ಸಂಸದರೇ ಎಲ್ಲಿದ್ದೀರಪ್ಪಾ?: ಪ್ರತಾಪ್ ಸಿಂಹ ವಿರುದ್ಧ ಕೊಡಗು ಕಾಂಗ್ರೆಸ್ ಅಸಮಾಧಾನ
ಮಡಿಕೇರಿ, ಜುಲೈ 25: ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆ ಅವೈಜ್ಞಾನಿಕವಾಗಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕರು ಹಾಗೂ ಸಂಸದರು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಸಂಸದರನ್ನು ಎಲ್ಲಿದ್ದೀರಪ್ಪ ಎಂದು ಪ್ರಶ್ನಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ಕಷ್ಟಗಳಿಗೆ ಸ್ಪಂದಿಸದ ಸಂಸದರು ಭಾವನಾತ್ಮಕ ವಿಚಾರಗಳನ್ನು ಕೆಣಕಲು ಮತ್ತು ಚುನಾವಣೆ ಸಂದರ್ಭ ಮತ ಯಾಚಿಸಲು ಮಾತ್ರ ಬರುತ್ತಾರೆ ಎಂದು ಆರೋಪಿಸಿದರು.
ಕೊಡಗಿನಲ್ಲಿ ಸದ್ಯ ಕೊರೊನಾ ಪ್ರಕರಣಗಳು ಎಷ್ಟಿವೆ? ಕಂಟೈನ್ಮೆಂಟ್ ವಲಯಗಳೆಷ್ಟು?
"ಕೊರೊನಾ ಸೋಂಕಿನ ನಿರ್ವಹಣೆ ಅವೈಜ್ಞಾನಿಕ"
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ನಿರ್ವಹಣೆ ಅವೈಜ್ಞಾನಿಕವಾಗಿದ್ದು, ಸೀಲ್ ಡೌನ್ ಪ್ರದೇಶದ ನಿವಾಸಿಗಳನ್ನು ಪ್ರಾಣಿಗಳಂತೆ ಕಾಣಲಾಗುತ್ತಿದೆ. ಯಾವುದೇ ಸೌಲಭ್ಯವನ್ನು ಒದಗಿಸದೆ ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ಟೀಕಿಸಿದರು.
ವೈರಸ್ ಇರುವುದೇ ಅನುಮಾನ
ಜಿಲ್ಲೆಯಲ್ಲಿ 314 ಸೋಂಕಿತರನ್ನು ಗುರುತಿಸಲಾಗಿದ್ದು, 73 ಸಕ್ರಿಯ ಪ್ರಕರಣಗಳು ಉಳಿದುಕೊಂಡಿವೆ. ಉಳಿದವರು ಗುಣಮುಖರಾಗಿದ್ದು, ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಒಂದು ಕಡೆ ಕೊರೊನಾ ವೈರಸ್ ಗೆ ಔಷಧಿ ಇಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಮತ್ತೊಂದೆಡೆ ಪಾಸಿಟಿವ್ ಪ್ರಕರಣದ ರೋಗಿಗಳು ಐದು ದಿನಗಳ ಚಿಕಿತ್ಸೆಯ ನಂತರ ಆರನೇಯ ದಿನ ಗುಣಮುಖರೆಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ವೈರಸ್ ಇದೆಯೇ, ಇಲ್ಲವೇ ಅಥವಾ ವಿನಾಕಾರಣ ಸರ್ಕಾರ ವೈಭವೀಕರಿಸುತ್ತಿದೆಯೇ ಎನ್ನುವ ಸಂಶಯ ಮೂಡುತ್ತಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳ; ಸೂಚನೆಗಳು
"ಇನ್ನು ಒಂದು ವಾರದಲ್ಲಿ ಕಾರ್ಯ ಆರಂಭ"
ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತು ಕೆಪಿಸಿಸಿಯೇ ಜನರ ನೆರವಿಗೆ ಧಾವಿಸಿದ್ದು, ಆರೋಗ್ಯ ಅಭಯ ಹಸ್ತ ಪ್ರತಿನಿಧಿಗಳ ಕಾರ್ಯಚಟುವಟಿಕೆ ಇನ್ನು ಒಂದು ವಾರದಲ್ಲಿ ಆರಂಭಗೊಳ್ಳಲಿದೆ. ಕೆಪಿಸಿಸಿಯ ವೈದ್ಯರ ತಂಡದಿಂದ ತರಬೇತಿ ಪಡೆದ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದರು.
ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಅನಿಸಿಕೆ
ಜಿಲ್ಲಾ ಕಾಂಗ್ರೆಸ್ನೊಳಗಿನ ಭಿನ್ನಾಭಿಪ್ರಾಯದ ಕುರಿತು ಮಾತನಾಡಿದ ಮಂಜುನಾಥ್ ಕುಮಾರ್, ಪಕ್ಷಕ್ಕೆ ನಿಷ್ಠರಾಗಿರುವವರು ಯಾರೂ ಗೊಂದಲವನ್ನು ಸೃಷ್ಟಿಸುತ್ತಿಲ್ಲ. ಬದಲಿಗೆ ಪಕ್ಷದಲ್ಲಿ ಕ್ರಿಯಾಶೀಲರಲ್ಲದವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ನಾನು ಹತಾಶನಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.