ಕೊಡಗಿನಲ್ಲಿ ಕೋವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ, ನಿಯಂತ್ರಣ ಅಗತ್ಯ: ಸಚಿವ ಸುಧಾಕರ್
ಮಡಿಕೇರಿ, ಅಕ್ಟೋಬರ್ 6: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೋವಿಡ್-19 ನಿಯಂತ್ರಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಡಿಕೇರಿಯಲ್ಲಿ ಇಂದು ಹೇಳಿದರು.
ಲಾಕ್ ಡೌನ್ ಸಂದರ್ಭದಲ್ಲಿ ಕೊಡಗು ಹಸಿರು ವಲಯದಲ್ಲಿತ್ತು, ಅನ್ ಲಾಕ್ ನಂತರ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಕೋವಿಡ್-19 ಸಾವಿನ ಪ್ರಕರಣಗಳು ಸಹ ಹೆಚ್ಚಾಗಿದೆ. ಕಳೆದ 5 ದಿನಗಳಲ್ಲಿ ಸಾವಿನ ಪ್ರಮಾಣ ಶೇ.2.2 ಆಗಿದೆ. 15 ದಿನಗಳಲ್ಲಿ 1.7 ಸಾವಿನ ಪ್ರಮಾಣ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು. ಮೆಡಿಕಲ್ ಕಾಲೇಜಿನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ಸದ್ಯದಲ್ಲೇ ನಡೆಯಲಿದ್ದು, ಸಾಹಸ, ಪ್ರವಾಸೋದ್ಯಮಕ್ಕೆ ಕೊಡಗು ಹೆಸರುವಾಸಿಯಾಗಿದೆ ಎಂದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ನಂದಾ ಕಾರ್ಯಪ್ಪ ಅವರಂತಹ ಯೋಧರ ನಾಡು ಇದಾಗಿದೆ ಎಂದರು.
ಕೊಡಗು ಜಿಲ್ಲೆಗೆ ಸಚಿವ ಕೆ.ಸುಧಾಕರ್ ಭೇಟಿ: ಕೋವಿಡ್ ನಿಯಂತ್ರಣ ಕ್ರಮಗಳ ಚರ್ಚೆ
ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ
ಈ ಬಾರಿ ಪ್ರಾಕೃತಿಕ ವಿಕೋಪವನ್ನು ನಿರ್ವಹಣೆಯಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಇತರೆ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸರ್ಕಾರದಿಂದ ನೀಡಲ್ಪಟ್ಟ ಗುರಿಯ ಪೈಕಿ 3766 ಜನರನ್ನು ಪರೀಕ್ಷಿಸಿದ್ದು, 67% ಗುರಿ ಮುಟ್ಟಲಾಗಿದೆ. ಇಡೀ ರಾಜ್ಯದಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದ್ದು, ನಿಯಂತ್ರಣ ಮಾಡಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು.
ಒಬ್ಬ ಸೋಂಕಿತರಿಂದ 45 ರಿಂದ 46 ಸಂಪರ್ಕಿತರನ್ನು ಪತ್ತೆ
ಕೊರೊನಾ ಸೋಂಕಿತ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವಾಗಬೇಕು. ಲಾಕ್ ಡೌನ್ ವೇಳೆಯಲ್ಲಿ ಒಬ್ಬ ಸೋಂಕಿತರಿಂದ 45 ರಿಂದ 46 ಸಂಪರ್ಕಿತರನ್ನು ಪತ್ತೆಹಚ್ಚುತ್ತಿದ್ದೆವು. ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷಿಸುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ ಎಂದು ಸಚಿವರು ಹೇಳಿದರು.
ಮಾಸ್ಕ್ ಸರಿಯಾಗಿ ಹಾಕದಿರುವವರಿಗೆ 500 ರೂ. ದಂಡ
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮತ್ತಷ್ಟು ಜಾಗೃತರಾಗಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಸರಿಯಾಗಿ ಹಾಕದಿರುವವರಿಗೆ 500 ರೂ. ದಂಡ ವಿಧಿಸಿ ಮಾಸ್ಕ್ ನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸುವ ಕಾರ್ಯವಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ತಿಳಿಸಿದರು. ಮಾಸ್ಕ್ ಧರಿಸದಿರುವ ಸಂಬಂಧ ಕಳೆದ 7 ದಿನಗಳಲ್ಲಿ 1753 ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯಲ್ಲಿ ಮಾಸ್ಕ್ ಮಹತ್ವವನ್ನು ತಿಳಿಸಬೇಕು. ಕೋವಿಡ್-19ಗೆ ಲಸಿಕೆ ಕಂಡುಹಿಡಿಯುವವರೆಗೂ ಮಾಸ್ಕ್ ಲಸಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಅಭಿಪ್ರಾಯಪಟ್ಟರು.
ಪ್ರತಿ ದಿನ 500-600 ಕೋವಿಡ್ ಪರೀಕ್ಷೆ ನಡೆಯಬೇಕು
ಆರ್.ಟಿ.ಪಿ.ಸಿ.ಆರ್ ಮೂಲಕ ಹೆಚ್ಚು ಪ್ರಕರಣ ಪತ್ತೆ ಹಚ್ಚುವ ಕಾರ್ಯವಾಗಬೇಕು. Rapid ಆ್ಯಂಟಿಜನ್ ಪರೀಕ್ಷೆಯನ್ನು ತುರ್ತು ಸಂದರ್ಭದಲ್ಲಿ ಬಳಸಿ. Rapid ಆ್ಯಂಟಿಜನ್ ಪರೀಕ್ಷೆಗಿಂತ ಆರ್.ಟಿ.ಪಿ.ಸಿ.ಆರ್ ಮುಖಾತಂರ ಪಾಸಿಟಿವ್ ಅಥವಾ ನೆಗೆಟಿವ್ ಬಗ್ಗೆ ಸೂಕ್ತ ಮಾಹಿತಿ ದೊರೆಯಲಿದೆ. ಪ್ರಧಾನಮಂತ್ರಿಗಳೂ ಸಹ ವಿಡಿಯೊ ಕಾನ್ಫರೆನ್ಸ್ ನಲ್ಲಿ ಈ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರತಿ ದಿನ 500-600 ಕೋವಿಡ್ ಪರೀಕ್ಷೆ ನಡೆಯಬೇಕು. ದಿನದ 24 ಗಂಟೆಯೂ 3 ಕೋವಿಡ್-19 ಪರೀಕ್ಷೆ ಕಾರ್ಯ ಪ್ರಯೋಗಾಲಯದಲ್ಲಿ ನಡೆಯಬೇಕಿದ್ದು, ಜೊತೆಗೆ ಪ್ರತಿ 8 ಗಂಟೆಗೆ 1 ಶಿಫ್ಟ್ ಬದಲಾಗಬೇಕು ಎಂದು ಸೂಚಿಸಿದರು.
Recommended Video