ಕೊರೊನಾ ಭೀತಿ: ಕೊಡಗಿನಲ್ಲಿ ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ ಬಂದ್
ಮಡಿಕೇರಿ, ಜುಲೈ 7: ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಹೊರಗಿನವರ ಪ್ರವೇಶವೂ ಕಾರಣವಾಗಿದೆ. ಲಾಕ್ ಡೌನ್ ಸಡಿಲಗೊಂಡ ಬಳಿಕ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಮತ್ತಿತರ ವಸತಿ ಸೌಕರ್ಯಗಳು ತೆರೆದುಕೊಂಡಿದ್ದವು. ಪರಿಣಾಮ ಹೊರಗಿನಿಂದ ಪ್ರವಾಸಿಗರು ಬಂದು ಹೋಗಿದ್ದರು. ಇದರಿಂದ ಕೊರೊನಾ ವೈರಸ್ ಸೋಂಕು ಹರಡುವಂತಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಸೋಂಕಿನ ತೀವ್ರತೆ ನೋಡಿದ ಕೆಲವು ಹೋಂ ಸ್ಟೇ, ರೆಸಾರ್ಟ್ ಮಾಲೀಕರು ಸ್ವಯಂ ನಿರ್ಧಾರ ಕೈಗೊಂಡು ಬಂದ್ ಮಾಡಿದ್ದರಾದರೂ ಅಲ್ಲಲ್ಲಿ ರೆಸಾರ್ಟ್ಗಳು ತೆರೆದಿದ್ದವು. ಈ ಬಗ್ಗೆ ಜಿಲ್ಲೆಯ ಕೆಲವು ಕಡೆ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದೀಗ ಕೊರೊನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿರುವುದರಿಂದ ಹೊರ ರಾಜ್ಯ ಮತ್ತು ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಮತ್ತಿತರ ವಸತಿ ಸೌಕರ್ಯ ಒದಗಿಸದಂತೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಕೊಡಗಿನಲ್ಲಿ ಮುಂದುವರೆದ ಮಳೆ... ಹಾರಂಗಿ ಜಲಾಶಯದಲ್ಲಿ ಹೆಚ್ಚಿದ ನೀರಿನ ಪ್ರಮಾಣ
ಬುಕ್ಕಿಂಗ್ ಸ್ವೀಕರಿಸದಂತೆ ಸೂಚನೆ
ಈ ಆದೇಶವು ಜು.7 ರಿಂದ ಮುಂದಿನ ಆದೇಶದ ವರೆಗೆ ಜಾರಿಯಲ್ಲಿರಲಿದ್ದು, ಕೊಡಗು ಜಿಲ್ಲೆಗೆ ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಹೋಟೆಲ್, ಹೋಂಸ್ಟೇ, ರೆಸಾರ್ಟ್, ಲಾಡ್ಜ್, ವಸತಿ ಗೃಹ ಮತ್ತಿತರ ವಸತಿ ಸೌಕರ್ಯ ನೀಡಬಾರದು. ಹಾಗೆಯೇ ಇನ್ನು ಮುಂದೆ ಜಿಲ್ಲೆಯ ಹೊರ ಭಾಗದ ಪ್ರವಾಸಿಗರ ಆನ್ಲೈನ್, ಆಫ್ಲೈನ್ ಮತ್ತಿತರ ಯಾವುದೇ ರೂಪದ ಬುಕ್ಕಿಂಗ್ ಸ್ವೀಕರಿಸಬಾರದೆಂದು ಸೂಚಿಸಲಾಗಿದೆ.
ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಪಡಿಸಬೇಕು
ಒಂದು ವೇಳೆ ಈಗಾಗಲೇ ಆಗಮಿಸಿ ವಸತಿ ಸೌಕರ್ಯ ಹೊಂದಿರುವ ಪ್ರವಾಸಿಗರನ್ನು ಬಲವಂತವಾಗಿ ಕಳುಹಿಸದೆ, ಅವರು ವಾಸ್ತವ್ಯಕ್ಕೆ ಕಾಯ್ದಿರಿಸಿದ ಅವಧಿ ಪೂರ್ಣಗೊಳ್ಳುವವರೆಗೆ ಕಾಯಬೇಕು, ಆದರೆ ಅವಧಿಯನ್ನು ವಿಸ್ತರಿಸದಂತೆ ಸೂಚಿಸಲಾಗಿದೆ. ಒಂದು ವೇಳೆ ಪ್ರವಾಸಿ ಉದ್ದೇಶಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿ, ಆಗಮಿಸದಿದ್ದಲ್ಲಿ ಅವರು ಆಗಮಿಸುವ ಮುಂಚಿತವಾಗಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಪಡಿಸಬೇಕು. ಆದರೆ ತುರ್ತು, ವೈದ್ಯಕೀಯ, ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಆಗಮಿಸುವವರಿಗೆ ನಿರ್ಬಂಧವಿರುವುದಿಲ್ಲ ಎಂದು ತಿಳಿಸಲಾಗಿದೆ.
ಆದೇಶ ಉಲ್ಲಂಘನೆ ಮಾಡಿದರೆ ದಂಡ
ಆದರೆ ಈ ರೀತಿ ಆಗಮಿಸಿದ್ದಲ್ಲಿ ಅವರು ಆಗಮಿಸಿದ ಕಾರಣದ ಪೂರ್ಣ ವಿವರವನ್ನು ಪಡೆದು ವಸತಿ ಸೌಕರ್ಯ ನೀಡುವುದು ಮತ್ತು ಈ ಬಗ್ಗೆ ಸ್ಥಳೀಯ ಕಾರ್ಯವ್ಯಾಪ್ತಿಯ ಆರಕ್ಷಕ ಠಾಣೆ, ನಗರ ಸ್ಥಳೀಯ ಸಂಸ್ಥೆ, ಗ್ರಾ.ಪಂ ಗಳಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಒಂದು ವೇಳೆ ಆದೇಶ ಉಲ್ಲಂಘನೆ ಮಾಡಿದಲ್ಲಿ ಭಾರತೀಯ ದಂಡ ಸಂಹಿತೆ 1860 ರ ಕಲಂ 188 ರ ಪ್ರಕಾರ ದಂಡನೀಯವಾಗಿದ್ದು, ಕಡ್ಡಾಯವಾಗಿ ಈ ಆದೇಶಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಹೇಳಿದ್ದಾರೆ.
ಅಶ್ವಿನಿ ಆಸ್ಪತ್ರೆಗೆ ಎರಡು ದಿನ ಸ್ಯಾನಿಟೈಸ್
ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಿರಿಯಾಪಟ್ಟಣದ 17 ವರ್ಷದ ಹುಡುಗನಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಸೋಮವಾರ ರಾತ್ರಿ ವರದಿಯಾಗಿದೆ. ಹೀಗಾಗಿ ಆಸ್ಪತ್ರೆಯನ್ನು ಮತ್ತೆ ಸೋಂಕು ನಿವಾರಕಗೊಳಿಸುವುದು ಅಗತ್ಯವಾಗಿರುವುದರಿಂದ ಜುಲೈ 7 ಮತ್ತು 8 ರಂದು ಈ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಸೇವೆಗಳನ್ನು ಹೊರತುಪಡಿಸಿ ಬೇರಾವುದೇ ಕೋವಿಡ್ ಯೇತರ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.