ಕೊಡಗಿಗೆ 1 ಕೋಟಿ ನೀಡಿದ ಕೇಂದ್ರ ಸಚಿವೆ, ಹೆಚ್ಚಿನ ನೆರವಿಗೆ ಮನವಿ ಮಾಡುವುದಾಗಿ ಭರವಸೆ
ಮಡಿಕೇರಿ, ಆಗಸ್ಟ್ 24: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ಸಂಸದರ ನಿಧಿಯಿಂದ ಒಂದು ಕೋಟಿ ರೂಪಾಯಿಯನ್ನು ಕೊಡಗಿಗೆ ನೀಡುವುದಾಗಿ ಘೋಷಿಸಿದರು.
ಕೊಡಗಿನ ಪ್ರವಾಹ ಪರಿಸ್ಥಿತಿ ಪರಿಶೀಲಿಸಿ, ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಪ್ರವಾಹ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಕೊಡಗಿನಲ್ಲಿ ರಕ್ಷಣಾ ಕಾರ್ಯಕ್ಕೆಂದು ರಕ್ಷಣಾ ತಂಡಕ್ಕೆ 7 ಕೋಟಿ ಬಿಡುಗಡೆ ಮಾಡಲಾಗವುದು ಎಂದು ಭರವಸೆ ನೀಡಿದ ಅವರು, ನಾನು ಇಲ್ಲಿ ಕಂಡಿದ್ದನ್ನು ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಗೂ ಮುನ್ನಾ ರಕ್ಷಣಾ ಕಾರ್ಯದಲ್ಲಿ ನಿರತ ಅಧಿಕಾರಿಗಳು, ಸ್ಥಳೀಯ ಶಾಸಕರು, ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಿರ್ಮಲಾ ಸೀತಾರಾಮನ್ ಅವರು ಚರ್ಚೆ ನಡೆಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಬರಲಿದೆ
ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಆಗಮಿಸಿ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ನೀಡಿದ ಬಳಿಕ ಜಿಲ್ಲೆಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಮೋದಿ ಅವರನ್ನು ಭೇಟಿಯಾಗಿ ನೆರವು ಕೇಳುವೆ
ಶೀಘ್ರದಲ್ಲೆ ಪ್ರಧಾನಿ ಮೋದಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಕೊಡಗಿನ ಪರಿಸ್ಥಿತಿ ವಿವರಿಸಿ ನೆರವಿಗೆ ಮನವಿ ಮಾಡುವೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ರಕ್ಷಣಾ ಕಾರ್ಯ ಸುಗಮ, ಪೊಲೀಸ್ ಸಿಬ್ಬಂದಿ ಒಂದು ದಿನದ ಸಂಬಳ ಕೊಡಗಿಗೆ
ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ
ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ, ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜೆ.ಬೋಪಯ್ಯ, ಸಂಸದರಾದ ಪ್ರತಾಪ್ ಸಿಂಹ ಸ್ಥಳೀಯ ಅಧಿಕಾರಿಗಳು ಕೊಡಗಿನಲ್ಲಿ ಆಗಿರುವ ಹಾನಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಹಾನಿಗೊಳಗಾದ ಸ್ಥಳ ಸಂದರ್ಶಿಸಿದ ಸಚಿವೆ
ಸುದ್ದಿಗೋಷ್ಠಿಗೆ ಮೊದಲು ಅವರು ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಸಂದರ್ಶಿಸಿದರು. ಪರಿಹಾರ ಕೇಂದ್ರಗಳಿಗೆ ತೆರಳು ನಿರಾಶ್ರಿತರೊಂದಿಗೆ ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಚಿವೆಗೆ ಮಾಹಿತಿ ನೀಡಿದರು. ಪರಿಶೀಲನೆ ಸಮಯ ಸಂಸದ ಪ್ರತಾಪ್ ಸಿಂಹ ಜೊತೆಯಲ್ಲಿದ್ದರು.