ಹೆಚ್ಚಿದೆ ಮಳೆ; ನಾಗರಹೊಳೆ ಸಫಾರಿ ಸದ್ಯಕ್ಕೆ ರದ್ದು
ಮಡಿಕೇರಿ, ಜುಲೈ 17: ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ನಾಗರಹೊಳೆ ಉದ್ಯಾನದಲ್ಲೂ ಹೆಚ್ಚಿನ ಮಳೆಯಾಗುತ್ತಿದ್ದು, ಉದ್ಯಾನದೊಳಗೆ ಸಫಾರಿ ವಾಹನ ಮಣ್ಣಿನ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ ಕೊಡಗಿನ ಕುಟ್ಟ ಬಳಿಯ ನಾಣಚ್ಚಿ ಗೇಟ್, ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿ ಗೇಟ್ ಮತ್ತು ಎಚ್.ಡಿ. ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಬಳಿಯಿಂದ ಹೊರಡುತ್ತಿದ್ದ ಸಫಾರಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನಾಗರಹೊಳೆ ರಸ್ತೆಯಲ್ಲಿ ಪ್ರತಿ 500ಮೀಟರ್ಗೆ ಒಂದು ಹಂಪ್ ನಿರ್ಮಾಣ
ಈಗಾಗಲೇ ಉದ್ಯಾನವನದಲ್ಲಿ ಲಕ್ಷ್ಮಣತೀರ್ಥ ನದಿ ಹಾಗೂ ತೊರೆಗಳು ತುಂಬಿ ಹರಿಯುತ್ತಿದ್ದು, ಅರಣ್ಯದೊಳಗಿನ ತೋಡುಗಳಲ್ಲೂ ನೀರು ಹರಿದು ಕೆರೆ ಕಟ್ಟೆ ಸೇರಿಕೊಳ್ಳುತ್ತಿದೆ. ಇದರಿಂದಾಗಿ ಉದ್ಯಾನದೊಳಗೆ ವಾಹನ ಸಂಚರಿಸಲು ತೊಡಕಾಗಲಿದೆ.
ಈಗಾಗಲೇ ನಾಗರಹೊಳೆ ಉದ್ಯಾನವನದಲ್ಲಿ ಸಫಾರಿ ಮೂಲಕ ವನ್ಯಜೀವಿಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ವನ್ಯಪ್ರೇಮಿಗಳು ಆಗಮಿಸುತ್ತಿದ್ದಾರೆ. ಆದರೆ ಮಳೆ ಇವರ ಆಸೆಗೆ ಭಂಗ ತಂದಿದೆ. ಹಲವರು ವೀರನ ಹೊಸಳ್ಳಿಗೇಟ್ ನಿಂದ ನಾಣಚ್ಚಿ ಗೇಟ್, ಬಾಳೆಲೆವರೆಗಿನ ಮುಖ್ಯ ರಸ್ತೆಗಳಲ್ಲೇ ತೆರಳಿ ರಸ್ತೆಯ ಪಕ್ಕದಲ್ಲಿ ಸಿಗುವ ಪ್ರಾಣಿಗಳನ್ನು ನೋಡಿ ಸಂತಸಪಡುತ್ತಿದ್ದಾರೆ.
ನಾಗರಹೊಳೆ ಅಭಯಾರಣ್ಯದಲ್ಲಿ ಬಸ್ ಅನ್ನು ಅಟ್ಟಾಡಿಸಿಕೊಂಡು ಬಂದ ಗಜರಾಜ
"ರಾಷ್ಟ್ರೀಯ ಉದ್ಯಾನವನದ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಅರಣ್ಯದೊಳಗೆ ಸಫಾರಿ ವಾಹನ ಓಡಾಡಲಾಗದ ಸ್ಥಿತಿಯಿದೆ. ಈ ಕಾರಣ ತಾತ್ಕಾಲಿಕವಾಗಿ ಸಫಾರಿ ರದ್ದುಗೊಳಿಸಲಾಗಿದೆ. ಮಳೆ ಕಡಿಮೆಯಾದ ಬಳಿಕ ವಾಹನ ಓಡಾಡಲು ಆದಲ್ಲಿ ಮಾತ್ರ ಮತ್ತೆ ಸಫಾರಿ ಆರಂಭಿಸುತ್ತೇವೆ" ಎಂದು ತಿಳಿಸಿದ್ದಾರೆ ನಾಗರಹೊಳೆ ಸಿಎಫ್ ನಾರಾಯಣಸ್ವಾಮಿ.