ಕೊಡಗಿನಲ್ಲಿ ಮುಂಗಾರು ಚುರುಕು; ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಜಂಟಿ ತಾಲೀಮು
ಮಡಿಕೇರಿ, ಜೂನ್ 27: ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಪ್ರವಾಹ, ಇನ್ನಿತರ ಪರಿಸ್ಥಿತಿ ಎದುರಾದರೆ ತಕ್ಷಣಕ್ಕೆ ಪ್ರಥಮ ಚಿಕಿತ್ಸೆ ನೀಡುವ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಸಲುವಾಗಿ ಎನ್ಡಿಆರ್ ಎಫ್, ಪೊಲೀಸ್ ಇಲಾಖೆ, ಹೋಂಗಾರ್ಡ್ ಮತ್ತು ಅಗ್ನಿಶಾಮಕ ಇಲಾಖೆಯು ಜಂಟಿಯಾಗಿ ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಜಂಟಿ ತಾಲೀಮು ನಡೆಸಿದೆ.
ಪ್ರವಾಹ ಪರಿಸ್ಥಿತಿ ನಿರ್ವಹಣೆ ಮತ್ತು ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಈ ಜಂಟಿ ತಾಲೀಮು ನಡೆದಿದ್ದು, ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅದನ್ನು ಸಮಗ್ರವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯು ಸನ್ನದ್ಧವಾಗಿದೆ ಎಂಬ ಧೈರ್ಯವನ್ನು ಜಿಲ್ಲೆಯ ಜನತೆಗೆ ನೀಡಲಾಗಿದೆ.
ಮುಂಗಾರು ಪ್ರಾರಂಭ: ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡಗಳಿಗೆ ತರಬೇತಿ
ಅಗ್ನಿಶಾಮಕ ದಳದ ಸಿಬ್ಬಂದಿ ಸನ್ನದ್ಧ
ಕಳೆದ ಎರಡು ವರ್ಷವೂ ಪ್ರವಾಹ ಮತ್ತು ಭೂಕುಸಿತದಿಂದ ಕೊಡಗು ತತ್ತರಿಸಿತ್ತು. ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದ್ದಲ್ಲದೆ, ಜೀವ ಹಾನಿಯೂ ಸಂಭವಿಸಿತ್ತು. ಹೀಗಾಗಿ ಈ ಬಾರಿ ಅಂತಹ ಸಂಕಷ್ಟ ಎದುರಾದರೆ ಅದನ್ನು ನಿಭಾಯಿಸುವ ಸಲುವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಈಗಿನಿಂದಲೇ ಸನ್ನದ್ಧವಾಗಿ ನಿಂತಿರುವುದು ಜನತೆಯಲ್ಲಿ ನೆಮ್ಮದಿ ತಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಮಡಿಕೇರಿ, ಗೋಣಿಕೊಪ್ಪ, ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ನಾಲ್ಕು ಠಾಣೆಗಳು ಕಾರ್ಯ ಸನ್ನದ್ಧವಾಗಿದ್ದು, ಇಲಾಖೆಯಿಂದ ಮತ್ತು ಜಿಲ್ಲಾಡಳಿತದಿಂದ ಬೋಟ್ಗಳು, ಲೈಫ್ ಜಾಕೆಟ್ ಗಳು ಸೇರಿದಂತೆ ಅವಶ್ಯ ರಕ್ಷಣಾ ಸಾಮಗ್ರಿಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.
ಪ್ರತಿ ಸಿಬ್ಬಂದಿಗೂ ತರಬೇತಿ
ಕಳೆದ ಎರಡು ವರ್ಷಗಳ ಅನುಭವದಿಂದಾಗಿ ಈ ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮೊದಲೇ ಜನರನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡಿ, ಪ್ರವಾಹ ಸಂದರ್ಭದಲ್ಲಿ ನೀರಿನಲ್ಲಿಳಿದು ಕಾರ್ಯನಿರ್ವಹಿಸಲು ಲೈಫ್ ಜಾಕೆಟ್ ಗಳನ್ನು ನೀಡಿದ್ದು, ಜತೆಗೆ ಬೋಟ್ ಚಾಲನೆಯ ಬಗ್ಗೆ ಪ್ರತಿ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಇನ್ನು ಉದಯಗಿರಿ ಗುಡ್ಡ ಕುಸಿತ ಪ್ರದೇಶದಲ್ಲಿಯೂ ಭೂಕುಸಿತ ಸಂದರ್ಭ ರೋಪ್ ಬಳಕೆಯ ಬಗ್ಗೆ ಮತ್ತು ತೊಂದರೆಗೊಳಗಾದವರನ್ನು ರಕ್ಷಿಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ.
ಮಳೆಗಾಲದ ತುರ್ತು ಪರಿಸ್ಥಿತಿ ಬಗ್ಗೆ ನಿಗಾ
ಕೋವಿಡ್-19ರ ತುರ್ತು ಪರಿಸ್ಥಿತಿಯ ಸಂದರ್ಭ ಮಳೆಗಾಲವನ್ನು ನಿರ್ವಹಿಸಬೇಕಿದ್ದು, ಮಳೆಗಾಲದ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಅಗ್ನಿಶಾಮಕ ಇಲಾಖೆ ಸಜ್ಜಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು, ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದ್ದು, ಪ್ರಾಕೃತಿಕ ವಿಕೋಪ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯು ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಆರಂಭಕ್ಕೂ ಮುನ್ನವೇ ತಾಲೀಮು
2018 ಮತ್ತು 2019ರಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಮತ್ತು ಜೀವ ಹಾನಿಗಳು ಸಂಭವಿಸಿದ್ದವು. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತಾಲೀಮು ನೀಡಲಾಗಿದೆ ಎಂದು ಚಂದನ್ ಅವರು ತಿಳಿಸಿದ್ದಾರೆ. ತರಬೇತಿ ಸಮಯದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ ಸುಮನ್ ಅವರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದ್ದಾರೆ.