ರೈಲ್ವೆ ಸಂಪರ್ಕವಿಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿಕೊಳ್ಳಲಿರುವ ಕೊಡಗು
ಮೈಸೂರು, ಜನವರಿ 6: ಕೊಡಗಿನ ಜನತೆಯ ಬಹು ವರ್ಷಗಳ ಕನಸಾದ ರೈಲ್ವೆ ಸಂಪರ್ಕ ಕಲ್ಪಿಸಲು ಕೊನೆಗೂ ಕಾಲ ಕೂಡಿ ಬಂದಿದೆ. ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಅಂತಿಮವಾಗಿ ಸ್ಥಳ ವೀಕ್ಷಣೆ ಮಾಡಿ ವರದಿ ನೀಡುವಂತೆ, ಮೈಸೂರು ರೈಲ್ವೆ ಅಧಿಕಾರಿಗಳಿಗೆ ದೆಹಲಿಯ ಭಾರತೀಯ ರೈಲ್ವೆಯು ಮಂಗಳವಾರ ಸೂಚನೆ ನೀಡಿದೆ.
ಈ ಉದ್ದೇಶಿತ ಮೈಸೂರು ಹಾಗೂ ಕುಶಾಲನಗರ ನಡುವಿನ 87 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ 1854.62 ಕೋಟಿ ರುಪಾಯಿ ವೆಚ್ಚ ಆಗಲಿರುವುದಾಗಿ ರೈಲ್ವೆ ಇಲಾಖೆ ಅಂದಾಜು ಪಟ್ಟಿಯನ್ನೂ ಸಿದ್ಧಪಡಿಸಿದೆ.
ಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ
ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕಳೆದ ಫೆಬ್ರವರಿ 27, 2019 ರಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ನಂತರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೇ ಅಧಿಕಾರಿಗಳು ಸರ್ವೆಯನ್ನೂ ನಡೆಸಿದರು. ನಂತರ ಈ ಯೋಜನೆಯು ವ್ಯವಹಾರಿಕವಾಗಿ ಲಾಭದಾಯಕವಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರಿಂದ ಯೋಜನೆಯೇ ನೆನೆಗುದಿಗೆ ಬಿದ್ದಿತ್ತು.
ರೈಲು ಸಂಚಾರ ಆರಂಭಕ್ಕೆ ಕೊನೆಯ ಹಂತದ ಸರ್ವೆ
ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರೂ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಪ್ರಯತ್ನವನ್ನೂ ನಡೆಸಿದ್ದರು. ಇದೀಗ ಎರಡು ನಗರಗಳ ನಡುವಿನ ರೈಲು ಸಂಚಾರ ಆರಂಭಕ್ಕೆ ಕೊನೆಯ ಹಂತದ ಸರ್ವೆ ಮಾಡಲು ಕ್ಷಣಗಣನೆ ಆರಂಭವಾಗಿದೆ.
ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು
ಈ ನೂತನ ರೈಲು ಮಾರ್ಗ ನಿರ್ಮಾಣವಾದರೆ ಕೊಡಗು ಜಿಲ್ಲೆಗೆ ಅಂಟಿದ್ದ ರಾಜ್ಯದ ರೈಲ್ವೆ ಸಂಪರ್ಕವಿಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿಕೊಳ್ಳಲಿದೆ. ರೈಲು ಮಾರ್ಗ ಪೂರ್ಣಗೊಂಡರೆ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಬೈಲುಕುಪ್ಪೆ ಹಾಗೂ ಕುಶಾಲನಗರದ ಜನರಿಗೆ ಅನುಕೂಲವಾಗಲಿದೆ. ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣಕ್ಕೆ ಈ ಹಿಂದೆಯೇ ಸಮೀಕ್ಷೆ ನಡೆಸಲಾಗಿತ್ತು. ಆದರೆ ಅಧಿಕ ಪ್ರಮಾಣದ ಅರಣ್ಯಕ್ಕೆ ಹಾನಿಯಾಗುವ ಉದ್ದೇಶದಿಂದ ಕೊಡಗಿನಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.
ಮುಂದಿನ 6 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ
ಈ ಕುರಿತು ಮಾತನಾಡಿದ ರೈಲ್ವೇ ವಿಭಾಗೀಯ ನಿರ್ವಾಹಕ ಸತ್ಯನಾರಾಯಣ, ಅಂತಿಮ ಸರ್ವೆ ನಡೆಸಲು ರೈಲ್ವೇ ಮಂಡಳಿ ಆದೇಶ ನೀಡಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ಬಿಡ್ಡುದಾರರು ಟೆಂಡರ್ ಸಲ್ಲಿಸಿದ್ದು, ಬಿಡ್ ದಾರರನ್ನು ಅಂತಿಮಗೊಳಿಸಿಲ್ಲ. ಅಂತಿಮ ಸರ್ವೆ ಮಾಡುವ ಪ್ರಕ್ರಿಯೆ ಮುಂದಿನ 6 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ನಂತರ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿ ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಲಾಗುವುದು. ರೈಲ್ವೇ ಮಂಡಳಿಯು ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿದ ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
Recommended Video
ಪ್ರವಾಸೋದ್ಯಮಕ್ಕೆ ಉತ್ತೇಜನ
ಮೈಸೂರಿನಲ್ಲಿ ಈಗಾಗಲೇ ಅನೇಕ ನಗರಗಳಿಗೆ ವಿಮಾನ ಸಂಚಾರ ಆರಂಭಿಸಿದ್ದು, ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಸೋಮವಾರದಿಂದ ನಾಲ್ಕು ಪ್ಯಾಸೆಂಜರ್ ರೈಲುಗಳನ್ನೂ ಬೆಂಗಳೂರಿಗೆ ಆರಂಭಿಸಲಾಗಿದ್ದು, ಇದಕ್ಕೆ ರಿಸರ್ವೇಷನ್ ಇಲ್ಲ. ಹೀಗಾಗಿ ಮೈಸೂರು ಜಿಲ್ಲೆಗೆ ಹಲವು ಜಿಲ್ಲೆಗಳ ಸಾರಿಗೆ ಸಂಪರ್ಕ ಹೆಚ್ಚಾಗುವುದರಿಂದ ಮೈಸೂರು ಹಾಗೂ ಕೊಡಗು ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದೆ.