ಮಡಿಕೇರಿ, ಚಾಮರಾಜನಗರದಲ್ಲಿ ಮಿತಿಮೀರುತ್ತಿದೆ ಕಾಡಾನೆ ಹಾವಳಿ
ಮಡಿಕೇರಿ, ಜುಲೈ 6: ಮಡಿಕೇರಿ, ಚಾಮರಾಜನಗರದ ಅನೇಕ ಕಡೆಗಳಲ್ಲಿ ದಿನನಿತ್ಯ ಕಾಡಾನೆಗಳ ಭೀತಿ ಎದುರಾಗಿದೆ. ಗ್ರಾಮಗಳಲ್ಲಿ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲ್ಪಡುವ ಅನೇಕ ಕಡೆಗಳಲ್ಲಿ ಕಾಡಾನೆಗಳು ದಿನನಿತ್ಯ ದಾಳಿ ನಡೆಸುತ್ತಿವೆ.
ಚಾಮರಾಜನಗರದ ಎಚ್.ಡಿ.ಕೋಟೆ ಬಳಿಯ ಅನೇಕ ಕಡೆಗಳಲ್ಲಿ ದಾಳಿಯಾಗುತ್ತಿದ್ದರೆ, ಮತ್ತೊಂದೆಡೆ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ತೋಟದ ಒಳಗೆ ನುಗ್ಗಿವೆ. ಅಲ್ಲದೇ ರಸ್ತೆಗೆ ಬಂದು ಅತ್ತಿಂದಿತ್ತ ಓಡಾಡಿದ ಪರಿಣಾಮ ಶಾಲೆಗೆ ಹೋಗುವ ಮಕ್ಕಳು, ವಾಹನ ಸವಾರರು ಭಯಭೀತರಾಗಿದ್ದಾರೆ.
ಕೊಡಗಿನಲ್ಲಿ ಕಾಡಾನೆ ದಾಳಿ; ವಿದ್ಯಾರ್ಥಿ, ಇಬ್ಬರು ಮಹಿಳೆಯರಿಗೆ ಗಾಯ
ಕೊಡಗನಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಕಾಡಾನೆಗಳು ಕಾಫಿ ತೋಟಗಳಲ್ಲಿ ಸ್ವಚ್ಛಂದವಾಗಿ ವಿಹರಿಸಿ ತೋಟದತ್ತ ಸಾಗುತ್ತಿದ್ದ ಮಾಲೀಕರು ಹಾಗೂ ಕಾರ್ಮಿಕರ ಕಣ್ಣಿಗೆ ಬಿದ್ದಿವೆ. ನಾಯಿಗಳ ಬೊಗಳುವಿಕೆ ಮತ್ತು ಪಟಾಕಿ ಸದ್ದಿನಿಂದ ಬೆದರಿದ ಆನೆಗಳು ಏಕಾಏಕಿ ರಸ್ತೆಗೆ ಬಂದ ಪರಿಣಾಮ ಜನರು ಸಹ ಚೆಲ್ಲಾಪಿಲ್ಲಿಯಾದರು. ಗ್ರಾಮಸ್ಥರು ಸೇರಿಕೊಂಡು ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಆನೆಗಳು ಓಡಿದವೇ ಹೊರತು ಅರಣ್ಯ ಪ್ರದೇಶವನ್ನು ಸೇರುವ ಪ್ರಯತ್ನ ಮಾಡಲಿಲ್ಲ.
ಕುಶಾಲನಗರದ ವಲಯ ಅಧಿಕಾರಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಓಡಿಸುವ ಕೆಲಸ ಮಾಡಿದರು.
ಹಾಸನೂರಿನಲ್ಲಿ ಕಬ್ಬಿನ ಲಾರಿ ಅಡ್ಡ ಹಾಕಿದ ಒಂಟಿ ಸಲಗ
ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೋಟ, ಗದ್ದೆ ಮತ್ತು ಕೃಷಿ ಫಸಲಿಗೆ ಸೀಮಿತವಾಗಿತ್ತು. ಇದೀಗ ನಾಯಿ, ಮನುಷ್ಯರು ಮತ್ತು ಪಟಾಕಿಯ ಭಯವನ್ನು ಮೀರಿ ಆನೆಗಳು ರಸ್ತೆಗೆ ಬಂದು ಹಗಲಿನ ವೇಳೆಯಲ್ಲೇ ತಾನು ನಡೆದದ್ದೇ ದಾರಿ ಎಂದು ಭಯ ಹುಟ್ಟಿಸುತ್ತಿವೆ. ಸ್ಥಳೀಯರಲ್ಲಿ ಆತಂಕ ತುಂಬಿವೆ. ಅರಣ್ಯ ಇಲಾಖೆ ಹೆಚ್ಚಿನ ಜವಾಬ್ದಾರಿಯಿಂದ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕೆಂಬುದು ಜನರ ಕೋರಿಕೆಯಾಗಿದೆ.