ಕೊಡಗಿನಲ್ಲಿ ತಗ್ಗಿದ ಮಳೆ; ತಲಕಾವೇರಿಯಲ್ಲಿ ಭಕ್ತರ ದಂಡು
Array
ಮಡಿಕೇರಿ, ಸೆಪ್ಟೆಂಬರ್ 28: ಕೊರೊನಾ ಸೋಂಕಿನಿಂದ ವಿಧಿಸಲಾಗಿದ್ದ ಲಾಕ್ ಡೌನ್ ತೆರವಾದ ನಂತರವೂ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಸಿಗರು ಇತ್ತ ತಲೆ ಹಾಕಿರಲಿಲ್ಲ. ಮಳೆಯಿಂದ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸದ ನಂತರವಂತೂ ಪ್ರವಾಸಿಗರು ತಲಕಾವೇರಿಯ ದೇಗುಲಕ್ಕೂ ಭೇಟಿ ನೀಡಲು ಹಿಂಜರಿದಿದ್ದರು.
ಈ ನಡುವೆ ವಾರದ ಹಿಂದೆಯೂ ಜಿಲ್ಲೆಯನ್ನು ಮಳೆ ಆವರಿಸಿಕೊಂಡಿತ್ತು. ಇದೀಗ ಮಳೆ ಕೊಂಚ ತಗ್ಗಿದ್ದು, ತಲಕಾವೇರಿಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಐದು ತಿಂಗಳ ನಂತರ ಭಕ್ತರು ಕಾವೇರಿ ದೇವಿಯ ದರ್ಶನ ಪಡೆಯಲು ಜಿಲ್ಲೆಗೆ ಬರುತ್ತಿದ್ದಾರೆ. ಇಲ್ಲಿನ ಪ್ರವಾಸಿ ತಾಣಗಳತ್ತಲೂ ಮುಖ ಮಾಡುತ್ತಿದ್ದಾರೆ.
ಐದು ತಿಂಗಳ ಕಾಲ ಎಲ್ಲವೂ ಬಂದ್ ಆಗಿತ್ತು
ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ವಿಧಿಸಲಾಗಿದ್ದು, ಐದು ತಿಂಗಳ ಕಾಲ ಜಿಲ್ಲೆಯ ಪ್ರವಾಸಿ ತಾಣಗಳನ್ನು, ಪ್ರಮುಖ ದೇಗುಲಗಳನ್ನು ಬಂದ್ ಮಾಡಲಾಗಿತ್ತು. ಆಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ 100% ಕುಸಿದಿತ್ತು.
ತಲಕಾವೇರಿಯಲ್ಲಿ ಅ.17 ರಂದು ಬೆಳಿಗ್ಗೆ 7.03 ಗಂಟೆಗೆ ತೀರ್ಥೋದ್ಭವ
ನಂತರ ಅಡ್ಡಿಯಾದ ಮಳೆ
ಐದು ತಿಂಗಳ ನಂತರ ಲಾಕ್ ಡೌನ್ ತೆರವು ಮಾಡಿ, ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟರೂ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಮತ್ತೆ ಪ್ರವಾಸಿಗರು ಇತ್ತ ಸುಳಿಯದಂತೆ ಮಾಡಿತ್ತು. ತೀವ್ರ ಮಳೆಯಿಂದ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿದ ನಂತರವಂತೂ ಯಾರೂ ಇತ್ತ ಬರಲಿಲ್ಲ. ತಲಕಾವೇರಿ ದೇಗುಲದ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಸಾವಿನ ನಂತರ ದೇಗುಲದಲ್ಲಿ ಪೂಜೆಯ ಕುರಿತು ಚರ್ಚೆಗಳು ಸಾಗಿದ್ದವು. ಜೊತೆಗೆ ಮಳೆಯಿಂದ ಮತ್ತೆ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿತ್ತು.
ತಲಕಾವೇರಿಯಲ್ಲಿ ಹೆಚ್ಚುತ್ತಿರುವ ಪ್ರವಾಸಿಗರು
ಆದರೆ ಇದೀಗ ಮಳೆಯ ಪ್ರಮಾಣ ಸ್ವಲ್ಪ ತಗ್ಗಿದೆ. ಜನರಿಂದ ಮಳೆಯ ಭೀತಿಯೂ ಕಡಿಮೆಯಾಗಿ, ತಲಕಾವೇರಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ತಲಕಾವೇರಿಗೆ ಬಂದು ದೇವಿಯ ದರ್ಶನ ಪಡೆದು ಪೂಜೆ ನಡೆಸಿ ಭಕ್ತರು ಸಂತಸಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಬರುತ್ತಿರುವುದು ಕಂಡುಬಂದಿದೆ.
ಕೊಡಗಿನಲ್ಲಿ ರೆಡ್ ಅಲರ್ಟ್; ಭಾಗಮಂಡಲದಲ್ಲಿ ಗಾಳಿ, ಮಳೆ ಅಬ್ಬರ
ಅಕ್ಟೋಬರ್ 17ರಂದು ತೀರ್ಥೋದ್ಭವ
ಅಕ್ಟೋಬರ್ ತಿಂಗಳ 17 ರಂದು ತುಲಾ ಸಂಕ್ರಮಣದಂದು ಕಾವೇರಿ ತೀರ್ಥೋದ್ಭವವೂ ಇರುವುದರಿಂದ ವಿವಿಧ ಪೂಜಾ ಕೈಂಕರ್ಯ ಗಳು ಆರಂಭಗೊಂಡಿವೆ. ಹೀಗಾಗಿ ಭಕ್ತರೂ ತಲಕಾವೇರಿ ಮತ್ತು ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.