ತಲಕಾವೇರಿ ಅರ್ಚಕ ಪುತ್ರಿಯರ ಮತಾಂತರ; ಎರಡು ತಿಂಗಳಾದರೂ ಸಿಕ್ಕಿಲ್ಲ ಪರಿಹಾರ
ಮಡಿಕೇರಿ, ಅಕ್ಟೋಬರ್ 5: ಭಾರೀ ಮಳೆಯಿಂದಾಗಿ ಎರಡು ತಿಂಗಳ ಹಿಂದೆ ತಲಕಾವೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಅರ್ಚಕ ನಾರಾಯಣ್ ಆಚಾರ್ ಅವರ ಮಕ್ಕಳಿಗೆ ಇನ್ನೂ ಪರಿಹಾರದ ಹಣ ದೊರೆತಿಲ್ಲ.
ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಕುಟುಂಬದ ಐವರು ಮೃತಪಟ್ಟಿದ್ದರು. ಈ ಘಟನೆ ನಡೆದು ಎರಡು ತಿಂಗಳೇ ಕಳೆದಿದೆ. ಆದರೆ ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಇನ್ನೂ ಸರ್ಕಾರದ ಪರಿಹಾರ ಸಿಕ್ಕಿಲ್ಲ. ಈ ಹಿಂದೆ ನಾರಾಯಣ ಆಚಾರ್ ಅವರ ಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಇಬ್ಬರಿಗೂ ತಲಾ ಎರಡೂವರೆ ಲಕ್ಷದ ಪರಿಹಾರದ ಚೆಕ್ ವಿತರಿಸಲಾಗಿತ್ತು. ಅವರು ಮತಾಂತರಗೊಂಡು ಅವರ ಹೆಸರುಗಳನ್ನು ಬದಲಾಯಿಸಿಕೊಂಡಿದ್ದರಿಂದ ಪರಿಹಾರದ ಹಣ ಪಡೆಯಲು ತೊಡಕಾಗಿತ್ತು.
ಅರ್ಚಕ ಪುತ್ರಿಯರಿಗೆ ಚೆಕ್ ನೀಡಿದರೆ ಹೋರಾಟ ಅನಿವಾರ್ಯ: ರವಿ ಚಂಗಪ್ಪ
ಐದು ಲಕ್ಷ ಪರಿಹಾರ ಘೋಷಿಸಿದ್ದ ಸರ್ಕಾರ
ತಂದೆ ನಾರಾಯಣ್ ಆಚಾರ್ ಮತ್ತು ಕುಟುಂಬ ಭೂಕುಸಿತದಲ್ಲಿ ಕಣ್ಮರೆಯಾಗುತ್ತಿದ್ದಂತೆ ಆಸ್ಟ್ರೇಲಿಯಾದಿಂದ ಬಂದಿದ್ದ ಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ನಮ್ಮ ತಂದೆ ತಾಯಿ ಕಣ್ಮರೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಭೂಕುಸಿತವಾಗಿ ಮೂರು ದಿನಗಳಲ್ಲಿ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ದೊರೆತಿತ್ತು. ಹೀಗಾಗಿ ಸರ್ಕಾರ ಐದು ಲಕ್ಷ ರೂಪಾಯಿ ಘೋಷಣೆ ಮಾಡಿ ಇಬ್ಬರು ಹೆಣ್ಣುಮಕ್ಕಳಿಗೆ ತಲಾ ಎರಡೂವರೆ ಲಕ್ಷದಂತೆ ಪರಿಹಾರದ ಚೆಕ್ ನೀಡಿತ್ತು.
