ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು
ಚೆಟ್ಟಳ್ಳಿ (ಕೊಡಗು), ಜನವರಿ 26: ಕೊಡಗಿನಲ್ಲೀಗ ಕಾಫಿ ಕುಯ್ಯಿಲಿನ ಸಮಯ. ಈ ಸಂದರ್ಭ ಕೊಡಗಿನ ಕಾಫಿಯ ಬಗ್ಗೆ ತಿಳಿಯಲು ಬಂದ ವಿದೇಶಿಗರು ಕಾಫಿ ತೋಟದಲ್ಲೆಲ್ಲಾ ಸುತ್ತಾಡಿ... ಕಾಫಿ ಕೊಯ್ದು.... ಕಣದಲ್ಲಿ ಒಣಗಿದ ಕಾಫಿಗೆಲ್ಲ ಕಾಲುಕೊಟ್ಟು... ಚೀಲಕ್ಕೆ ತುಂಬಿ... ಎಂಜಾಯ್ ಮಾಡಿದರು.
ಅರ್ಜೈಂಟೀನಾ ಇರಾಡೊ ಸಂತ ಕರ್ಟ್ ಎಂಬ ಯುವಕ ಹಾಗು ಇಂಗ್ಲೆಂಡಿನ ಸರಹ ಸಂತ ಕರ್ಟ್ ಎಂಬ ಮಹಿಳೆ ಇಬ್ಬರು ಸೇರಿ ಸ್ಫೆನಿನಲ್ಲಿ ಕಾಫಿ ಶೋಶಲ್ ಎನ್ನುವ ಕಾಫಿ ಕೆಫೆಯನ್ನು ಹಲವು ವರ್ಷಗಳಿಂದ ನಡೆಸುತಿದ್ದಾರೆ.
ಇವರು ವಿದೇಶದಲ್ಲಿ ಬೆಳೆಯುವ ಕಾಫಿಯ ಬೀಜವನ್ನು ಖರೀದಿಸಿ, ಅದರಲ್ಲಿ ತಾಜಾ ಕಾಫಿಯನ್ನು ತಯಾರಿಸಿ ಮಾರಾಟ ಮಾಡುತಿದ್ದಾರಂತೆ.
ಕೊಡಗಿಗೆ ಕರೆತಂದ ಕಾಫಿಯ ಘಮ
ಭಾರತದಲ್ಲಿ ಉತ್ತಮ ಗುಣಮಟ್ಟದ ಕಾಫಿ ದೊರೆಯುವ ಬಗ್ಗೆ ಮಾಹಿತಿ ಪಡೆದ ವಿದೇಶಿಗರು ಇದರ ಮೂಲ ಹುಡುಕಿಕೊಂಡು ಕೊಡಗಿಗೆ ಕಳೆದೆರಡು ದಿನಗಳ ಹಿಂದೆ ಬಂದಿದ್ದಾರೆ. ಅಮ್ಮತ್ತಿಯ ಕುಂಞಂಡ ಮಾಚಯ್ಯ ಹಾಗು ಸಿದ್ದಾಪುರದ ರಿವರ್ ಸೈಡ್ ಕಾಫಿ ಎಸ್ಟೇಟಿನ ಮಾಲೀಕರಾದ ಚೇನಂಡ ಚುಮ್ಮಿದೇವಯ್ಯನರ ಕಾಫಿ ತೋಟಗಳಲ್ಲಿ ಇವರು ಬೀಡು ಬಿಟ್ಟಿದ್ದಾರೆ.
ಕಾಫಿ ಜತೆ ಎಂಜಾಯ್
ಗಿಡಗಳಲ್ಲಿ ಹಣ್ಣಾಗಿದ್ದ ಕಾಫಿಯನ್ನು ವಿದೇಶಿಗರು ಕುಯಿದರು.. ಕಣದಲ್ಲಿ ಒಣಗುತಿದ್ದ ಕಾಫಿಗಳಿಗೆ ಗೋರಮಣೆಯನ್ನು ಎಳೆದರು.. ಅವುಗಳನ್ನು ಚೀಲಕ್ಕೆ ತುಂಬಿ ಎಂಜಾಯ್ ಮಾಡ ತೊಡಗಿದರು.
