. ಪ್ರತೀ ವರ್ಷ ಮಳೆಗಾಲದ ಆರಂಭದಲ್ಲಿ ಕೆಆರ್ ಎಸ್ ನಿಂದ ಏಡಿಯನ್ನು ಮಡಿಕೇರಿಗೆ ತಂದು ಮಾರಾಟ ಮಾಡಲಾಗುತ್ತದೆ.
ಏಡಿಪ್ರಿಯರಾದ ಮಡಿಕೇರಿಯ ಜನ ಮುಗಿಬಿದ್ದು ಇವುಗಳನ್ನು ಖರೀದಿಸುತ್ತಾರೆ. ಔಷಧೀಯ ಗುಣಗಳಿರುವ ಏಡಿಯನ್ನು ಹೆಚ್ಚು ಖರೀದಿ ಮಾಡುತ್ತಾರೆ. ಸಮುದ್ರ ಮೀನಿನ ಅಭಾವ ಇರುವುದರಿಂದ ಏಡಿಗೆ ಬೇಡಿಕೆ ಹೆಚ್ಚಿದೆ. ಮಡಿಕೇರಿ ನಗರದ ಬಸ್ ನಿಲ್ದಾಣಗಳಲ್ಲಿಯೇ ಏಡಿ ಮಾರಾಟ ಬಲು ಜೋರಾಗಿ ನಡೆಯುತ್ತಿದೆ. ಹುಣಸೂರು ಭಾಗದ ಏಡಿಗಳನ್ನು ಮಡಿಕೇರಿಯ ಜನ ಹೆಚ್ಚು ಖರೀದಿ ಮಾಡುತ್ತಾರೆ. ಒಂದು ಕೇಜಿ ಏಡಿಗೆ 300 ರುಪಾಯಿ ಬೆಲೆ ಇದ್ದರೂ ಗ್ರಾಹಕರು ಖರೀದಿಸುತ್ತಿದ್ದಾರೆ.