ಮಡಿಕೇರಿ: ಮಹಾವೀರ ಚಕ್ರ ವಿಜೇತ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಪ್ರತಿಮೆ ಸ್ಥಾಪನೆ
ಮಡಿಕೇರಿ, ಸೆಪ್ಟೆಂಬರ್ 6: ಪುಟ್ಟ ಜಿಲ್ಲೆ ಕೊಡಗು ವೀರರ ಹಾಗೂ ಸಾಹಸಿಗಳ ನಾಡು. ಐದೂವರೆ ದಶಕದ ಹಿಂದೆ(1965) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ವಿಮಾನವನ್ನು ಹೊಡೆದರುಳಿಸಿ ಬಲಿದಾನಗೈದ ಕೊಡಗಿನ ವೀರಯೋಧ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಯನ್ನು, ಮಂಜಿನ ನಗರಿ ಮಡಿಕೇರಿಯ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವ್ರತ್ತದಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ವೀರಯೋಧನ ಕೀರ್ತಿ ಮುಂದಿನ ಜನಾಂಗವೂ ಸ್ಮರಿಸಿಕೊಳ್ಳುವಂತಿದೆ.
ಈ ಪ್ರತಿಮೆ ಪ್ರತಿಷ್ಠಾಪನೆಯು ಕೊಡವ ಮಕ್ಕಡಕೂಟದ ಸಂಸ್ಥಾಪಕ ಬೊಳ್ಳಜಿರಬಿ ಅಯ್ಯಪ್ಪನವರ ಎಂಟು ವರ್ಷಗಳ ಪರಿಶ್ರಮದ ಫಲವಾಗಿದೆ. ಕೊಡಗಿನ ವೀರಸೇನಾ ಪರಂಪರೆಯ ಇತಿಹಾಸದಲ್ಲಿ ದೇಶದ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪ್ರಶಸ್ತಿಯು ಮರಣೋತ್ತರವಾಗಿ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯನವರಿಗೆ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ನಿವೃತ್ತ ಜೀವನ ನಡೆಸುತಿರುವ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿರವರಿಗೆ ಸಿಕ್ಕಿದೆ.
ಮಹಾವೀರ ಚಕ್ರ ಪ್ರಶಸ್ತಿ ಪಡೆದ ಅಜ್ಜಮಾಡ ದೇವಯ್ಯ
ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಗೆ ಮೈಸೂರಿನಿಂದ ಬರುವಾಗ ಫೀಲ್ಡ್ ಮಾರ್ಷಲ್ ಕೆ .ಎಂ ಕಾರ್ಯಪ್ಪನವರ ಪ್ರತಿಮೆ, ಸ್ವಾತಂತ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ, ವೀರ ಸೇನಾನಿ ಜನರಲ್ ತಿಮ್ಮಯ್ಯನವರ ಪ್ರತಿಮೆ, ಹುತಾತ್ಮ ಯೋಧ ಮಂಗೇರಿರನ ಮುತ್ತಣ್ಣ ಪ್ರತಿಮೆಯ ಜೊತೆಗೆ ಮಹಾವೀರ ಚಕ್ರ ಸೇನಾ ಬಿರುದು ಪಡೆದ ಸ್ಕ್ವಾಡ್ರ ನ್ ಲೀಡರ್ ಅಜ್ಜಮಾಡ ದೇವಯ್ಯನವರ ಕಂಚಿನ ಪ್ರತಿಮೆ ಮಡಿಕೇರಿಯ ಹೃದಯ ಭಾಗದಲ್ಲಿ ಅಜರಾಮರಗೊಳ್ಳಲಿದೆ.
ಕೊಡಗಿನಲ್ಲಿ ಸಂಭ್ರಮವಿಲ್ಲದೆ ಕಳೆಗುಂದಿದ ಕೈಲ್ ಮುಹೂರ್ತ...
ಇದೇ ಸೆಪ್ಟಂಬರ್ 7ರ ಸೋಮವಾರದಂದು ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ 55ನೇ ಹುತಾತ್ಮ ದಿನ. ಸುಮಾರು 15 ರಿಂದ 20 ಲಕ್ಷ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಆರು ಮುಕ್ಕಾಲು ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ.
ವಾಯುಸೇನಾ ಪಡೆಯ ಸ್ಕ್ವಾಡ್ರನ್ ಲೀಡರ್ ಹುದ್ದೆ
ಕ್ಷಾತ್ರ ಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನೇರಿ ತನ್ನ ಜೀವದ ಹಂಗು ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿ ಮೆರೆಯುತತ್ತಲೇ ವೀರ ಮರಣವನ್ನಪ್ಪಿ ಇಂದಿಗೆ 55 ವರ್ಷಗಳೇ ಕಳೆದು ಹೋಗಿವೆ.
ಈ ವೀರ ಸೇನಾನಿಯ ಜೀವನ ಕಥನ ರೋಚಕವಾಗಿದ್ದು, ಅಂದು 1965 ರಲ್ಲಿ ಭಾರತ-ಪಾಕ್ ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ .ಬಿ.ದೇವಯ್ಯ ನವರಿಗೆ ಪಾಕ್ ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು.
ದೇವಯ್ಯ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು
ಎದೆಗುಂದದ ದೇವಯ್ಯ ಪ್ರಾಣದ ಹಂಗು ತೊರೆದು ತನ್ನದೇ ವಿಮಾನದ ಹೋರಾಟದಲ್ಲಿ ರಣರಂಗದಲ್ಲಿ ಭೂ ಸೇನಾ ಸೈನಿಕರು ಮುಖಾಮುಖಿ ಹೇಗೆ ಹೋರಾಡುತಾರೋ ಅದೇ ರೀತಿ ವಾಯು ಸೇನೆಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಯುದ್ಧವಾದ ಡಾಗ್ ಫೈಟನ್ನು ಕೆಚ್ಚೆದೆಯಿಂದ ಮಾಡಿಯೂ ತಮ್ಮ ಯುದ್ಧ ವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ ಅಮರರಾದರು.
ಅಜ್ಜಮಾಡ ದೇವಯ್ಯನವರ ಸಾಧನೆ ಹಾಗೂ ಹೋರಾಟ ಅಪ್ರತಿಮ
1965ರ ಸೆಪ್ಟಂಬರ್ 7 ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರೂ ಇವರ ಸಾಹಸಗಾಥೆ ಜಗತ್ತಿಗೆ ತಿಳಿಯಲು ಸಾಕಷ್ಟು ವರ್ಷಗಳೇ ಕಳೆದುಹೋಯಿತು. 23 ವರ್ಷಗಳ ನಂತರ ಅವರ ಹೋರಾಟದ ಪರಿಯನ್ನು ಶತ್ರು ದೇಶದ ಪೈಲಟ್ ಒಬ್ಬ ವಿವರಿಸಿದ್ದು, ಬ್ರಿಟೀಷ್ ಪತ್ರಕರ್ತನೊಬ್ಬ ಭಾರತ-ಪಾಕಿಸ್ತಾನ ಯುದ್ಧದ ಕುರಿತು ರಚಿಸಿದ ಕೃತಿಯಲ್ಲೂ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ಸಾಧನೆ ಹಾಗೂ ಹೋರಾಟ ಅಪ್ರತಿಮವಾದುದೆಂದು ಇಡೀ ಜಗತ್ತಿಗೆ ತಿಳಿಯಿತು.