ಪರೀಕ್ಷೆಗೆ ಹೆದರಿ ಮಡಿಕೇರಿಯ SSLC ವಿದ್ಯಾರ್ಥಿ ಆತ್ಮಹತ್ಯೆ
ಮಡಿಕೇರಿ, ಮೇ 20: ಕಳೆದ ಎರಡು ತಿಂಗಳಿನಿಂದ ಎಸ್ ಎಸ್ ಎಲ್ಸಿ ಪರೀಕ್ಷೆ ನಡೆಯುವ ಬಗ್ಗೆಯೇ ಅನಿಶ್ಚಿತತೆ ಇತ್ತು. ಆದರೆ ಪರೀಕ್ಷೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೆಲ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಮಡಿಕೇರಿಯಲ್ಲಿಯೂ ಎಸ್ ಎಸ್ ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಪರೀಕ್ಷೆಯ ಭಯದಿಂದ ವಿದ್ಯಾರ್ಥಿಯೊಬ್ಬ ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಡಿಕೇರಿಯ ಶನಿವಾರಸಂತೆಯ ಕಾಜೂರು ಗ್ರಾಮದಲ್ಲಿ ಮಂಗಳವಾರ ಈ ಪ್ರಕರಣ ನಡೆದಿದೆ. ಕಾಜೂರು ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ರಿಷಿ (15) ಮೃತ ದುರ್ದೈವಿ. ಕಾಜೂರಿನ ಜಿತೇಂದ್ರ ಎಂಬುವರ ಪುತ್ರ ರಿಷಿ, ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ಕಾರಣ ಭಯದಿಂದ ಮನೆಯಲ್ಲಿ ಪೋಷಕರು ಇಲ್ಲದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾನೆ.
ಪೋಷಕರು ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕೊಳ್ಳೇಗಾಲದ ಎಸ್ ಎಸ್ ಎಲ್ಸಿ ವಿದ್ಯಾರ್ಥಿನಿ
ಘಟನಾ ಸ್ಥಳಕ್ಕೆ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.