ಕೊಡಗಿನಲ್ಲಿ ಬಿರುಸು ಪಡೆದುಕೊಂಡಿದೆ ಮುಂಗಾರು ಮಳೆ
ಮಡಿಕೇರಿ, ಜೂನ್ 18: ಕೊಡಗಿನಲ್ಲಿ ಜೂನ್ ಮೊದಲ ದಿನದಿಂದಲೇ ಜಿಟಿಜಿಟಿಯಾಗಿ ಆರಂಭಗೊಂಡ ಮಳೆ ನಿಧಾನಗತಿಯಲ್ಲಿ ಮುಂದುವರೆಯುತ್ತಿದೆ. ಮೃಗಶಿರಾ ನಕ್ಷತ್ರದ ಮಳೆ ಅಬ್ಬರಿಸಿ ಸುರಿಯಬೇಕಿತ್ತು. ಆದರೆ ಭಾಗಮಂಡಲ ವ್ಯಾಪ್ತಿಯಲ್ಲಿ ಸ್ವಲ್ಪ ಮಟ್ಟಿಗಿನ ಅಬ್ಬರದಿಂದ ಸುರಿದಿದೆಯಾದರೂ ಉಳಿದಂತೆ ಹೆಚ್ಚು ಮಳೆ ಸುರಿದಿಲ್ಲ.
Recommended Video
ಜೂನ್ ತಿಂಗಳಲ್ಲಿ ಮಳೆ ಸುರಿದು ಅಂತರ್ಜಲ ಹೆಚ್ಚಾಗಿ ಹಳ್ಳ, ಹೊಳೆಯಲ್ಲಿ ನೀರು ಹೆಚ್ಚಳವಾದರೆ ಮಾತ್ರ ಇಲ್ಲಿನವರು ಭತ್ತದ ಕೃಷಿ ಮಾಡಲು ಸಾಧ್ಯ. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ಭತ್ತದ ಕೃಷಿಕರಿಗೆ ಅನುಕೂಲವಾದಂತೆ ಕಂಡು ಬರುತ್ತಿಲ್ಲ. ಹೀಗಾಗಿ ಇನ್ನೂ ಬಹುತೇಕ ರೈತರು ಬಿತ್ತನೆ ಬೀಜವನ್ನು ಹಾಕಿಲ್ಲ. ಇತರೆಡೆಗೆ ಹೋಲಿಸಿದರೆ ಕೊಡಗಿನಲ್ಲಿ ಭತ್ತದ ಕೃಷಿ ಮಳೆಯನ್ನೇ ನಂಬಿ ನಡೆಯುತ್ತದೆ. ಮಳೆ ಬಿದ್ದು ಭೂಮಿ ತೇವಗೊಂಡು ಅಂತರ್ಜಲ ಭೂಮಿಯಡಿಯಿಂದ ಉಕ್ಕಿ ಹೊರಕ್ಕೆ ಬಂದು ನದಿ, ತೊರೆಗಳು ಉಕ್ಕಿ ಹರಿಯುತ್ತವೆ.
ಮುಂಗಾರು ಪ್ರಾರಂಭ: ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡಗಳಿಗೆ ತರಬೇತಿ
ಈ ನೀರಿನ ಮೂಲದಿಂದ ಭತ್ತದ ಕೃಷಿಯನ್ನು ಮಾಡಲಾಗುತ್ತದೆ. ಇದು ಹಿಂದಿನ ಕಾಲದಿಂದಲೂ ನಡೆದು ಬಂದಿದ್ದು, ಇತ್ತೀಚೆಗಿನ ಮಳೆಯ ಕಣ್ಣಾ ಮುಚ್ಚಾಲೆ ಆಟದಿಂದಾಗಿ ಭತ್ತದ ಕೃಷಿಯನ್ನು ಮಾಡುವುದೇ ಸವಾಲಾಗಿ ಪರಿಣಮಿಸಿದೆ.
