ಕೊಡಗಿನ ಕಾಫಿ ತೋಟದಲ್ಲಿ ಕಾಡಾನೆ ಅಸ್ವಸ್ಥ: ಜೀವನ್ಮರಣ ಸ್ಥಿತಿಯಲ್ಲಿ ಹೆಣ್ಣಾನೆ ಒದ್ದಾಟ
ಮಡಿಕೇರಿ, ಡಿಸೆಂಬರ್ 20: ಕಾಡಿನಿಂದ ಆಹಾರ ಅರಸಿ ಕಾಫಿ ತೋಟಕ್ಕೆ ಬಂದಿದ್ದ ಕಾಡಾನೆಯೊಂದು ನಿತ್ರಾಣಗೊಂಡು ಮೂರು ದಿನಗಳಿಂದ ಕಾಫಿ ತೋಟದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದೆ.
ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರು ರವಿ ಪೊನ್ನಪ್ಪ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಆನೆ ಅಸ್ವಸ್ಥಗೊಂಡಿದೆ. ಸಾವು ಬದುಕಿನ ನಡುವೆ ಕಾಡಾನೆ ಹೋರಾಟ ನಡೆಸುತ್ತಿದ್ದು, ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡುವ ಕಾರ್ಯ ಮುಂದುವರಿದಿದೆ.
ಉಪಟಳ ನೀಡುತ್ತಿದ್ದ ಆನೆ ಕುರ್ಚಿ ಗ್ರಾಮದಲ್ಲಿ ಕೊನೆಗೂ ಸೆರೆ
ಅಸ್ವಸ್ಥಗೊಂಡು ಕುಸಿದು ಬಿದ್ದ ಹೆಣ್ಣಾನೆ, ಆ ಜಾಗದಿಂದ ಸುಮಾರು 100 ಮೀಟರ್ ತೆವಳಿಕೊಂಡು ಸಾಗಿದ್ದು, ಈವರೆಗೆ ಮೇಲೇಳಲು ಸಾಧ್ಯವಾಗಿಲ್ಲ. ಒಮ್ಮೆ ಮೇಲೆದ್ದು ನಿಂತರೂ ತ್ರಾಣವಿಲ್ಲದೆ ಮತ್ತೆ ಕುಸಿದು ಬೀಳುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಮೇಲೆತ್ತಲು ದುಬಾರೆಯಿಂದ ನಾಲ್ಕು ಸಾಕಾನೆಗಳನ್ನು ತರಿಸಿದ್ದಾರೆ. ಅವುಗಳೂ ನಿತ್ರಾಣಗೊಂಡ ಆನೆಯನ್ನು ಮೇಲೇಳಿಸಲು ಸಾಧ್ಯವಾಗದೆ ಅಸಹಾಯಕ ಸ್ಥಿತಿ ಅನುಭವಿಸುತ್ತಿವೆ. ಬಿದ್ದಿರುವ ಆನೆಯನ್ನು ಎತ್ತಲು ಹಲವು ಬಾರಿ ಸಾಕಾನೆಗಳು ಪ್ರಯತ್ನಿಸಿದರೂ ಸಫಲಗೊಂಡಿಲ್ಲ.
ಹಲಗೂರಿನ ಭತ್ತದ ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು
ಆರ್ಎಫ್ಒ ಅನನ್ಯಕುಮಾರ್, ವೈದ್ಯಾಧಿಕಾರಿ ಮುಜೀಬ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಚಿಕಿತ್ಸೆ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಾಳೆಹಣ್ಣು, ನೀರು, ಭತ್ತದ ಹುಲ್ಲು ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಿದರೂ ಚೇತರಿಸಿಕೊಳ್ಳದ ಕಾಡಾನೆಗೆ ಗ್ಲುಕೋಸ್ ನೀಡಿ ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆ ನಂತರ ಆನೆ ಒಂದು ಬಾರಿ ಚೇತರಿಸಿಕೊಂಡಂತೆ ಕಂಡರೂ ಮತ್ತೆ ಕುಸಿದು ಬೀಳುತ್ತಿದೆ. ಈ ಆನೆಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿರುವುದರಿಂದ ಈ ರೀತಿ ನಿತ್ರಾಣಗೊಂಡಿದೆ ಎಂದು ವೈದ್ಯ ಮುಜೀಬ್ ತಿಳಿಸಿದರು. ಶುಕ್ರವಾರವೂ ಚಿಕಿತ್ಸೆ ಮುಂದುವರಿದಿದೆ.