ಕೊಡಗಿನಲ್ಲಿ ಅಬ್ಬರಿಸುತ್ತಿರುವ ಮುಂಗಾರು: ಜಿಲ್ಲಾಡಳಿತ ಅಲರ್ಟ್
ಮಡಿಕೇರಿ, ಆಗಸ್ಟ್ 05: ಕೊಡಗಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿ ಸೇರಿದಂತೆ ಹೊಳೆ, ತೊರೆಗಳು ತುಂಬಿ ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಅಷ್ಟೇ ಅಲ್ಲದೆ ಭಾರೀ ಮಳೆ ಗಾಳಿಗೆ ಮರಗಳು ಧರೆಗುರುಳಿದ್ದು, ನದಿ ನೀರುಗಳು ಗದ್ದೆ, ತೋಟಕ್ಕೆ ನುಗ್ಗಿವೆ. ಕೆಲವೆಡೆ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿವೆ.
Recommended Video
ಜಿಲ್ಲೆಯಲ್ಲಿ ಮಳೆಯಿಂದ ಪ್ರವಾಹ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಪ್ರಕೃತಿ ವಿಕೋಪವನ್ನು ಎದುರಿಸಲು ಸರ್ವ ಸನ್ನದ್ಧಗೊಂಡಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಆ.5 ರಂದು ರೆಡ್ ಅಲರ್ಟ್ ಘೋಷಿಸಿದ್ದು, ಆ.6ರ ಬೆಳಗ್ಗೆಯಿಂದ ಆ.7ರ ಬೆಳಗ್ಗೆವರೆಗೆ ಆರೆಂಜ್ ಮತ್ತು ಆ.7ರ ಬೆಳಗ್ಗೆಯಿಂದ ಆ.8ರ ಬೆಳಗ್ಗೆವರೆಗೆ ಯೆಲ್ಲೋ ಮತ್ತು ಆ.8ರ ಬೆಳಗ್ಗೆಯಿಂದ ಆ.10ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
ಹಾರಂಗಿಯಿಂದ 10,689 ಕ್ಯುಸೆಕ್ ನೀರು ಹೊರಕ್ಕೆ
ಈ ನಡುವೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದಿಂದ 10,689 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಈ ಪ್ರಮಾಣವು ಯಾವುದೇ ಸಂದರ್ಭದಲ್ಲೂ ಹೆಚ್ಚಾಗುವ ಸಂಭವವಿರುವುದರಿಂದ ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಜೇಗೌಡ ಅವರು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 4 ದಿನ ಭಾರಿ ಮಳೆ ಎಚ್ಚರಿಕೆ
ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಆರ್ಭಟ ಹೆಚ್ಚಾಗಿ ಅನಾಹುತ ಸಂಭವಿಸುವ ಕಾರಣದಿಂದಾಗಿ ಜಿಲ್ಲಾಡಳಿತ ಆಲರ್ಟ್ ಆಗಿದ್ದು ಸಾರ್ವಜನಿಕರ ಸಹಾಯಕ್ಕಾಗಿ ಹಾಗೂ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಸಲುವಾಗಿ 24x7 ಕಂಟ್ರೋಲ್ ರೂಂ ತೆರೆಯಲಾಗಿದ್ದು ಸಾರ್ವಜನಿಕರು ದೂರವಾಣಿ ನಂ.08272-221077, ವಾಟ್ಸ್ ಆಪ್ ನಂ. 8550001077 ಸಂಪರ್ಕಿಸಬಹುದಾಗಿದೆ.
ತುರ್ತಾಗಿ ಸ್ಪಂದಿಸಿದ ಜಿಲ್ಲಾಡಳಿತ
ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಹಲವು ಅನಾಹುತ ಸಂಭವಿಸಿದ್ದು, ಜಿಲ್ಲಾಡಳಿತ ತಕ್ಷಣ ಸ್ಪಂದಿಸಿದೆ. ಶ್ರೀಮಂಗಲ ಹೋಬಳಿ ಹರಿಹರ ಗ್ರಾಮದ ನವೀನ್ ಎಂಬುವವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಚಾವಣಿಗೆ ಹಾಕಲಾದ ಶೀಟ್ಗಳು ಹಾನಿಯಾಗಿದೆ. ಚೆಸ್ಕಾಂ ಇಲಾಖಾ ಪರಿಹಾರ ತಂಡ ಭೇಟಿ ನೀಡಿ ಸೂಕ್ತ ಕ್ರಮ ವಹಿಸಲಾಗಿದೆ. ಬಿಟ್ಟಂಗಾಲ-ಬಿ.ಶೆಟ್ಟಿಗೇರಿ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ. ಸೋಮವಾರಪೇಟೆ ತಾಲ್ಲೂಕು ಮಕ್ಕಂದೂರು (ಉದಯಗಿರಿ) ಬಳಿ ಮರ ಬಿದ್ದು, ಮಡಿಕೇರಿ-ಸೋಮವಾರಪೇಟೆ ರಸ್ತೆ ಬಂದ್ ಆಗಿದ್ದು, ತೆರವುಗೊಳಿಸಲಾಗಿದೆ.
