ಕೊಡಗು: ಮಾದಕ ವಸ್ತು ಮಾರಾಟಕ್ಕೆ ಹೊಂಚು ಹಾಕಿದ್ದ ವಿದೇಶಿಗನ ಬಂಧನ
ಮಡಿಕೇರಿ, ಸೆಪ್ಟೆಂಬರ್ 22: ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ವಿದೇಶಿ ಪ್ರಜೆಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 28 ರಂದು ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ರಾಜಾಸೀಟ್ ಸಮೀಪದ ಮುಖ್ಯ ರಸ್ತೆಯಲ್ಲಿ ಬೆಂಗಳೂರಿನಿಂದ ಕಾರ್ ನಲ್ಲಿ ಬಂದು ಅಯ್ಯಂಗೇರಿಯ ವ್ಯಕ್ತಿಗಳಿಗೆ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು, ಅ್ಯಂಪಿ ಟೆಮ್ನೈನ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು.
ಮಾಲು ಸಹಿತ ಪತ್ತೆ ಹಚ್ಚಿ ಮೂರು ಆರೋಪಿಗಳನ್ನು ಡಿಸಿಐಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಘಟನೆಯ ಸಮಯದಲ್ಲಿ ಮಾದಕ ವಸ್ತು ಸರಬರಾಜಿಗೆ ಬಂದ ಕಾರು ಸಹಿತ ಇತರ ಆರೋಪಿಗಳು ತಪ್ಪಿಸಿಕೊಂಡಿದ್ದರು.
ಉಳಿದ ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆ
ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಸ್ಥಳೀಯ ಆರೋಪಿಗಳೊಂದಿಗೆ ಬೆಂಗಳೂರು, ಕೊಲ್ಕತ್ತಾ ಹಾಗೂ ಕೇರಳ ರಾಜ್ಯ ಮತ್ತು ವಿದೇಶಿ ಪ್ರಜೆ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದುದ್ದರಿಂದ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದ ಪೊಲೀಸ್ ಅಧೀಕ್ಷಕರು ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸುವ ಬಗ್ಗೆ ಡಿಸಿಐಬಿ ನಿರೀಕ್ಷಕರ ತಂಡಕ್ಕೆ ಆದೇಶ ನೀಡಿದ್ದರು.
ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಪ್ರಜೆ ಬಂಧನ
ಪ್ರಕರಣದ ಆರೋಪಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಡಿಸಿಐಬಿ ನಿರೀಕ್ಷಕರ ತಂಡ ಸೆ.14 ರಂದು ಬೆಂಗಳೂರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಸೆ.22 ರಂದು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಪ್ರಜೆ ಓಪೋಂಗ್ ಸ್ಯಾಮ್ ಸ್ಯನ್, (29 ವರ್ಷ) ರನ್ನೂ ಬೆಂಗಳೂರಿನ ಹೊರಮಾವಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿರುತ್ತಾರೆ.
ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯರಿಂದ ಕಾರ್ಯಾಚರಣೆ
ಪೊಲೀಸ್ ಅಧೀಕ್ಷರಾದ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ, ಸಬ್ ಇನ್ಸ್ ಪೆಕ್ಟರ್ ಎಚ್.ಬಿ.ಚಂದ್ರಶೇಖರ್, ಸಿಬ್ಬಂದಿಗಳಾದ ಎಎಸ್.ಐ ಹಮೀದ್, ಬಿ.ಎಲ್.ಯೋಗೇಶ್ ಕುಮಾರ್, ಸುರೇಶ್, ಸಜಿ, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್. ಶರತ್ ರೈ, ಹಾಗೂ ಚಾಲಕ ಶಶಿಕುಮಾರ್ ಮತ್ತು ಸಿಡಿಆರ್ ಸೆಲ್ ನ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Recommended Video
ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕಬೇಕು
ಈ ತಂಡಕ್ಕೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಹಸ್ಯವಾಗಿ ಮಾಹಿತಿ ನೀಡಿ ಮಾದಕ ವಸ್ತುಗಳ ಬಳಕೆ, ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಮನವಿ ಮಾಡಿದ್ದಾರೆ.