ಶ್ವಾಸಕೋಶಕ್ಕೆ ಹಾಲು ಹೋಗಿ ನಾಲ್ಕು ದಿನದ ಮಗು ಸಾವು
ಮಡಿಕೇರಿ, ಏಪ್ರಿಲ್ 13: ನಾಲ್ಕು ದಿನದ ಮಗುವಿನ ಶ್ವಾಸ ಕೋಶದೊಳಗೆ ಹಾಲು ಹೋಗಿ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಡೊಡ್ಡಕಮರಹಳ್ಳಿ ಗ್ರಾಮದ ಮಂಜುಳ-ಚನ್ನಬಸಪ್ಪ ದಂಪತಿ ತಮ್ಮ ಮಗಳು ಲಕ್ಷ್ಮಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆ ಕರೆದುಕೊಂಡು ಬಂದಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು.
ತಾಯಿ ಮಗು ಇಬ್ಬರು ಆರೋಗ್ಯವಾಗಿಯೇ ಇದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಬಾಣಂತಿಯನ್ನು ಮಗುವಿನ ಬಳಿ ಜಾಸ್ತಿ ಹೊತ್ತು ಇರಲು ಬಿಡಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಹಾಗಾಗಿ ಮಗುವಿಗೆ ಹಾಲುಣಿಸುವಾಗ ಹಾಲು ಶ್ವಾಸಕೋಶಕ್ಕೆ ಹೋಗಿ ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಆಸ್ಪತ್ರೆಯ ಬಾಣಂತಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಅವರನ್ನು ಒನ್ಇಂಡಿಯಾ ಪ್ರಶ್ನಿಸಿದಾಗ, ಹಾಲು ಶ್ವಾಸಕೋಶಕ್ಕೆ ಹೋಗಿ ಮಗು ಸಾವನ್ನಪ್ಪಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ನಂತರ ನಿಖರ ಕಾರಣ ತಿಳಿಸುವುದಾಗಿ ಎಂದು ಹೇಳಿದರು.
ಆದರೆ ಪೋಷಕರು ಮಾತ್ರ ಈ ಸಾವಿಗೆ ಆಸ್ಪತ್ರೆಯೇ ಹೊಣೆ ಎಂದು ಆರೋಪಿಸಿದ್ದಾರೆ. ಆಪರೇಷನ್ ಆಗಿದ್ದ ತಾಯಿಯ ಬಳಿ ನರ್ಸ್ ಗಳು ಸರಿಯಾಗಿ ಇರುತ್ತಿರಲಿಲ್ಲ. ತಾಯಿ ಮಗುವನ್ನು ನೋಡಿಕೊಳ್ಳಲು ನಮ್ಮನ್ನೂ ಬಿಡಲಿಲ್ಲ. ಹೀಗಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.
ಈ ನಡುವೆ ಕೊರೊನಾ ಭೀತಿ ಇರುವುದರಿಂದ ನರ್ಸ್ ಗಳು ಮತ್ತು ಸೆಕ್ಯುರಿಟಿ ಗಾರ್ಡ್ಗಳು ತಾಯಿ, ಮಗುವಿನ ಬಳಿ ಯಾರನ್ನೂ ಬಿಟ್ಟಿಲ್ಲ. ಸಿಸೇರಿಯನ್ ಆಗಿದ್ದ ಬಾಣಂತಿ ಲಕ್ಷ್ಮಿ ತನ್ನ ಮಗುವಿಗೆ ಸರಿಯಾಗಿ ಹಾಲುಣಿಸಲು ಸಾಧ್ಯವಾಗಿಲ್ಲ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.