ಕ್ಲಬ್ ಮಹೀಂದ್ರ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ. ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ತಡರಾತ್ರಿ ಬರೆ ಜರಿದಿದೆ. ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಪ್ರವಾಹ ಉಂಟಾಗುವ ಸಂಭವವಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಪಂಚಾಯಿತಿ ವತಿಯಿಂದ ಮಾಹಿತಿ ನೀಡಲಾಗಿದೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಸ್ಥಳಕ್ಕೆ ರಿವರ್ ರಾಫ್ಟಿಂಗ್ ತಂಡವನ್ನು ನಿಯೋಜಿಸಲಾಗಿದೆ.
ಭದ್ರತಾ ತಂಡಗಳ ನಿಯೋಜನೆ
ವಿರಾಜಪೇಟೆ ತಾಲೂಕು ಗೋಣಿಕೊಪ್ಪದಲ್ಲಿ ಸಹ ಭಾರೀ ಮಳೆಯಿಂದ ಪ್ರವಾಹ ಉಂಟಾಗುವ ಸಂಭವವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಿವರ್ ರಾಫ್ಟಿಂಗ್ ತಂಡ ಮತ್ತು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಮಡಿಕೇರಿ ನಗರದ ಮೈತ್ರಿಹಾಲ್ ನ ಶೀಟ್ ಗಳು ಹಾರಿ ಹೋಗಿದ್ದು, ರಿಪೇರಿಗೆ ಕ್ರಮ ವಹಿಸಲಾಗಿದೆ. ಪ್ರಕೃತಿ ವಿಕೋಪದ ಮಾಹಿತಿ ಬಂದೊಡನೆ ಜಿಲ್ಲಾಡಳಿತದ ಪರಿಹಾರ ತಂಡವು ಕಾರ್ಯೋನ್ಮುಖವಾಗುತ್ತಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಸ್ಥಳೀಯ ಜನರು ಮತ್ತು ಸ್ವಯಂ ಸೇವಕರ ನೆರವಿನಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ. ಈ ನಡುವೆ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.
ಕೊಡಗಿನಲ್ಲಿ ಆಶ್ಲೇಷ ಅತಿರೇಕ: ಉಕ್ಕಿ ಹರಿಯುತ್ತಿರುವ ನದಿಗಳು
24 ಗಂಟೆಯೊಳಗೆ 142.59 ಮಿ.ಮೀ. ಮಳೆ
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 142.59 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 154 ಮಿ.ಮೀ, ವಿರಾಜಪೇಟೆಯಲ್ಲಿ 158 ಮಿ.ಮೀ. ಮತ್ತು ಸೋಮವಾರಪೇಟೆಯಲ್ಲಿ 115 ಮಿ.ಮೀ. ಮಳೆ ಸುರಿದಿದೆ. ವಿವಿಧೆಡೆ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ ನಾಪೋಕ್ಲು 126.20, ಸಂಪಾಜೆ 75, ಭಾಗಮಂಡಲ 190.20, ವಿರಾಜಪೇಟೆ ಕಸಬಾ 103.60, ಹುದಿಕೇರಿ 279.40, ಶ್ರೀಮಂಗಲ 144, ಪೊನ್ನಂಪೇಟೆ 195, ಅಮ್ಮತ್ತಿ 46, ಬಾಳೆಲೆ 180, ಸೋಮವಾರಪೇಟೆ ಕಸಬಾ 119.40, ಶನಿವಾರಸಂತೆ 117, ಶಾಂತಳ್ಳಿ 220, ಕೊಡ್ಲಿಪೇಟೆ 150.20, ಕುಶಾಲನಗರ 29.20, ಸುಂಟಿಕೊಪ್ಪ 55.30 ಮಿ.ಮೀ.ಮಳೆಯಾಗಿದೆ.