ಚುಮ್ಮಿದೇವಯ್ಯನವರಿಂದ ಕಾಫಿ ತೋಟದ ನಿರ್ವಹಣೆಯ ಬಗ್ಗೆ, ನೀರಿನ ವ್ಯವಸ್ಥೆ, ಗೊಬ್ಬರ ಹಾಗೂ ಜಾಷಧಿ, ಕಾಫಿ ಕುಯಿಲು, ಒಣಗಿಸುವ ಹಂತ, ಸಂಗ್ರಹಣೆಯ ಬಗ್ಗೆ ಎಲ್ಲಾ ಮಾಹಿತಿ ಪಡೆದುಕೊಂಡರು. ಕಾಫಿಯ ಪಲ್ಪಿಂಗ್ ಬಗ್ಗೆಯೂ ಅವರು ಮಾಹಿತಿ ಪಡೆದರು..
ಸಾವಯವ ಕಾಫಿಗೆ ಬೇಡಿಕೆ
ವಿದೇಶಗಳಲ್ಲಿ ಕಾಫಿಯನ್ನು ವೈಜ್ಞಾನಿಕವಾಗಿ ಹಾಗು ರಾಸಾಯನಿಕಗಳನ್ನು ಬಳಸಿಯೇ ಬೆಳೆಸುತ್ತಿದ್ದಾರೆ. ಹಾಗಾಗಿ ವಿದೇಶಗಳಲ್ಲಿ ಸಾವಯನ ಗೊಬ್ಬರದಿಂದ ಬೆಳೆಸುವ ಕಾಫಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅರ್ಜೆಂಟೀನಾದ ಇರಾಡೊ ಸಂತ ಕರ್ಟ್.
ಭಾರತದ ಕಾಫಿಗೆ ವಿದೇಶಿ ಮಾರುಕಟ್ಟೆ
"ನಾವು ಭಾರತದ ಕಾಫಿಯ ಗುಣ ಮಟ್ಟದ ಬಗ್ಗೆ ತಿಳಿಯಲು ಕೊಡಗಿಗೆ ಬಂದಿದ್ದೇವೆ. ಇಲ್ಲಿ ಕಾಫಿಯನ್ನು ಸಂಶೋಧಿಸಿ ಕಾಫಿ ಬೆಳೆಗಾರನಿಂದ ನೇರವಾಗಿ ಕಾಫಿಯನ್ನು ಪಡೆದು ವಿದೇಶದಲ್ಲಿ ಮಾರುಕಟ್ಟೆಯನ್ನು ಸೃಷ್ಠಿಸುವ ಆಲೋಚನೆ ಇದೆ ಎಂದು ಅವರು ಹೇಳಿದರು.
ಟಸ್ಕರ್, ಸಿವೆಟ್ ಕಾಫಿ
ಅಮ್ಮತ್ತಿಯ ಕುಂಞಂಡ ಮಾಚಯ್ಯ ನವರ ತೋಟದಲ್ಲಿ ಆನೆಯ ಲದ್ದಿಯಲ್ಲಿ ಹಾಗು ಕಾಡುಬೆಕ್ಕು ತಿಂದು ಹಾಕಿದ ಬೀಜಗಳು ಅವರ ಕಣ್ಣಿಗೆ ಕಾಣಿಸಿವೆ. ಇವುಗಳನ್ನು ಕ್ರಮವಾಗಿ ಟಸ್ಕರ್ ಕಾಫಿ ಹಾಗು ಸಿವೆಟ್ ಕಾಫಿ ಎನ್ನುತ್ತಾರೆ. ವಿದೇಶದಲ್ಲಿ ಇವುಗಳಿಗೆ ಭಾರೀ ಬೇಡಿಕೆ ಇದೆ ಎಂದು ಅವರು ಹೇಳಿದ್ದಾರೆ.
ಹಿಂದೆ ಕೊಡಗಿನಲ್ಲಿ ಬೆಲ್ಲದ ಕಾಫಿಯನ್ನು ಬಳಸುತಿದ್ದ ಬಗ್ಗೆ ಚುಮ್ಮಿ ಪೂವಯ್ಯನವರು ವಿವರಿಸಿದ್ದಾರೆ. ಈ ಬಲ್ಲೆ ಕಾಫಿಯನ್ನು ವಿದೇಶಿಗರು ಸವಿದು ನಿರ್ಗಮಿಸಿದ್ದಾರೆ.