ಕೊಡಗು; ಗಜಗಿರಿ ಬೆಟ್ಟದಲ್ಲಿ ಇಂಗು ಗುಂಡಿ ಮುಚ್ಚಿದ ಅರಣ್ಯ ಇಲಾಖೆ
ಮಡಿಕೇರಿ, ಜೂನ್ 10; ಕಳೆದ ಮೂರು ವರ್ಷಗಳಿಂದ ಪುಟ್ಟ ಪ್ರವಾಸಿ ಜಿಲ್ಲೆ ಕೊಡಗು ಭೂ ಕುಸಿತ ಮತ್ತು ತೀವ್ರ ಮಳೆಯಿಂದ ತತ್ತರಿಸಿದೆ. ಭೂ ಕುಸಿತದಿಂದಲೇ ನೂರಾರು ಜನರು ಮನೆ ಕಳೆದುಕೊಂಡಿದ್ದಾರೆ. ಆಸ್ತಿಗಳಿಗೆ ಹಾನಿಯಾಗಿದೆ.
ಈ ಬಾರಿಯೂ ಆಗಸ್ಟ್ ತಿಂಗಳಿನಲ್ಲಿ ಸಂಭಾವ್ಯ ಭೂ ಕುಸಿತ ತಡೆಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ನಿರ್ಮಿಸಲಾಗಿದ್ದ ಸುಮಾರು 800 ಇಂಗುಗುಂಡಿಗಳನ್ನು ಮುಚ್ಚಿಸಿದೆ.
ತಲಕಾವೇರಿ ಭೂಕುಸಿತ; 10 ದಿನಗಳ ನಂತರ ಮೂರನೇ ಮೃತದೇಹ ಪತ್ತೆ
ಅನಾಹುತದ ಬಳಿಕ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ಮಾರ್ಗದರ್ಶನದಲ್ಲಿ ಬ್ರಹ್ಮಗಿರಿ ಹಾಗೂ ಗಜಗಿರಿ ಬೆಟ್ಟದಲ್ಲಿದ್ದ ಇಂಗುಗುಂಡಿಗಳನ್ನು ಕಾರ್ಮಿಕರ ಸಹಾಯದಿಂದ ಮುಚ್ಚಿಸಿದೆ.
ಕೊಡಗು; ಮುಂಗಾರು ಎದುರಿಸಲು ಸಜ್ಜಾದ ಅಧಿಕಾರಿಗಳು
"ಭೂಕುಸಿತ ತಡೆಗಟ್ಟಲು ಹಣ್ಣಿನ ಗಿಡಗಳನ್ನು ನೆಟ್ಟು, ಹುಲ್ಲಿನ ಬೀಜಗಳನ್ನು ಬಿತ್ತಲಾಗಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ನೈಸರ್ಗಿಕವಾಗಿ ಬರುವಂತಹ ಆಮೆ, ಸೀಬೆ ಮುಂತಾದ ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ, ನಾಟಿ ಮಾಡಲಾಗಿದೆ. ವೆಟ್ರಿವೇರ ಜಾತಿಯ ಹುಲ್ಲನ್ನು ನಾಟಿ ಮಾಡಲಾಗಿದೆ. ಹಸಿರೀಕರಣ ಹೆಚ್ಚಿಸಲು ನೇರಳೆ, ಸೀಬೆ ಗಿಡಗಳ ಜೊತೆಗೆ 10 ಕೆಜಿ ಬಿದಿರು ಬೀಜಗಳನ್ನು ನಾಟಿ ಮಾಡಲಾಗಿದೆ" ಎಂದು ಅರಣ್ಯಾದಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲಾಡಳಿತ ಮುಂಗಾರು ಎದುರಿಸಲು ಸನ್ನದ್ಧ
ಕಳೆದ ವರ್ಷದ ಆಗಸ್ಟ್ 6ರಂದು ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತದಿಂದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿ ಐವರು ಭೂಸಮಾಧಿ ಆಗಿದ್ದರು. ಬೆಟ್ಟ ಕುಸಿಯಲು ಗಜಗಿರಿ ಬೆಟ್ಟದಲ್ಲಿ ತೆಗೆದಿದ್ದ ಇಂಗುಗುಂಡಿಗಳೇ ಕಾರಣವೆಂದು ಸರ್ಕಾರವು ನೇಮಿಸಿದ್ದ ತಜ್ಞರು ವರದಿ ನೀಡಿದ್ದರು.
ಮಳೆಗಾಲದಲ್ಲಿ ನೀರು ಒಳಕ್ಕೆ ಇಳಿದು ಬೆಟ್ಟವು ಸಡಿಲಗೊಂಡು, ಅತಿಯಾದ ಮಳೆಯಿಂದ ಒತ್ತಡ ಉಂಟಾಗಿ ಭೂಕುಸಿತವಾಗಿದೆ ಎಂದು ತಜ್ಞರೂ 16 ಪುಟಗಳ ವರದಿ ಸಲ್ಲಿಸಿದ್ದರು. ತಜ್ಞರಾದ ಕಪಿಲ್ ಸಿಂಗ್ ಹಾಗೂ ಕಮಲ್ ಕುಮಾರ್ ಅವರು ತಲಕಾವೇರಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಬೆಟ್ಟದ ಮೇಲೆ ಉಂಟಾದ ಬಿರುಕು, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಅನಗತ್ಯ ಮಾನವ ಹಸ್ತಕ್ಷೇಪ, ಅಧಿಕ ಮಳೆಯಿಂದ ಭೂಕುಸಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.
2015-16 ಹಾಗೂ 2016-17ನೇ ಸಾಲಿನಲ್ಲಿ ನಿರ್ಮಿಸಿದ್ದ ಇಂಗುಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆಯೂ ಭಾಗಮಂಡಲದಲ್ಲಿ ನಡೆದಿದ್ದ ಈ ಹಿಂದೆ ನಡೆದಿದ್ದ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು.
ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು ಎನ್ಡಿಆರ್ಎಫ್ ಸಹ ಜಿಲ್ಲೆಯಲ್ಲೇ ಬೀಡುಬಿಟ್ಟಿದೆ. ಸಿದ್ದಾಪುರ ಸಮೀಪದ ಕರಡಿಗೋಡಿನಲ್ಲಿ ಕಾವೇರಿ ನದಿಯಲ್ಲಿ ಪ್ರತಿ ವರ್ಷ ಉಂಟಾಗುವ ಪ್ರವಾಹವನ್ನು ಎದುರಿಸಲು ದೋಣಿಗಳ ಸಹಿತ, ಕಾಳಜಿ ಕೇಂದ್ರಗಳನ್ನೂ ತೆರೆದು ಸಂತ್ರಸ್ಥರಿಗೆ ಆಶ್ರಯ ನೀಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ತಲಕಾವೇರಿ, ಭಾಗಮಂಡಲ ಹಾಗೂ ಚೇರಂಗಾಲದ ಭೂಕುಸಿತ ಸ್ಥಳಕ್ಕೆ ರಕ್ಷಣಾ ತಂಡವು ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದೆ. ಹಿರಿಯ ಭೂ ವಿಜ್ಞಾನಿಯೊಬ್ಬರ ಪ್ರಕಾರ ಈ ವರ್ಷ ಕೊಡಗಿನಲ್ಲಿ ಭೂಕುಸಿತದ ಸಾಧ್ಯತೆಗಳು ಕಡಿಮೆ ಇವೆ.
Recommended Video