ಚೆಕ್ ನೀಡುವುದನ್ನು ವಿರೋಧಿಸಿದ್ದ ರವಿ ಚಂಗಪ್ಪ
ಚೆಕ್ ಸ್ವೀಕರಿಸಿದ ಇಬ್ಬರು ಹೆಣ್ಣು ಮಕ್ಕಳು, ನಮ್ಮ ಹೆಸರು ಬದಲಾಗಿದೆ ಎಂದು ಮಡಿಕೇರಿ ತಹಶೀಲ್ದಾರ್ ಅವರಿಗೆ ಚೆಕ್ ವಾಪಸ್ ಮಾಡಿದ್ದರು. ಆಗ ಇಬ್ಬರು ಮತಾಂತರಗೊಂಡಿರುವ ವಿಷಯ ತಿಳಿದುಬಂದಿತ್ತಯು. ಚೆಕ್ ನಲ್ಲಿ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಎಂದು ನಮೂದಿಸಿದ್ದು, ಅವರ ದಾಖಲೆ, ಬ್ಯಾಂಕ್ ಪಾಸ್ ಬುಕ್ ಗಳಲ್ಲಿ ಶೆನೋನ್ ಫರ್ನಾಂಡಿಸ್ ಮತ್ತು ನಮಿತಾ ನಜೇರತ್ ಎಂಬ ಹೆಸರಿತ್ತು. ಹೀಗಾಗಿ ಪರಿಹಾರದ ಹಣ ಪಡೆಯಲು ತೊಡಕಾಗಿತ್ತು. ಜೊತೆಗೆ ಚೆಕ್ ಮೂಲಕ ನೀಡಿರುವ ಪರಿಹಾರ ಮೊತ್ತವನ್ನು ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ಪಡೆಯಲು ಅವರಿಗೆ ಯಾವುದೇ ಅರ್ಹತೆಯಿಲ್ಲ. ಅವರಿಗೆ ಚೆಕ್ ನೀಡುವಂತಿಲ್ಲ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ವಿರೋಧ ವ್ಯಕ್ತಪಡಿಸಿದ್ದರು.
ತಲಕಾವೇರಿ ಭೂಕುಸಿತ ಪ್ರಕರಣ; ಪರಿಹಾರ ಪಡೆಯಲು ಮತಾಂತರ ಅಡ್ಡಿ
ಇಂದಿಗೂ ಹಣ ದೊರೆತಿಲ್ಲ
ಮತಾಂತರದಿಂದ ಹೆಸರು ಬದಲಾವಣೆ ಮಾಡಿಕೊಂಡಿದ್ದು, ಈ ಹೆಸರಿಗೆ ಚೆಕ್ ನೀಡುವಂತೆ ಕೋರಿದ್ದರು. ಆದರೆ ಇಂದಿಗೂ ಅವರು ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ತಹಶೀಲ್ದಾರ್ ಅವರನ್ನು ಕೇಳಿದರೆ, ಅವರು ಇಂದಿಗೂ ಸರಿಯಾದ ದಾಖಲೆಗಳನ್ನು ನೀಡಿಲ್ಲ. ಪಾಸ್ ಪೋರ್ಟ್ ನಲ್ಲೂ ಬೇರೆ ಹೆಸರಿದ್ದು, ಮೂಲ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದೇವೆ. ದಾಖಲೆಗಳನ್ನು ನೀಡಿದರೆ, ತಕ್ಷಣದಲ್ಲೇ ಪರಿಹಾರದ ಚೆಕ್ ನೀಡಲಾಗುತ್ತದೆ ಎಂದಿದ್ದಾರೆ.
Recommended Video
ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಈ ಕುರಿತು ಉಸ್ತುವಾರಿ ಸಚಿವ ವಿ ಸೋಮಣ್ಣ ಅವರನ್ನು ಭೇಟಿಯಾದ ನಮಿತಾ ಆಚಾರ್ ಮತ್ತು ಶಾರದಾ ಆಚಾರ್ ಪರಿಹಾರದ ಹಣವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಸಚಿವರು, ಜಿಲ್ಲಾಧಿಕಾರಿಗೆ ಈ ವಿಷಯ ತಿಳಿಸಿದ್ದೇನೆ ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು" ಎಂದಿದ್ದಾರೆ.