ಕೊಡಗಿನಲ್ಲಿ ಮತ್ತೆ ಮನೆ ನಿರ್ಮಿಸುವ ನಿರಾಶ್ರಿತರ ಕನಸು ನನಸಾಗುವುದೇ?
ಮೈಸೂರು, ಆಗಸ್ಟ್.26: ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಹೊಂದಿರುವ ಮಡಿಕೇರಿ ಅಕ್ಷರಶಃ ಕೇವಲ 3 ದಿನಗಳಲ್ಲಿ ಸುರಿದ ಅತಿವೃಷ್ಟಿಮಳೆಗೆ ನಲುಗಿ ಹೋಗಿದೆ. ಎಲ್ಲಿ ನೋಡಿದರಲ್ಲಿ ಬಿದ್ದ ಮರಗಳು, ಬೆಟ್ಟಗುಡ್ಡಗಳು, ಕೊಚ್ಚೆಮಯವಾದ ರಸ್ತೆಗಳು, ಇದು ನಾವು ನೋಡಿದ ಕೊಡಗೇನಾ ಎಂದು ಭಾಸವಾಗದೇ ಇರಲಾರದು.
ವರುಣನ ಆರ್ಭಟಕ್ಕೆ ಕೊಡಗು ಸಂಪೂರ್ಣ ಕೊಚ್ಚಿ ಹೋಗಿದೆ. ಮನೆ ಉಳ್ಳವರು, ಬಾಡಿಗೆದಾರರು ತಮ್ಮ ಸೂರುಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇವರೆಲ್ಲರಿಗೂ ಈಗ ನಿರಾಶ್ರಿತರಿಗಾಗಿ ಒದಗಿಸಿರುವ ಸೂರೇ ಗತಿ ಎಂಬಂತಾಗಿದೆ.
ಕೊಡಗಿನಲ್ಲಿ ಆದ ನಷ್ಟದ ಅಂದಾಜು ಅಂಕಿ-ಅಂಶಗಳು
ಅವರ ಮುಂದಿರುವ ಪ್ರಶ್ನೆಯೂ ಅದೇ... ಎಷ್ಟು ದಿನ ನಾವು ಇಲ್ಲಿರುವುದು? ನಮ್ಮ ಬದುಕು ಮುಂದೇನು? ಮನೆ ಕಟ್ಟಿಸಿಕೊಡುವವರು ಯಾರು? ಯಾರನ್ನು ಕೇಳಬೇಕು? ಹೀಗೆ...ಆದರೆ ಸರ್ಕಾರಕ್ಕೆ ಈಗ ಎದುರಾಗಿರುವ ಸವಾಲು ಕೂಡ ಅದೇ ಎನ್ನಬಹುದೇನೋ.
ನಿರಾಶ್ರಿತರು ಮನೆ, ಸಾಮಾನುಗಳನ್ನು ಕಳೆದುಕೊಂಡು ಯಾರಪ್ಪ ಗತಿಯೆಂದು ತಲೆ ಮೇಲೆ ಕೈ ಹೊತ್ತು ಕುಳಿತು, ನಮಗೆ ಇಲ್ಲಿಯೇ ಸೂರು ನಿರ್ಮಿಸಬೇಕೆಂಬ ಪಟ್ಟು ಹಿಡಿದರೇ, ಅದು ದೊಡ್ಡ ಸಮಸ್ಯೆ.
ಮಡಿಕೇರಿ : ವೈರಲ್ ಆಗಿರುವ ಮನೆ ಕುಸಿತದ ವಿಡಿಯೋ ಹಿಂದಿನ ಕಥೆ!
ಹೌದು, ಎಲ್ಲಿ ನೋಡಿದರಲ್ಲಿ ಕಾಫಿ ತೋಟ, ಅರಣ್ಯದಿಂದ ತುಂಬಿ ತುಳುಕುತ್ತಿರುವ ಖಾಸಗಿಯೇತರ ಜಾಗವೇ ಹೆಚ್ಚಿರುವ ಕೊಡಗಿನಲ್ಲಿ ಈ ನಿರಾಶ್ರಿತರಿಗೆ ಉಳಿದುಕೊಳ್ಳಲು ಸರಕಾರಿ ಸ್ವಾಮ್ಯದ ಜಾಗವೇ ಇಲ್ಲ.
