ಬಾ ಮಳೆಯೇ ಬಾ... ಎಂದು ಮುಗಿಲತ್ತ ದೃಷ್ಟಿನೆಟ್ಟ ಮಡಿಕೇರಿ ಕೃಷಿಕರು!
ಮಡಿಕೇರಿ, ಫೆಬ್ರವರಿ 22: ಸಾಮಾನ್ಯವಾಗಿ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರಗಳಿಗೆಲ್ಲ ಕೊಡಗಿನಲ್ಲಿ ಕಾಫಿ ಕೊಯ್ಲು ಮುಗಿಯುತ್ತದೆ. ಈ ವೇಳೆಗೆ ಮಳೆ ಸುರಿದರೆ ಕಾಫಿ ಹೂ ಬಿಡಲು ಅನುಕೂಲವಾಗುತ್ತದೆ. ಆದರೆ ಈ ಬಾರಿ ಇಲ್ಲಿಯವರೆಗೆ ಬಂದಿಲ್ಲ. ಆದ್ದರಿಂದ ಇವತ್ತು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಜನ ಕಾಯುತ್ತಿದ್ದಾರೆ.
ಮಳೆಯನ್ನೇ ನಂಬಿ ಕೃಷಿ ಮಾಡುವ ಕೊಡಗಿನ ಬಹಳಷ್ಟು ಬೆಳೆಗಾರರು ಈ ವೇಳೆಗೆ ಆಕಾಶದತ್ತ ದೃಷ್ಟಿನೆಟ್ಟು ಮಳೆಯ ನಿರೀಕ್ಷೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕಳೆದ ವರ್ಷ ಈ ವೇಳೆಗೆ ಕೊಡಗಿನಲ್ಲಿ ಮಳೆ ಸುರಿದಿತ್ತು. ಆದರೆ ಈ ಬಾರಿ ಕೆಲವು ಕಡೆಗಳಲ್ಲಿ ಹೂಮಳೆ ಬಂದಿದ್ದರೆ ಉಳಿದಂತೆ ಒಂದು ಹನಿಯೂ ಬಿದ್ದಿಲ್ಲ. ಈಗ ಕಾಫಿಗೆ ನೀರಿನ ಅಗತ್ಯವಿದೆ. ನೀರು ಹಾಯಿಸಿದರೆ ಹೂ ಬಿಟ್ಟು ಫಸಲು ಬರಲು ಅನುಕೂಲವಾಗುತ್ತದೆ. ನೀರಿನ ಅನುಕೂಲ ಇರುವವರು ಕೆರೆಗಳಿಂದ ತಮ್ಮ ತೋಟಗಳಿಗೆ ಸ್ಪಿಂಕ್ಲರ್ ಮೂಲಕ ಹಾಯಿಸುತ್ತಿದ್ದಾರೆ. ಉಳಿದವರು ಮಾತ್ರ ಅಸಹಾಯಕರಾಗಿ ಮಳೆಯನ್ನೇ ಕಾಯುತ್ತಿರುವುದು ಈಗ ಕೊಡಗಿನಲ್ಲಿ ಕಂಡು ಬರುತ್ತಿರುವ ದೃಶ್ಯ.
ಕಾಫಿಯ ಘಮ ಹುಡುಕಿ ಅಧ್ಯಯನಕ್ಕೆ ಕೊಡಗಿಗೆ ಬಂದ ವಿದೇಶಿಗರು
ಕಳೆದ ವರ್ಷ ವಾತಾವರಣದ ಏರುಪೇರು, ಮುಂಗಾರು ಮಳೆ ಅಡಚಣೆ, ಹಿಂಗಾರು ಮಳೆಯಿಂದಾಗಿ ಕಾಫಿ ಉತ್ಪಾದನೆಯಲ್ಲಿ ಕುಸಿತವಾಗಿದೆ. ಇದರ ನಡುವೆ ಇದೀಗ ಮಳೆಯೂ ಕೈಕೊಟ್ಟರೆ ಮುಂದೇನು ಮಾಡುವುದು ಎಂಬ ಚಿಂತೆ ಇಲ್ಲಿನ ಬೆಳೆಗಾರರದ್ದಾಗಿದೆ. ಕೆಲವರು ನೀರು ಹಾಯಿಸಿದ ಪರಿಣಾಮ ಕಾಫಿ ಗಿಡಗಳಲ್ಲಿ ಹೂ ಅರಳಿದ್ದರೆ, ಮತ್ತೆ ಕೆಲವರ ತೋಟಗಳಲ್ಲಿ ಇಬ್ಬನಿಗೆ ಹೂ ಅರಳುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ಕಳೆದ ವರ್ಷ ಜನವರಿ ಕೊನೆಯ ವಾರದಲ್ಲಿ ಮಳೆ ಜಿಲ್ಲೆಯಾದ್ಯಂತ ಸುರಿದಿತ್ತು. ಇದರಿಂದ ಕೊಯ್ಲುಗೆ ತೊಂದರೆಯಾಗಿತ್ತಾದರೂ ಹೂ ಅರಳಲು ಅನುಕೂಲವಾಗಿತ್ತು. ಆದರೆ ಅದ್ಯಾಕೋ ಈ ವರ್ಷ ವರುಣ ಮುನಿಸಿಕೊಂಡಿದ್ದಾನೆ. ಸದ್ಯಕ್ಕೆ ಮಳೆ ಬರುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗೆ ಆದರೆ ಮುಂದೆ ಹೇಗೆ ಎಂಬ ಭಯವೂ ಇಲ್ಲಿನ ಬೆಳೆಗಾರರನ್ನು ಕಾಡುತ್ತಿದೆ.
ಕಾಫಿ ಕಾರ್ಮಿಕ ಹೆಣ್ಣುಮಕ್ಕಳ ನೆರವಿಗಾಗಿ ಸಂತೆ
ತಲಕಾವೇರಿ ವ್ಯಾಪ್ತಿಯಲ್ಲಿ ಇಷ್ಟರಲ್ಲೇ ಮಳೆ ಬರಬೇಕಿತ್ತು. ಆದರೆ ಬರಲಿಲ್ಲ. ಇದರಿಂದ ಕಾಫಿಮೊಗ್ಗು ಅರಳದೆ ಕೆಂಪಾಗುತ್ತಿದೆ ಇದನ್ನು ಉಳಿಸಿಕೊಳ್ಳಲು ನೀರು ಹಾಯಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ನದಿಯಿಂದ ನೀರು ಹಾಯಿಸಲು ನಿರ್ಬಂಧ ಹೇರಲಾಗಿದ್ದು, ಕೆರೆಗಳಲ್ಲಿ ನೀರಿಲ್ಲ. ಹೀಗಾಗಿ ಮಳೆ ಬಂದರೆ ಸಾಕಪ್ಪಾ ಎಂದು ಮುಗಿಲತ್ತ ದೃಷ್ಠಿ ನೆಟ್ಟು ಬೆಳೆಗಾರರು ಆತಂಕದ ಕಣ್ಣುಗಳಿಂದ ನೋಡುತ್ತಿದ್ದಾರೆ.