ಕೊಡವ ಹಾಕಿ ಉತ್ಸವದ ರೂವಾರಿ ಪಾಂಡಂಡ ಕುಟ್ಟಪ್ಪ ನಿಧನ
ಮಡಿಕೇರಿ, ಮೇ 7: ಕೊಡಗು ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ರೂವಾರಿ ಎನ್ನಲಾದ ಪಾಂಡಂಡ ಕುಟ್ಟಪ್ಪ ಅವರು ವಯೋಸಹಜ ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ನಿವೃತ್ತ ಎಸ್ಬಿಐ ಮ್ಯಾನೇಜರ್ ಮತ್ತು ಹಾಕಿ ರೆಫ್ರಿ ಆಗಿದ್ದ ಕುಟ್ಟಪ್ಪ ಅವರ ಪ್ರಯತ್ನದ ಫಲವಾಗಿ ಮೊಟ್ಟ ಮೊದಲು 1997 ರಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಆರಂಭಗೊಂಡಿತು. ಈ ಉತ್ಸವಕ್ಕೆ ಕುಟ್ಟಪ್ಪ ಹಾಗೂ ಅವರ ಸಹೋದರ ಹಣಕಾಸು ವೆಚ್ಚ ಭರಿಸಿದ್ದರು. ಅಂದು ಕೇವಲ 60 ತಂಡಗಳಿಂದ ಆರಂಭಗೊಂಡ ಪಾಂಡಂಡ ಕಪ್ ಹಾಕಿ ಕ್ರೀಡಾ ಉತ್ಸವ ಇಂದು 350 ಕ್ಕೂ ಅಧಿಕ ತಂಡಗಳನ್ನು ಹೊಂದಿದೆ.
ಸ್ನೇಹ, ಸೋದರತ್ವದ ಕ್ರೀಡಾಕೂಟ
ಹಾಕಿಯ ತವರೂರು ಎಂದೇ ಖ್ಯಾತಿ ಪಡೆದಿರುವ ಈ ಪುಟ್ಟ ಜಿಲ್ಲೆಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಜಿಲ್ಲೆಯ ಕ್ರೀಡಾ ಪ್ರೇಮಿಗಳಿಗೆ ಪ್ರತಿ ವರ್ಷವೂ ಮಾರ್ಚ್-ಎಪ್ರಿಲ್ ನಲ್ಲಿ ಒಂದೂವರೆ ತಿಂಗಳ ಕಾಲ ಮನರಂಜನೆ ನೀಡುತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಭೀಕರ ಮಳೆ ಹಾಗೂ ಭೂ ಕುಸಿತದ ಕಾರಣದಿಂದಾಗಿ ಕ್ರೀಡಾ ಕೂಟ ಸ್ಥಗಿತಗೊಂಡಿದೆ.
ಈ ಕ್ರೀಡಾ ಉತ್ಸವ ಕೊಡವ ಕುಟುಂಬಗಳ ನಡುವೆ ಸ್ನೇಹ, ಸಹೋದರತ್ವ ಬೆಸೆಯುತ್ತಿದೆ ಎಂದು ದಶಕದ ಹಿಂದೆ ವರದಿಗಾರನಿಗೆ ನೀಡಿದ ಸಂದರ್ಶನದಲ್ಲಿ ಕುಟ್ಟಪ್ಪ ಅಭಿಪ್ರಾಯಿಸಿದ್ದರು.
ಪಾಂಡಂಡ ಕುಟ್ಟಪ್ಪ ಅವರಿಂದ ಆರಂಭ
ಅಲ್ಲದೆ ಸಣ್ಣದಾಗಿ ಆರಂಭಗೊಂಡ ಈ ಕ್ರೀಡಾಕೂಟವು ಬೃಹತ್ ಆಗಿ ಬೆಳೆದು ವಿಶ್ವದ ಅತಿ ದೊಡ್ಡ ಕೌಟುಂಬಿಕ ಹಾಕಿ ಕೂಟ ಎಂಬ ಹೆಗ್ಗಳಿಕೆಯೊಂದಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿರುವ ಬಗ್ಗೆಯೂ ಸಂತಸ ಹಂಚಿಕೊಂಡಿದ್ದರು.
ಈ ವಾರ್ಷಿಕ ಕ್ರೀಡಾಕೂಟದಲ್ಲಿ ವಯಸ್ಸು ಮತ್ತು ಲಿಂಗ ಬೇಧವಿಲ್ಲದೆ 8 ವರ್ಷ ವಯಸ್ಸಿನವರಿಂದ 70 ವರ್ಷದವರೂ ಪಾಲ್ಗೊಳ್ಳಲು ಅವಕಾಶ ನೀಡಿರುವುದು ವಿಶೇಷವಾಗಿದೆ. ಈ ಕ್ರೀಡಾಕೂಟವು ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆದಿದ್ದು, ಪ್ರತೀ ಕ್ರೀಡಾಕೂಟದಲ್ಲೂ 25-30 ಸಾವಿರ ಜನ ವೀಕ್ಷಕರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತದೆ.
ಮಾಜಿ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಭಾಗಿಯಾಗಿದ್ದರು
ಈ ಕೂಟದಲ್ಲಿ ಪಾಲ್ಗೊಳ್ಳಲು ಕೊಡಗಿನ ಹೊರಗಿನಿಂದಲೂ ನೂರಾರು ಕಿಲೋಮೀಟರ್ ಪ್ರಯಾಣಿಸಿ ಆಟಗಾರರು ಬರುತ್ತಾರೆ. ಎರಡು ಅಥವಾ ಮೂರು ಮೈದಾನಗಳಲ್ಲಿ ನಡೆಸಲಾಗುವ ಈ ಕ್ರೀಡಾ ಕೂಟದ ಅತಿಥ್ಯವನ್ನು ಮೊದಲೇ ನಿಗದಿಪಡಿಸಲಾದ ಕುಟುಂಬವು ವಹಿಸಿಕೊಳ್ಳುತ್ತದೆ. ವಿವಿಧ ಸಮಿತಿಗಳನ್ನು ರಚಿಸಿ ದಾನಿಗಳಿಂದ, ಕಂಪನಿಗಳಿಂದ ಹಣಕಾಸಿನ ನೆರವು ಕ್ರೋಢೀಕರಿಸಲಾಗುತ್ತದೆ. ಈ ಕ್ರೀಡಾಕೂಟದ ವೆಚ್ಚ ಐವತ್ತು ಲಕ್ಷ ರುಪಾಯಿಗಳಿಗಿಂತಲೂ ಹೆಚ್ಚಾಗಿದ್ದು, ರಾಜ್ಯ ಸರ್ಕಾರವೂ ಈ ಹಿಂದೆ 10 ಲಕ್ಷ ರೂಪಾಯಿಗಳ ಅನುದಾನ ನೀಡಿತ್ತು. 2016 ರ ಮೇ ತಿಂಗಳಿನಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಶಾಂತೆಯಂಡ ಕಪ್ ಹಾಕಿ ಕ್ರೀಡಾಕೂಟದಲ್ಲಿ ಅಂದಿನ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕೌಟುಂಬಿಕ ಉತ್ಸವದ ರೂವಾರಿ ಕುಟ್ಟಪ್ಪ ನಿಧನ
ಕೊಡಗಿನ ಜನತೆಯ ಉತ್ಸಾಹ ಕಂಡ ಸಚಿವರು ಕೊಡಗಿನಲ್ಲಿ ಹಾಕಿ ಅಕಾಡೆಮಿ ಮತ್ತು ಡಿಫೆನ್ಸ್ ಅಕಾಡೆಮಿ ಸ್ಥಾಪಿಸುವ ಕುರಿತು ಪ್ರಯತ್ನಿಸುವುದಾಗಿ ಹೇಳಿದ್ದರು. 2020 ರ 23 ನೇ ವರ್ಷದ ಕೌಟುಂಬಿಕ ಹಾಕಿ ಕ್ರೀಡಾ ಕೂಟದ ಆತಿಥ್ಯವನ್ನು ಮುಕ್ಕಾಟಿರ ಕುಟುಂಬವು ವಹಿಸಿಕೊಂಡಿದೆ. ಆದರೆ ಈ ವರ್ಷವೂ ಮಳೆ ಹಾಗೂ ಭೂ ಕುಸಿತದಿಂದಾಗಿ ಕ್ರೀಡಾಕೂಟ ನಡೆಯಲಿಲ್ಲ.
ಆದರೆ ಕೌಟುಂಬಿಕ ಉತ್ಸವದ ರೂವಾರಿ ಕುಟ್ಟಪ್ಪ ಅವರ ಹೆಸರು ಪ್ರತೀ ವರ್ಷದ ಹಾಕಿ ಉತ್ಸವದಲ್ಲೂ ಚಿರಸ್ಥಾಯಿಯಾಗಿ ನಿಲ್ಲಲಿದೆ. ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿರುವ ಕುಟ್ಟಪ್ಪ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನವರಂಗ್ ಸಮೀಪದ ಹರಿಶ್ಚಂದ್ರ ಘಾಟ್ ನಲ್ಲಿ ನಡೆಯಲಿದೆ.