ಈ ಬಾರಿ ಬೇಸಿಗೆಯಲ್ಲೂ ಉತ್ತಮ ಮಳೆ
ಮೊದಲಿನಂತೆ ಸಮಯಕ್ಕೆ ಸರಿಯಾಗಿ ಮಳೆ ಬರುತ್ತಿಲ್ಲ. ಬಂದರೂ ಒಮ್ಮೆಲೆ ಧಾರಾಕಾರವಾಗಿ ಸುರಿದು ಅನಾಹುತವನ್ನು ಸೃಷ್ಟಿಸುತ್ತಿದೆ. ಇದೀಗ ಮಳೆಯನ್ನು ನೋಡಿಕೊಂಡು ಭತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಕಳೆದ ಎರಡು ವರ್ಷವೂ ಮಳೆ ಸುರಿದು ಪ್ರವಾಹ ಏರ್ಪಟಿದ್ದರೂ ಅದು ಸಕಾಲದಲ್ಲಿ ಸುರಿದಿರಲಿಲ್ಲ. ಬೇಸಿಗೆಯಲ್ಲಾಗಲೀ, ಮಳೆಗಾಲದ ಆರಂಭದಲ್ಲಾಗಲೀ ಬಾರದೆ ಕೊನೆಯಲ್ಲಿ, ಅಂದರೆ ಆಗಸ್ಟ್ನಲ್ಲಿ ಸುರಿದಿತ್ತು. ಇದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿ ಭತ್ತದ ಕೃಷಿ ಮಾತ್ರವಲ್ಲದೆ, ಕಾಫಿಗೂ ಹಾನಿಯಾಗಿತ್ತು. ಆದರೆ ಈ ಬಾರಿ ಜನವರಿ ಆರಂಭದಿಂದ ಇಲ್ಲಿವರೆಗೆ ಗಮನಿಸಿದರೆ ಒಂದಷ್ಟು ಉತ್ತಮ ಮಳೆಯಾಗಿರುವುದು ಕಂಡು ಬರುತ್ತಿದೆ.
ಕಳೆದ ವರ್ಷಕ್ಕಿಂತ ಹೆಚ್ಚು ಮಳೆ
ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆಯ ಪ್ರಮಾಣ ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಈ ವರ್ಷ 226.94 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 143.19 ಮಿ.ಮೀ ಮಳೆಯಾಗಿತ್ತು. ಇನ್ನು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 42.79 ಮಿ.ಮೀ. ಮಳೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ ಮಳೆಯಿರಲಿಲ್ಲ. ಹೀಗಾಗಿ ಕಳೆದ ವರ್ಷ ಇದೇ ದಿನ ಕೇವಲ 0.55 ಮಿ.ಮೀ. ಮಳೆ ಸುರಿದಿತ್ತು.
ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ ಮಳೆ; ಏನೇನು ತಯಾರಿಯಾಗಿದೆ?
ಭಾಗಮಂಡಲದಲ್ಲಿ 107.40 ಮಿ.ಮೀ ಮಳೆ
ಇದೀಗ ಮಳೆ ಚುರುಕುಗೊಂಡಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 66.90 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 37.68 ಮಿ.ಮೀ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 23.80 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಅತಿಹೆಚ್ಚು 107.40 ಮಿ.ಮೀ ಮಳೆ ಭಾಗಮಂಡಲದಲ್ಲಿ ಸುರಿದಿದೆ. ಕನಿಷ್ಠ 10.20 ಮಿ.ಮೀ. ಮಳೆ ಕುಶಾಲನಗರದಲ್ಲಿ ಸುರಿದಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.
ಹಾರಂಗಿ ಜಲಾಶಯದಲ್ಲಿ 2834.18 ಅಡಿ ನೀರು
ಸದ್ಯ ಜಲಾಶಯಕ್ಕೆ 554 ಕ್ಯುಸೆಕ್ ಒಳ ಹರಿವು ಇದ್ದು, ಜಲಾಶಯದಿಂದ ನದಿಗೆ 30 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇನ್ನು ಗರಿಷ್ಠ 2,859 ಅಡಿಯ ಜಲಾಶಯದಲ್ಲಿ ಇದೀಗ 2834.18 ಅಡಿಯಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಕೇವಲ 2805.76 ಅಡಿಯಷ್ಟು ನೀರಿತ್ತು. ಮಳೆ ಬಿಡುವು ಕೊಡದೆ ವೇಗವನ್ನು ಹೆಚ್ಚಿಸಿಕೊಂಡಿದ್ದೇ ಆದರೆ ಈ ಬಾರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕಾವೇರಿ ನದಿ ಪಾತ್ರದ ಜಲಾಶಯಗಳು ಬಹುಬೇಗ ಭರ್ತಿಯಾಗುವ ಸಾಧ್ಯತೆಯಿದೆ.