ಮಹಾಮಳೆಗೆ ಸಿಲುಕಿದವರ ರಕ್ಷಣೆ ಆಯ್ತು, ಪರಿಹಾರ, ಊಟ - ತಿಂಡಿ ಎಲ್ಲವೂ ಸಿಕ್ಕಾಯ್ತು? ಮುಂದೆ ಎದುರಾಗಿರುವ ಸಮಸ್ಯೆ, ಸಡಿಲಗೊಂಡಿರುವ ಮಡಿಕೇರಿಯ ಸುತ್ತಮುತ್ತಲ ಜಾಗಗಳಲ್ಲಿ ಮನೆ ನಿರ್ಮಾಣ. ಆದರೆ ಇದು ಅಸಾಧ್ಯವೇ ಸರಿ.
ಸಿಎಂ ಪರಿಹಾರ ನಿಧಿಗೆ ಹರಿದುಬಂದ ದೇಣಿಗೆ: ಜನತೆಗೆ ಲೆಕ್ಕಕೊಟ್ಟ ಎಚ್ಡಿಕೆ
ಇದಕ್ಕೆ ಪುಷ್ಟಿಕೊಡುವಂತೆ ಕಳೆದ ವಾರವಷ್ಟೇ ಭೇಟಿಯಿತ್ತ ವಿಜ್ಞಾನಿಗಳ ತಂಡ ಕೊಡಗಿನಲ್ಲಿ ವಾಸ ಅನರ್ಹ ಎಂದು ಬೇರೇ ಘೋಷಿಸಿದ್ದಾಯಿತು. ಈ ಮಾತುಗಳು ಇಲ್ಲಿನ ಜನರನ್ನು ಒಂದು ಕ್ಷಣ ಗಾಬರಿ ಬೀಳಿಸುವಂತೆ ಮಾಡಿದೆ. ಅಂದಹಾಗೆ ಈ ಲೇಖನದಲ್ಲಿ ಜನರ ಅಭಿಪ್ರಾಯ, ಅಲ್ಲಿನ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ಕೊಡಲಾಗಿದೆ..
ಮನೆ ನಿರ್ಮಾಣ ಅಸಾಧ್ಯ
ಕೊಡಗು ಜಿಲ್ಲಾಡಳಿತ ಮನೆ ಕಳೆದುಕೊಂಡ ಅನೇಕ ಮಂದಿಗೆ ಮನೆ ಒದಗಿಸುವ ಕಾಯಕಕ್ಕೆ ಕೈ ಹಾಕಿದೆ. ಆದರೆ ಕೊಡಗಿನಲ್ಲಿಯೇ ಮತ್ತೆ ಮನೆ ನಿರ್ಮಾಣ ಮಾಡಿದರೆ ಸಡಿಲಗೊಂಡ ಭೂ ಪ್ರದೇಶವಾದ್ದರಿಂದ ಮತ್ತೆ ಗಟ್ಟಿ ನಿಲ್ಲದು ಎಂಬುದು ಕೊಡಗಿನ ಕಂಟ್ರ್ಯಾಕ್ಟರ್ ಒಬ್ಬರ ಅಭಿಪ್ರಾಯ.
ಇದನ್ನು ಮೀರಿಯೂ ಮನೆ ನಿರ್ಮಾಣವಾದರೇ ಮುಂದೊಂದು ದಿನ ಅಪಾಯ ಮರುಕಳಿಸಿದರೆ ಅಚ್ಚರಿಪಡುವಂತಹದ್ದೇನೂ ಇಲ್ಲ.
