ಮಡಿಕೇರಿಯಲ್ಲಿ ಕುಟ್ಟಪ್ಪ ಸ್ಮರಣೆ: ಹಿಂದೂ ಮುಖಂಡರ ಬಂಧನ
ಮೈಸೂರು, ನವೆಂಬರ್ 10; ಟಿಪ್ಪು ಜಯಂತಿ ವೇಳೆ ಮಡಿಕೇರಿ ನಗರದಲ್ಲಿ ನಡೆದ ಘರ್ಷಣೆಯಲ್ಲಿ ಮೃತಪಟ್ಟ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಸ್ಮರಣೆಯನ್ನು ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾಡುತ್ತಿದ್ದು, ಈ ಸಂಬಂಧ ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯ ನಡೆಸಲಾಗುತ್ತಿದೆ.
ಈ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಿಂದೂ ಸಂಘಟನೆಯ ಪ್ರಮುಖರನ್ನು ಮಡಿಕೇರಿಯಲ್ಲಿ ಬಂಧಿಸಲಾಗಿದೆ. ಮಡಿಕೇರಿ ನಗರದಲ್ಲಿರುವ ಓಂಕಾರೇಶ್ವರ ಮತ್ತು ಚೌಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಹೊರ ಬಂದ ಹಿಂದೂ ಸಂಘಟನೆಯ ಪ್ರಮುಖರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಸರ್ಕಾರ ಟಿಪ್ಪು ಇತಿಹಾಸ ತಿರುಚಲು ಬಿಡಲ್ಲ: ಡಿ.ಕೆ ಶಿವಕುಮಾರ್
ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕುಟ್ಟಪ್ಪ ಸ್ಮರಣಾರ್ಥ ಶಾಂತಿ ಪೂಜೆಯನ್ನು ಏರ್ಪಡಿಸಲಾಗಿತ್ತು. ಈ ಸಂಬಂಧ ಹಿಂದೂ ಸಂಘಟನೆಯ ಪ್ರಮುಖರು ಓಂಕಾರೇಶ್ವರ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ದೇಗುಲದಿಂದ ಹೊರ ಬರುತ್ತಿದ್ದಂತೆಯೇ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಿಂದೂ ಸಂಘಟನೆಯ ಪ್ರಮುಖರನ್ನು ಬಂಧಿಸಲಾಯಿತು.
ಟಿಪ್ಪು ಹೆಸರೆತ್ತಿದರೆ ಕೊಡಗು ಕೆಂಡವಾಗುವುದೇಕೆ?
ಇನ್ನೊಂದೆಡೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಮೃತ ಕುಟ್ಟಪ್ಪ ಸ್ಮರಣಾರ್ಥ ಮಡಿಕೇರಿ ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕುಟ್ಟಪ್ಪ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರಾಧ್ಯಕ್ಷ ಮನುಮಂಜುನಾಥ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಹಾಗೂ ಸದಸ್ಯರುಗಳು ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಟಿಪ್ಪು ಜಯಂತಿ ಆಚರಣೆ ರದ್ದು: ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಆದರೆ ಪೂಜೆ ಮುಗಿಸಿಕೊಂಡು ದೇಗುಲದಿಂದ ಹೊರ ಬರುತ್ತಿದ್ದಂತೆಯೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೆ ತಂದಿದ್ದರು.
ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಅದರಲ್ಲೂ ಕೊಡಗಿನವರು ತೀವ್ರವಾಗಿಯೇ ವಿರೋಧಿಸಿದ್ದರು. ಹೀಗಾಗಿ 10 ನವೆಂಬರ್ 2015ರಲ್ಲಿ ಒಂದೆಡೆ ಟಿಪ್ಪು ಜಯಂತಿ ಪರವಾಗಿ ಮೆರವಣಿಗೆ ನಡೆದರೆ, ಮತ್ತೊಂದೆಡೆ ವಿರುದ್ಧವಾಗಿ ಹಿಂದೂ ಸಂಘಟನೆಗಳು ಮೆರವಣಿಗೆ ನಡೆಸಿದ್ದವು.
ಈ ಸಂದರ್ಭ ನಡೆದ ಗಲಾಟೆಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ದೇವಪ್ಪಂಡ ಕುಟ್ಟಪ್ಪ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಮತ್ತೊಂದು ಹತ್ಯೆಯೂ ನಡೆದಿತ್ತು. ಇಡೀ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶಾಂತಿಯಿಂದ ಕೂಡಿದ ಜಿಲ್ಲೆಯಲ್ಲಿ ಅಂದು ನಡೆದ ಘಟನೆ ಮರೆಯಲಾರದ್ದಾಗಿತ್ತು. ಈ ಘಟನೆ ನಡೆದ ಬಳಿಕ ಪ್ರತಿ ವರ್ಷವೂ ಹುತಾತ್ಮ ಕುಟ್ಟಪ್ಪ ನೆನಪಿನಾರ್ಥ ಶಾಂತಿ ಪೂಜೆ ನಡೆಸುತ್ತಾ ಬರಲಾಗುತ್ತಿದೆ. ಬುಧವಾರ ನವೆಂಬರ್ 10ರಂದು ಪೂಜೆ ನಡೆಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಆವರಣ ಮತ್ತು ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಟಿಪ್ಪು ಜಯಂತಿ ರದ್ದು; ಟಿಪ್ಪು ಜಯಂತಿ ಆಚರಣೆ ರಾಜ್ಯದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. 2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಮಾಡುವ ಕುರಿತು ಆದೇಶ ಹೊರಡಿಸಿದ್ದರು. ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿತ್ತು.
ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಲಾಯಿತು. 2019ರ ಜುಲೈ 30ರಂದು ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿ ಆದೇಶ ಹೊರಡಿಸಿತು.
ಟಿಪ್ಪು ಜಯಂತಿ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಉತ್ತರ ಪ್ರದೇಶದ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.
Recommended Video
ಅರ್ಜಿಯ ವಿಚಾರಣೆ ವೇಳೆ ಟಿಪ್ಪು ಜಯಂತಿ ರದ್ದು ಆದೇಶವನ್ನು ಮರುಪರಿಶೀಲನೆ ಮಾಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು.