ಸರ್ವಧರ್ಮೀಯರ ಐಕ್ಯತೆಗೆ ಇಂಬುಕೊಟ್ಟ ಪರಿಹಾರ ಕೇಂದ್ರಗಳು
ಮೈಸೂರು, ಆಗಸ್ಟ್ 27: ಅಲ್ಲಿ ಚರ್ಚ್ ಇದೆ. ರಾಮ ಮಂದಿರಕ್ಕೆ ಹೊಂದಿಕೊಂಡಂತೆ ಬಲಬದಿಯಲ್ಲೇ ಮುಸಲ್ಮಾನರ ದರ್ಗಾವೂ ಇದೆ. ಅಂದಹಾಗೆ ದರ್ಗಾದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಚರ್ಚ್ ನಲ್ಲಿ ಬಕ್ರೀದ್ ಆಚರಣೆಯಾಯಿತು. ರಾಮ ಮಂದಿರದಲ್ಲಿ ಮುಸಲ್ಮಾನ ಬಂಧುಗಳು ಪ್ರವಾಹ ಪೀಡಿತರಿಗೆ ಸಾಂತ್ವನ ನುಡಿದರು.
ಕೊಡಗಿನ ನಿರಾಶ್ರಿತರ ಶಿಬಿರಗಳಲ್ಲಿ ಸಂಗೀತ, ನೃತ್ಯ, ಯೋಗ...
ಇದೆಲ್ಲ ನಡೆದದ್ದು ಸುಂಟಿಕೊಪ್ಪದಲ್ಲಿರುವ ಪರಿಹಾರ ಕೇಂದ್ರಗಳಲ್ಲಿ. ಒಂದೇ ರಸ್ತೆಯಲ್ಲಿರುವ ಚರ್ಚ್, ರಾಮ ಮಂದಿರ, ದರ್ಗಾ ಎಲ್ಲವೂ ಪರಿಹಾರ ಕೇಂದ್ರಗಳು. ಬದುಕಿನ ಅನಿವಾರ್ಯತೆ ಮುಂದೆ ಜಾತಿ, ಮತ, ಧರ್ಮ ಎಲ್ಲವೂ ಗೌಣವಾಗಿ ಮಾನವೀಯ ಗುಣ ಮಾತ್ರ ಮುಖ್ಯವಾಗುತ್ತದೆ ಎನ್ನುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು.
ಸುಂಟಿಕೊಪ್ಪದಲ್ಲಿ ರಾಮಮಂದಿರ, ಮಸೀದಿ ಹಾಗೂ ಚರ್ಚ್ಗಳಲ್ಲಿ ಜಾತಿ-ಮತವನ್ನು ಗಣನೆಗೆ ತೆಗೆದುಕೊಳ್ಳದೆ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಅಡುಗೆ ಮಾಡಿ ಎಲ್ಲರಿಗೂ ಬಡಿಸಲಾಗುತ್ತಿದೆ. ಎಲ್ಲರೂ ಒಂದೇ ಸೂರಿನಡಿಯಲ್ಲಿ ಸೌಹಾರ್ದತೆಯಿಂದ ದಿನ ಕಳೆಯುತ್ತಿದ್ದಾರೆ.
ಇದು ಹಲವರ ಪ್ರಶಂಸೆಗೆ ಪಾತ್ರವಾಗಿದೆ. ಇಲ್ಲಿರುವ ಪ್ರತಿಯೊಂದು ಪರಿಹಾರ ಕೇಂದ್ರದಲ್ಲಿ ನೂರಾರು ನಿರಾಶ್ರಿತರಿದ್ದಾರೆ. ಸರ್ವಧರ್ಮೀಯರು ಒಟ್ಟಾಗಿ ಊಟ, ತಿಂಡಿ ನಡೆಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಅಲ್ಲದೇ ಇಂತಹ ಕಾಯಕ ನಡೆಸುವಲ್ಲಿ ಜಾತಿ -ಭೇದ ತೊರದೇ ಮುನ್ನುಗ್ಗುತ್ತಿರುವ ಸಂಘ ಸಂಸ್ಥೆಗಳಿಗೂ ಧನ್ಯವಾದ ತಿಳಿಸಿದ್ದಾರೆ.