ಕಣ್ಣಾರೆ ನೋಡಬೇಕು
ಮಾತಿನಲ್ಲಿ ಹೇಳುವುದಕ್ಕಿಂತ ಕಣ್ಣಾರೆ ಕಂಡರೆ ಮಾತ್ರ ಮಡಿಕೇರಿಯ ಸುತ್ತಮುತ್ತಲಿನ ಭಾಗದ ಮಳೆಯ ಅಸ್ಮಿತೆ ಅರಿಯಲು ಸಾಧ್ಯ. ಮಳೆಯ ರಭಸಕ್ಕೆ ಕಾಂಕ್ರೀಟ್ ರಸ್ತೆಗಳು ಕೊಚ್ಚಿಹೋಗಿವೆ. ಆದರೆ ಇದನ್ನೆಲ್ಲಾ ಜಿಲ್ಲಾಡಳಿತ ರಿಪೇರಿ ಮಾಡಿಸಿಕೊಡುವುದು ಅಸಾಧ್ಯ.
ನಾವು ಅಲ್ಲೇ ಇರುತ್ತೇವೆ
ಮನೆ ಕಳೆದುಕೊಂಡ ಹಲವರದ್ದು ಗೊಂದಲ ಮನಸ್ಥಿತಿ. ಮನೆಯೇನೋ ಹೋಗಿದೆ. ಸರಕಾರ ಎಲ್ಲಿ ಹೇಳುತ್ತೋ ಅಲ್ಲಿ ವಾಸ ಮಾಡಲೇಬೇಕು. ಆದರೆ ಹತ್ತಿರ ಒದಗಿಸಿಕೊಡಿ ಎಂಬುದು ಕೆಲವರ ಮನಸ್ಥಿತಿಯಾದರೆ, ಮತ್ತೆ ಹಿರಿಯರನ್ನು ಪ್ರಶ್ನೆ ಮಾಡಿದಾಗ ಅವರ ವರಸೆಯೇ ಬೇರೆ.
ನಾವು ತಲಾತಂರದಿಂದ ಹುಟ್ಟಿ ಬೆಳೆದ ಜಾಗ ಅದು. ಹೇಗೆ ಬಿಟ್ಟು ಹೋಗಲು ಸಾಧ್ಯ. ನಮ್ಮ ಮನೆ ದೇವರು, ದೇವಸ್ಥಾನ ಅಲ್ಲಿಯೇ ಇದೆ. ಇಲ್ಲಿಯೇ ಹತ್ತಿರದಲ್ಲಿ ನಿರ್ಮಿಸಿಕೊಡುವಂತೆ ನೀವೇ ತಿಳಿಸಿ ಎಂದು ಮಾಧ್ಯಮದವರ ಎದುರಿಗೆ ಕಣ್ಣೀರಿಡುತ್ತಾರೆ.
ಬೆಳೆ ಬೆಳೆಯಲು ಸಾಧ್ಯವೇ?
ಮಹಾಮಳೆಯ ವ್ಯಾಪಕತೆಗೆ ರೈತರು, ಕಾಫಿ ತೋಟಗಳ ಮಾಲೀಕರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಒಂದು ವೇಳೆ ಕೇವಲ ಬೆಳೆ ನಾಶವಾಗಿದ್ದರೆ ಕೃಷಿ ಚಟುವಟಿಕೆಯನ್ನು ಮೊದಲಿನಿಂದಲೂ ಆರಂಭಿಸಬೇಕು.
ಸಸಿ ತರಬೇಕು, ನೆಟ್ಟು ಬೆಳೆಸಿ ಪೋಷಿಸಬೇಕು. ಇದಕ್ಕೆ ಕನಿಷ್ಠವೆಂದರೂ ತಗಲುವುದು ಬರೋಬ್ಬರಿ ಐದು ವರುಷಗಳ ಅವಧಿ. ಮಳೆಯ ಅಬ್ಬರಕ್ಕೆ ಮಣ್ಣಿನ ಮೇಲ್ಪದರವು ಕೊಚ್ಚಿ ಹೋಗಿದೆ. ಪೌಷ್ಠಿಕಾಂಶದ ಕೊರತೆಯಿಂದಾಗಿ ಬೆಳೆ ಬೆಳೆಯಲು ಸಾಧ್ಯವೇ ಎಂಬುದು ಇಲ್ಲಿನ ಜನರ ಪ್ರಶ್ನೆ.