ಕೊಡಗಿನಲ್ಲಿ ಮುಂಗಾರು ಚೇತರಿಕೆ: ಬರೆ, ಗುಡ್ಡ ಕುಸಿತದ ಭೀತಿ
ಮಡಿಕೇರಿ, ಜುಲೈ 5: ಕೊಡಗಿನಲ್ಲಿ ಸ್ವಲ್ಪ ಮಟ್ಟಿಗೆ ಮುಂಗಾರು ಚೇತರಿಕೆ ಕಂಡಿದೆ. ಮಡಿಕೇರಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಮುಂಗಾರು ದುರ್ಬಲವಾಗಿದೆ ಎನ್ನಬಹುದು. ಒಂದಷ್ಟು ರಭಸವಾಗಿ ಸುರಿಯಬೇಕಾಗಿದ್ದ ಆರಿದ್ರಾ ಮಳೆ ಈ ಬಾರಿ ಸುರಿಯಲೇ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮಳೆ ಚೇತರಿಕೆಯಾದರೆ ಮಾತ್ರ ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ.
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 31.99 ಮಿ.ಮೀ ಮಳೆಯಾಗಿದೆ. ತಾಲ್ಲೂಕುವಾರು ನೋಡುವುದಾದರೆ, ಮಡಿಕೇರಿ ತಾಲ್ಲೂಕಿನಲ್ಲಿ 52.95 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 24.62 ಮಿ.ಮೀ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ 18.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಸುರಿದ ಮಳೆಯ ಪ್ರಮಾಣ ಗಣನೀಯ ಇಳಿಕೆಯಾಗಿದೆ.
ಪ್ರಯಾಣಿಕರೇ ಹುಷಾರ್! ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಬಿರುಕು
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ, ಈ ಬಾರಿ 483.34 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ 1361.03 ಮಿ.ಮೀ ಮಳೆ ಸುರಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 878 ಮಿ.ಮೀ.ನಷ್ಟು ಕಡಿಮೆ ಮಳೆ ಸುರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದೊಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು 101.20 ಮಿ.ಮೀ. ಮಳೆಯು ಭಾಗಮಂಡಲದಲ್ಲಿ ಸುರಿದಿದ್ದರೆ, ಅತಿ ಕಡಿಮೆ 3.20 ಮಿ.ಮೀ. ಮಳೆ ಕುಶಾಲನಗರದಲ್ಲಿ ಸುರಿದಿದೆ.
ಮಡಿಕೇರಿಯಲ್ಲಿ ಮಳೆಯ ರಭಸ ಹೆಚ್ಚುತ್ತಿದ್ದಂತೆ ಬರೆ, ಗುಡ್ಡ ಕುಸಿತದ ಆತಂಕವೂ ಶುರುವಾಗಿದೆ. ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿಯ ಗುಡ್ಡ ಕುಸಿಯಲು ಆರಂಭಿಸಿದ್ದರೆ, ಮತ್ತೊಂದೆಡೆ ಮಡಿಕೇರಿ ಮಂಗಳೂರು ಹೆದ್ದಾರಿಯ ಕಾವೇರಿ ಬಕ್ಕ ಜಂಕ್ಷನ್ ಹಾಗೂ ಕಾಟಕೇರಿ ನಡುವೆ ಬಿರುಕು ಕಾಣಿಸಿದೆ.
ಆಗಸ್ಟ್ ಭೀತಿಯಿಂದ ಮನೆ ಖಾಲಿ ಮಾಡುತ್ತಿರುವ ಕೊಡಗು ಮಂದಿ
ಕಳೆದ ವರ್ಷ ಸುರಿದ ಭಾರೀ ಮಳೆಗೆ ರಸ್ತೆ ಕುಸಿತವಾಗಿತ್ತು. ಈ ಪ್ರದೇಶದಲ್ಲಿ ಮರಳು ಮೂಟೆಯಿಟ್ಟು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಆ ನಂತರ ರಸ್ತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ. ಹೀಗಾಗಿ ಅದೇ ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದು, ಬಿರುಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವೊಂದು ಅಪಾಯಕಾರಿ ಸ್ಥಳದಲ್ಲಿ ತಾತ್ಕಾಲಿಕ ವ್ಯವಸ್ಥೆ ಬದಲಿಗೆ ಶಾಶ್ವತ ಕಾಮಗಾರಿ ಮಾಡಬೇಕಿತ್ತು. ಆದರೆ ಸರ್ಕಾರದ ಉದಾಸೀನತೆಯಿಂದಾಗಿ ತಾತ್ಕಾಲಿಕ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುವಂತಾಗಿದ್ದು ಮುಂದಿನ ದಿನಗಳಲ್ಲಿ ಮಳೆ ರಭಸವಾಗಿ ಸುರಿಯಲು ಆರಂಭಿಸಿದರೆ ಈ ರಸ್ತೆ ಸಂಪೂರ್ಣವಾಗಿ ಕುಸಿದು ರಸ್ತೆ ಸಂಪರ್ಕವೇ ಕಡಿತಗೊಳ್ಳುವ ಸಂಭವವಿದೆ.
ದುಬಾರೆಯ ಕಾವೇರಿ ನದಿಯಲ್ಲಿ ರಾಫ್ಟಿಂಗ್ ಮತ್ತೆ ಆರಂಭ
ರಸ್ತೆ ಬಿರುಕು ಬಿಟ್ಟಿರುವ ವಿಚಾರ ತಿಳಿದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಕೂಡಲೇ ಸರಿಪಡಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ಸೂಚಿಸಿದ್ದಾರೆ.