Breaking; ಹಾಸನ ಮಾತ್ರವಲ್ಲ ಕೊಡಗಿನಲ್ಲೂ ಕಂಪಿಸಿದ ಭೂಮಿ
ಮಡಿಕೇರಿ, ಜೂನ್ 23: ಗುರುವಾರ ಬೆಳ್ಳಂಬೆಳಗ್ಗೆ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಮತ್ತು ನೇಗಳ್ಳೆ ಗ್ರಾಮದ ಜನತೆಗೆ ಮುಂಜಾನೆ ಭೂಕಂಪನದ ಅನುಭವವಾಗಿದೆ.
ಮಡಿಕೇರಿ ತಾಲೂಕಿನ ದೇವಸ್ತೂರು ಸೇರಿದಂತೆ ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಕಂಪನದ ಅನುಭವ ಆಗಿದೆ. ಮುಂಜಾನೆ 4:37ರ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ 3.4 ಮ್ಯಾಗ್ನಿಟ್ಯೂಡ್ನಲ್ಲಿ ಭೂಕಂಪನ ಉಂಟಾಗಿದೆ. ಪಕ್ಕದ ಹಾಸನ ಜಿಲ್ಲೆಯಲ್ಲೂ 3.4 ತೀವ್ರತೆ ಕಂಪನ ಉಂಟಾಗಿದ್ದು, ಅದರ ಕಂಪನದ ಅನುಭವ ಇಲ್ಲೂ ಆಗಿರಬಹುದು ಎಂದು ಶಂಕಿಸಲಾಗಿದೆ.
Breaking: ಹಾಸನ ಜಿಲ್ಲೆಯ ಹಲವಡೆ ಕಂಪಿಸಿದ ಭೂಮಿ, ಭೀತಿಯಲ್ಲಿ ಮನೆ ಹೊರಬಂದ ಜನರು
ಆದರೆ ಈ ಲಘು ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದೆ. ಕಳೆದ ವರ್ಷವೂ ಮಳೆಗಾಲದ ಆರಂಭದಲ್ಲಿ ಕೊಡುಗು ಜಿಲ್ಲೆಯಲ್ಲಿ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. 2018 ಮತ್ತು 2019ರಲ್ಲಿ ಭೂಮಿಯಿಂದ ಶಬ್ದ ಬಂದ ಬಳಿಕ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಇದರ ಬಗ್ಗೆ ವೈಜ್ಞಾನಿಕ ಲಿಂಕ್ ಅಲ್ಲದಿದ್ದರೂ ಜಿಲ್ಲೆಯ ಜನತೆಯಲ್ಲಿ ಆತಂಕ ಎದುರಾಗುತ್ತಿದೆ.
ಹಾಸನ ಜಿಲ್ಲೆಯಲ್ಲಿ ಕಂಪನ; ಹಾಸನ ಜಿಲ್ಲೆಯ ಹೊಳೆನರಸೀಪುರ, ಅರಕಲಗೂಡು, ಹಾಸನ ತಾಲೂಕಿನ ಹಲವು ಗ್ರಾಮಗಳಲ್ಲಿ ಮುಂಜಾನೆ 4:30 ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿ ನಿದ್ದೆ ಮಾಡುತ್ತಿದ್ದ ಜನರು ಮನೆಯಿಂದ ಹೊರ ಬಂದಿದ್ದರು.
ಅಫ್ಘಾನಿಸ್ತಾನ ಭೂಕಂಪ: ಸಾವಿರ ದಾಟಿದ ಸಾವಿನ ಸಂಖ್ಯೆ
ಹೊಳೆನರಸೀಪುರ ತಾಲೂಕಿನ ಮಲುಗನಹಳ್ಳಿ ಗ್ರಾಮ ಕಂಪನದ ಕೇಂದ್ರಬಿಂದು ಆಗಿದ್ದು ಭೂಮಿ ಅಡಿ 0.800 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ. ಈ ಭೂಕಂಪನದಿಂದ ಯಾವುದೇ ಹಾನಿಯಾಗುವುದಿಲ್ಲ. ಸೆಸ್ಮಿಕ್ ವಲಯ 2ರಲ್ಲಿ ಈ ಜಾಗ ಬರುವುದರಿಂದ ಹಾನಿಯ ಸಾಧ್ಯತೆ ಕಡಿಮೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್ಎನ್ಡಿಎಂಸಿ ಮಾಹಿತಿ ನೀಡಿದೆ.
ಹೊಳೆನರಸೀಪುರ, ಅರಕಲಗೂಡು ತಾಲ್ಲೂಕಿನ ಹನೆಮರನಹಳ್ಳಿ, ಕಾರಹಳ್ಳಿ ಸೇರಿ ಕೆಲವು ಗ್ರಾಮಗಳಲ್ಲಿ ಹಾಗೂ ಹಾಸನದ ಶಾಂತಿನಗತ, ಹೇಮಾವತಿ ನಗರ, ತಮ್ಲಾಪುರ ಭಾಗಗಳಲ್ಲಿ ಲಘು ಭೂಕಂಪನವಾಗಿದ್ದು ಮಲಗಿದ್ದ ಜನರು ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದರು.
ಬುಧವಾರ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ ಸಂಭವಿಸದ ಬೆನ್ನಲ್ಲೇ ಹಾಸನ, ಕೊಡಗು ಜಿಲ್ಲೆಯಲ್ಲಿ ಲಘುವಾಗಿ ಭೂಮಿ ಕಂಪಿಸಿದ್ದರಿಂದ ಜಿಲ್ಲೆಯ ನಿವಾಸಿಗಳು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.