ಕೊರೊನಾ ಎಫೆಕ್ಟ್: ಸರ್ಕಾರಿ ಸಾರಿಗೆಗೆ ಉತ್ತಮ ಸ್ಪಂದನೆ ಇಲ್ಲ
ಕೊಡಗು, ಮೇ 6: ಸುಮಾರು ಒಂದೂವರೆ ತಿಂಗಳ ನಂತರ ಹಸಿರು ವಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಲಾಕ್ಡೌನ್ ಅನ್ನು ಸಡಿಲಗೊಳಿಸಿದ ಬಳಿಕ ಜಿಲ್ಲೆಯಲ್ಲಿ ಇಂದಿನಿಂದ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಬಸ್ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಆದರೆ ಹಸಿರು ವಲಯದಲ್ಲಿ ಸರ್ಕಾರಿ ಸಾರಿಗೆಗೆ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಜನರು ಸಮೂಹ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಕೊರೊನಾ ವೈರಸ್ ಭೀತಿ ಎಂದೇ ಹೇಳಬಹುದು.
ಅದೇ ರೀತಿ ಹಸಿರು ವಲಯದಲ್ಲಿರುವ ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲದೆ ಬಣಗುಡುತ್ತಿದೆ. ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಬಸ್ಗಳಲ್ಲಿ ತಾಲ್ಲೂಕು ಕೇಂದ್ರಗಳಿಗೆ ಪ್ರಯಾಣಿಸುತ್ತಿದ್ದಾರೆ.
ಜಿಲ್ಲಾಡಳಿತದ ನಿರ್ದೇಶನದಂತೆ ತಾಲ್ಲೂಕು ಕೇಂದ್ರಗಳಾದ ಸೋಮವಾರಪೇಟೆ, ವಿರಾಜಪೇಟೆ, ಭಾಗಮಂಡಲ ಮತ್ತು ಕುಶಾಲನಗರಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ.
ರಾಜ್ಯ ಸಾರಿಗೆ ಸಂಸ್ಥೆಯ ಮೇಲಾಧಿಕಾರಿಗಳ ನಿರ್ದೇಶನದಂತೆ ಬಸ್ಗಳನ್ನು ಬಿಟ್ಟಿದ್ದರೂ, ಜಿಲ್ಲೆಯ ಜನತೆ ಸಮೂಹ ಸಾರಿಗೆಗೆ ಅಷ್ಟೊಂದು ಒಲವನ್ನು ವ್ಯಕ್ತಪಡಿಸುತ್ತಿಲ್ಲ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿವೆ.