ಕೊಡಗಿನಲ್ಲಿ ಭೂಮಿಯೊಳಗಿಂದ ಪದೇ ಪದೇ ವಿಚಿತ್ರ ಶಬ್ದ! ಕಾರಣ ಬಿಚ್ಚಿಟ್ಟ ತಜ್ಞರು
ಮಡಿಕೇರಿ, ನವೆಂಬರ್ 6: ಕೊಡಗಿನಲ್ಲಿ ಮಳೆ ನಿಂತು ಎರಡು ತಿಂಗಳು ಕಳೆದಿವೆ. ಜನರೂ ತಮ್ಮ ಸಹಜ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ. ಆದರೆ ಕೊಡಗಿನ ಮಡಿಕೇರಿ ತಾಲೂಕಿನ ಪೇರೂರಿನ ಇಗ್ಗುತಪ್ಪ ಬೆಟ್ಟದ ತಪ್ಪಲಿನಲ್ಲಿ ಕಳೆದ ಮೂರು ದಿನಗಳಿಂದ ಭೂಮಿಯೊಳಗಿನಿಂದ ಕೇಳಿ ಬರುತ್ತಿರುವ ವಿಚಿತ್ರ ಶಬ್ದ ಜನರ ನಿದ್ದೆಗೆಡಿಸಿತ್ತು. ಕಳೆದ ವರ್ಷವಷ್ಟೆ ಮಳೆ, ಭೂಕುಸಿತದಿಂದ ಕಂಗಾಲಾಗಿದ್ದ ಜನ, ಈ ಶಬ್ದ ಕೇಳಿ ಇನ್ನೂ ಏನೋ ಗಂಡಾಂತರ ಕಾದಿದೆ ಎಂದೇ ಆತಂಕಗೊಂಡಿದ್ದರು.
ಕುಸಿಯುವ ಭೀತಿಯಲ್ಲಿ ತೆಂಕಿಲ ದರ್ಖಾಸು ಗೇರು ಗುಡ್ಡ; 11 ಕುಟುಂಬಗಳು ಸ್ಥಳಾಂತರ
ಅಧಿಕಾರಿಗಳಿಗೂ ಮಾಹಿತಿ ನೀಡಿ, ಪರಿಶೀಲಿಸಬೇಕೆಂದು ಕೋರಿದ್ದರು. ಸ್ಥಳವನ್ನು ಪರಿಶೀಲಿಸಿರುವ ತಜ್ಞರು ಭೂಮಿಯೊಳಗಿನಿಂದ ಈ ಶಬ್ದ ಕೇಳಿಬರುತ್ತಿರುವುದು ಏಕೆ ಎಂಬುದಕ್ಕೆ ಉತ್ತರವನ್ನೂ ಹುಡುಕಿದ್ದಾರೆ.
ರಾತ್ರಿ ನೀರು ಹರಿವ, ಬಂಡೆ ಡಿಕ್ಕಿ ಹೊಡೆಯುವ ಶಬ್ದ
ರಾತ್ರಿ ಸಮಯದಲ್ಲಿ ಕೆಲವೊಮ್ಮೆ ನೀರು ಹರಿಯುತ್ತಿರುವಂತೆ, ಕೆಲವೊಮ್ಮೆ ಬಂಡೆಗೆ ಬಂಡೆ ಡಿಕ್ಕಿ ಹೊಡೆದಂತೆ ಕೇಳಿ ಬರುತ್ತಿದ್ದ ಶಬ್ದ ಮತ್ತೆ ಮತ್ತೆ ಜನರನ್ನು ಆತಂಕಕ್ಕೆ ದೂಡುತ್ತಿತ್ತು. ಪೇರೂರಿನಲ್ಲಿ ಅಲ್ಲದೇ ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲಿಯೂ ಇದೇ ರೀತಿಯ ಶಬ್ದ ಮೂರು ದಿನಗಳ ಹಿಂದೆ ಕೇಳಿ ಬಂದಿತ್ತು. ಹೀಗೆ ಪದೇ ಪದೇ ಅಲ್ಲಲ್ಲಿ ಶಬ್ದ ಕೇಳುತ್ತಿರುವುದರಿಂದ ಭಯಗೊಂಡ ಜನ ಏನು ಮಾಡುವುದು ಎಂದು ತೋಚದೇ ಅಧಿಕಾರಿಗಳಿಗೆ ಪರಿಶೀಲಿಸಲು ಮನವಿ ಮಾಡಿದ್ದರು.
8 ವರ್ಷದ ಹಿಂದೆಯೂ ಕೇಳಿಬಂದಿದ್ದ ಶಬ್ದ
ಕೊಡಗಿನಲ್ಲಿ ಮಳೆ ನಿಂತು ಹತ್ತಿರತ್ತಿರ ಒಂದೂವರೆ ತಿಂಗಳಿಗಿಂತಲೂ ಹೆಚ್ಚಿನ ಸಮಯ ಆಗಿದೆ. ಆದರೂ ಈ ರೀತಿ ನೀರು ಹರಿಯುತ್ತಿರುವಂತೆ ಶಬ್ದ ಬರಲು ಕಾರಣವೇನು ಎಂಬ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮುಂದಿಟ್ಟಿದ್ದರು. 8 ವರ್ಷಗಳ ಹಿಂದೆ ಸೋಮವಾರಪೇಟೆ ನಗರದ ಜನತಾ ಕಾಲೋನಿಯಲ್ಲೂ ಇದೇ ರೀತಿ ಭೂಮಿಯಾಳದಿಂದ ಶಬ್ದ ಬಂದಿದ್ದ ಹಿನ್ನೆಲೆಯಲ್ಲಿ ಜನರ ಒತ್ತಾಯದ ಮೇರೆಗೆ ಭೂ ಕಂಪನ ಮಾಪಕ ಯಂತ್ರವೊಂದನ್ನು ಅದೇ ಸ್ಥಳದಲ್ಲಿ ಸರ್ಕಾರ ಅಳವಡಿಸಿತ್ತು. ನಂತರ ಈ ಶಬ್ದ ಕೇಳಿ ಬಂದಿರಲಿಲ್ಲ.
ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದರೂ ಸದ್ದಿಲ್ಲದೆ ಹೋಗುತ್ತಿದೆ ಪ್ರಾಣ
ಮನೆ ತೊರೆಯುವ ಯೋಚನೆ
ಕಳೆದ ವರ್ಷ ಹಾಗೂ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಟ್ಟಗಳೇ ಕುಸಿದು ಕೊಡಗಿನಲ್ಲಿ ನೂರಾರು ಮನೆಗಳು ನೆಲಸಮವಾಗಿ ಬಿಟ್ಟಿದ್ದವು. ಕಳೆದ ವರ್ಷ ಭೀಕರ ಮಳೆ ಹಾಗೂ ಮನೆ ಕುಸಿತಕ್ಕೆ ಸುಮಾರು 18 ಜೀವಗಳು ಬಲಿಯಾಗಿದ್ದರೆ ಈ ವರ್ಷವೂ 8 ಜೀವಗಳು ಬಲಿಯಾಗಿವೆ. ಹೀಗೆ ಪದೇ ಪದೇ ಶಬ್ದ ಬರುತ್ತಿರುವ ಗ್ರಾಮಗಳ ಗ್ರಾಮಸ್ಥರು ಮನೆ ತೊರೆಯುವ ಯೋಚನೆಯನ್ನೂ ಮಾಡಿದ್ದರು.
ಅಂತರ್ಜಲ ಮಟ್ಟ ಹೆಚ್ಚಳವೇ ಕಾರಣ ಎಂದ ತಜ್ಞರು
ಭೂ ವಿಜ್ಞಾನಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಗ್ರಾಮಸ್ಥರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ವಿಜ್ಞಾನಿಗಳ ಪ್ರಕಾರ ಕೊಡಗಿನಲ್ಲಿ ಮಳೆ ಜಾಸ್ತಿಯಾಗಿರುವ ಕಾರಣದಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಭೂಮಿಯ ಒಳಪದರದಲ್ಲಿ ನೀರು ಹರಿಯುತ್ತಿದೆ. ಹಾಗಾಗಿ ಶಬ್ದ ಕೇಳಿ ಬರುತ್ತಿದೆ. ನೀರು ರಭಸದಿಂದ ಹರಿಯುವಾಗ ಸಹಜವಾಗೇ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ನೀರಿನ ಸರಾಗ ಹರಿವಿಗೆ ತಡೆ ಆದಾಗ ಅದು ತನ್ನ ಹರಿವನ್ನು ಬದಲಿಸುತ್ತದೆ. ಆಗ ಉಂಟಾಗುವ ಶಬ್ದವೇ ಇದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಇದೊಂದು ಸಹಜ ಪ್ರಕ್ರಿಯೆ ಆಗಿದ್ದು ನೀರಿನ ರಭಸ ಮತ್ತು ಗಾತ್ರ ಹೆಚ್ಚಿದರೆ ಭೂಮಿಯ ಮೇಲ್ಪದರ ಕುಸಿಯುವ ಸಂಭವ ಇದೆ, ಆದರೆ ಇದು ತುಂಬಾ ಅಪರೂಪ, ಯಾರೂ ಆತಂಕ ಪಡಬೇಕಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸದ್ಯಕ್ಕೆ ಜನ ನಿಟ್ಟುಸಿರುಬಿಟ್ಟಿದ್ದಾರೆ.