ಕೋವಿಡ್ ಕರಿನೆರಳು ಸರಳವಾಗಿ ನಡೆಯಲಿದೆ ಮಡಿಕೇರಿ ದಸರಾ
ಮಡಿಕೇರಿ, ಸೆಪ್ಟೆಂಬರ್ 22 ; ಮಡಿಕೇರಿ ದಸರಾ 2021ರ ಅಂಗವಾಗಿ ಶಕ್ತಿ ದೇವತೆಗಳ ಕರಗ ಉತ್ಸವವು ಅಕ್ಟೋಬರ್ 7ರಂದು ಪಂಪಿನಕೆರೆಯಿಂದ ಆರಂಭಗೊಳ್ಳಲಿದೆ. ಪೂಜಾ ವಿಧಿವಿಧಾನಗಳು ಎಂದಿನಂತೆ ನಡೆಯಲಿವೆ.
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆ ಸಂಬಂಧ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ದಸರಾ ಆಚರಣೆ ಕುರಿತು ಮಾಹಿತಿ ಪಡೆದಿದ್ದಾರೆ.
ಮಡಿಕೇರಿ ವಿಶೇಷ; ಕೊಡವರ ಹೊಸ ವರ್ಷ ಎಡಮ್ಯಾರ್
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, "ಕೋವಿಡ್ ಪ್ರಕರಣಗಳು ಹೆಚ್ಚಿರುವುದರಿಂದ ಕಳೆದ ಬಾರಿಯಂತೆ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಣೆಗೆ ಜಿಲ್ಲಾಡಳಿತ ಜೊತೆ ಎಲ್ಲರೂ ಸಹಕರಿಸಬೇಕು" ಎಂದು ಮನವಿ ಮಾಡಿದರು.
ಅಕ್ಟೋಬರ್ 9 ರಿಂದ 11ರ ತನಕ ಶ್ರೀರಂಗಪಟ್ಟಣ ದಸರಾ
ಕೋವಿಡ್ ಹಿನ್ನೆಲೆ ಸರ್ಕಾರದ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕಳೆದ ಬಾರಿ ಯಾವ ರೀತಿ ದಸರಾ ಆರಚಣೆಗೆ ಕ್ರಮ ವಹಿಸಲಾಗಿತ್ತು ಅದನ್ನು ಮುಂದುವರಿಸಬೇಕು. ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ!
ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, "ಕೋವಿಡ್ ಪರಿಸ್ಥಿತಿಗೂ ಮೊದಲು ಮಡಿಕೇರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು" ಎಂದು ಸಭೆಯಲ್ಲಿ ಹೇಳಿದರು.
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧ ಮತ್ತೊಂದು ಬಾರಿ ಸಭೆ ಸೇರಿ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕೋವಿಡ್ ಪರಿಸ್ಥಿತಿಯ ಕಾರಣ ಎಲ್ಲರೂ ಸಹಕಾರ ನೀಡಬೇಕು ಎಂದರು.
"ಶಕ್ತಿ ದೇವತೆಗಳ ಕರಗ ಉತ್ಸವವು ಅಕ್ಟೋಬರ್ 7ರಂದು ಪಂಪಿನಕೆರೆಯಿಂದ ಆರಂಭಗೊಳ್ಳಲಿದೆ. ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲಾಗುವುದು" ಎಂದು ರಾಬಿನ್ ದೇವಯ್ಯ ಹೇಳಿದರು.
ದಶಮಂಟಪ ಸಮಿತಿ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ ಮಾತನಾಡಿ, "ಕಳೆದ ಬಾರಿ ಕರಗ ಉತ್ಸವ ಚಾಲನಾ ಸಂದರ್ಭದಲ್ಲಿ 100 ಜನ ಭಾಗವಹಿಸಿದ್ದರು. ಸರಳವಾಗಿ ದಸರಾ ಆಚರಿಸಲಾಯಿತು. ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವಲ್ಲಿ ಈ ಬಾರಿ ಅಗತ್ಯ ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.
ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಕೆ. ಜಗದೀಶ್ ಸಭೆಯಲ್ಲಿ ಮಾತನಾಡಿ, "ಕಳೆದ ವರ್ಷದಂತೆ ಈ ಬಾರಿ ದಸರಾ ಆಚರಿಸಿದರೆ ಆಕರ್ಷಣೀಯವಾಗಿರುವುದಿಲ್ಲ. ಆದ್ದರಿಂದ ಮಡಿಕೇರಿ ನಗರದಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಅಲಂಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕು" ಎಂದು ಅಭಿಪ್ರಾಯಪಟ್ಟರು.
ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಜಪ್ಪು ಸುಬ್ಬಯ್ಯ ಮಾತನಾಡಿ, "ಗೋಣಿಕೊಪ್ಪದಲ್ಲಿ 10 ದಿನಗಳ ಕಾಲ ಚಾಮುಂಡೇಶ್ವರಿ ಪೂಜೆ ಮಾಡಿ ದಸರಾ ಆಚರಿಸಲಾಗುತ್ತದೆ. ಸರ್ಕಾರದ ನಿಯಮದಂತೆ ಕಾರ್ಯಕ್ರಮ ಆಯೋಜಿಸಲಾಗುವುದು" ಎಂದರು.
ಮಂಗಳವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕೊಡಗು ಜಿಲ್ಲೆಯಲ್ಲಿ 25 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 36,335. ಜಿಲ್ಲೆಯ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 366 ಆಗಿದೆ.
ಮೈಸೂರಿನ ದಸರಾದಂತೆ ಮಡಿಕೇರಿ ದಸರಾ ಸಹ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಮಧ್ಯಾಹ್ನದ ಹೊತ್ತಿಗೆ ಆರಂಭವಾಗಿ ಸಂಜೆಯ ವೇಳೆಗೆ ಪೂರ್ಣಗೊಳ್ಳುತ್ತದೆ. ಆದರೆ ಮಡಿಕೇರಿ ದಸರಾವನ್ನು ರಾತ್ರಿಯೇ ಕಣ್ತುಂಬಿಕೊಳ್ಳಬೇಕು.
ಕರಗ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ ಸಿಗುತ್ತದೆ. ಮಡಿಕೇರಿಯ ಕಂಚಿ ಕಾಮಾಕ್ಷಿ, ಕೋಟೆ ಗಣಪತಿ, ದಂಡಿನ ಮಾರಿಯಮ್ಮ, ಚೌಟಿ ಮಾರಿಯಮ್ಮ ಸೇರಿದಂತೆ 10 ಶಕ್ತಿ ದೇವತೆಗಳ ಕರಗ ಉತ್ಸವ 9 ದಿನ ನಗರದ ಬೀದಿಗಳಲ್ಲಿ ನಡೆಯುತ್ತದೆ.
Recommended Video
ಮಡಿಕೇರಿ ದಸರಾಕ್ಕೆ ಪುರಾತನ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾವೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು ಎನ್ನುತ್ತದೆ ಇತಿಹಾಸ. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬ ಉಲ್ಲೇಖಗಳಿವೆ.