ಕೊಡಗಿನಲ್ಲಿ ಸದ್ಯ ಕೊರೊನಾ ಪ್ರಕರಣಗಳು ಎಷ್ಟಿವೆ? ಕಂಟೈನ್ಮೆಂಟ್ ವಲಯಗಳೆಷ್ಟು?
ಮಡಿಕೇರಿ, ಜುಲೈ 16: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸದ್ಯ ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆಯಾಗಿದೆ. ಬುಧವಾರ ಮತ್ತೆ ಆರು ಪ್ರಕರಣಗಳು ದಾಖಲಾಗಿವೆ. ಹೀಗೆ ಸದ್ದಿಲ್ಲದೇ ಸೋಂಕು ಹೆಚ್ಚುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.
Recommended Video
ಒಂದೆಡೆ ಸೋಂಕು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 100ಕ್ಕೆ ಏರಿದೆ. ಸೋಮವಾರಪೇಟೆ ತಾಲೂಕು ನೆಲ್ಯಹುದಿಕೇರಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 7 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಅಂತರ್ ಜಿಲ್ಲಾ ಪ್ರಯಾಣದ ಹಿನ್ನೆಲೆ ಇರುವ ವಿರಾಜಪೇಟೆ ತಾಲ್ಲೂಕಿನ ನಿರ್ಮಲಗಿರಿ, ಹೆಗ್ಗಳ ಗ್ರಾಮದ ನಿವಾಸಿಯಾದ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯಲ್ಲಿ ನಿನ್ನೆ ಆರು ಪ್ರಕರಣ
ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಪೆರುಂಬಾಡಿಯ ನಿವಾಸಿಯಾದ 43 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಬೆಂಗಳೂರು ಪ್ರಯಾಣ ಮಾಡಿರುವ ಹಿನ್ನೆಲೆ ಇದೆ. ಪ್ರಸ್ತುತ ಮಡಿಕೇರಿ ನಗರದ ಕಾನ್ವೆಂಟ್ ರಸ್ತೆಯಲ್ಲಿ ವಾಸವಿರುವ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 45 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿ ನಗರದ ಮುನೀಶ್ವರ ದೇವಸ್ಥಾನದ ಹಿಂಭಾಗದ ಸಿಬ್ಬಂದಿ ವಸತಿ ಗೃಹದಲ್ಲಿ ನಿವಾಸಿಯಾದ ಆರೋಗ್ಯ ಕಾರ್ಯಕರ್ತರಾಗಿರುವ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಬಲಮುರಿ ದೇವಸ್ಥಾನದ ಬಳಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 37 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳ; ಸೂಚನೆಗಳು
ಜಿಲ್ಲೆಯಲ್ಲಿ 225ಕ್ಕೇರಿದ ಸೋಂಕಿತರ ಸಂಖ್ಯೆ
ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 225ಕ್ಕೇರಿದ್ದು, ಈ ಪೈಕಿ 87 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂರು ಮಂದಿ ಸಾವಿಗೀಡಾಗಿದ್ದಾರೆ. 135 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 4 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 100ಕ್ಕೆ ಏರಿಕೆಯಾಗಿದೆ.
ಸೀಲ್ ಡೌನ್ ಉಲ್ಲಂಘನೆಗೆ ಕ್ರಮ
ಇನ್ನೊಂದೆಡೆ ಮಡಿಕೇರಿ ತಾಲೂಕಿನ ಬೇಂಗೂರು ಪಂಚಾಯಿತಿ ವ್ಯಾಪ್ತಿಯ ಚೇರಂಬಾಣೆ ಗ್ರಾಮದಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಸೀಲ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಅಂಗಡಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿರುವ ಘಟನೆ ನಡೆದಿದೆ. ನಿಯಮ ಬಾಹಿರವಾಗಿ ವ್ಯಾಪಾರ ನಡೆಸಿ ಪದಾರ್ಥಗಳನ್ನು ಪೂರೈಸಿರುವ ಬಗ್ಗೆ ಬಂದ ಸಾರ್ವಜನಿಕ ದೂರಿನ ಆಧಾರದ ಮೇಲೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅವರು ಸ್ಥಳ ಪರಿವೀಕ್ಷಣೆ ನಡೆಸಿ ಪರಿಶೀಲಿಸಿ ವರದಿ ನೀಡಿದ್ದರು. ಅದರಂತೆ ತಾ.ಪಂ.ಇಒ ಪಿ.ಲಕ್ಷ್ಮಿ ಕ್ರಮ ಕೈಗೊಂಡಿದ್ದಾರೆ.
ಕೊರೊನಾ ಭೀತಿ: ಕೊಡಗಿನಲ್ಲಿ ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ ಬಂದ್
ಸಾಂಕ್ರಾಮಿಕವಾಗಿ ಸೋಂಕು ಹರಡುವ ಸಾಧ್ಯತೆ
ಇದಲ್ಲದೆ ಅಂಗಡಿಯ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಈ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ ಕೆಲವರಿಗೆ ನಿಯಂತ್ರಿತ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದಕ್ಕಾಗಿ ನಿಯಾಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದು, ಇವರು ಕೂಡ ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ಸಂಪರ್ಕ ತಡೆಯಲ್ಲಿರುವಂತೆ ಕೈಗೆ ಸೀಲ್ ಹಾಕಲಾಗಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಈಗಾಗಲೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವುದರಿಂದ ಈ ರೀತಿ ಚಟುವಟಿಕೆಗಳಿಂದ ಸೋಂಕು ಸಾಂಕ್ರಾಮಿಕವಾಗಿ ಹಬ್ಬುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಸೂಚನೆ ನೀಡಿದ್ದಾರೆ.