ಕೊಡಗಿನಲ್ಲಿ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆ 'ಕೂರ್ಗ್ ವಿಲೇಜ್'
ಮಡಿಕೇರಿ, ಡಿಸೆಂಬರ್ 25: ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಮತ್ತೊಂದು ತಾಣ ನಿರ್ಮಾಣವಾಗುತ್ತಿದೆ. ಸ್ವಚ್ಛಂಧ ವಾತಾವರಣದ ನಡುವೆ, ತಂಪಾದ ಗಾಳಿ ಪ್ರವಾಸಿಗರಿಗೆ ಮುದ ನೀಡಿದರೆ, ಕೊಡಗಿನ ಕೃಷಿ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುವ ವ್ಯವಸ್ಥೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಜನರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್. ಇಲ್ಲಿಗೆ ಸಮೀಪದ ಕುಂದುರುಮೊಟ್ಟೆ ದೇವಾಲಯದ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಪ್ರದೇಶದಲ್ಲಿ 'ಕೂರ್ಗ್ ವಿಲೇಜ್' ಎಂಬ ಪ್ರವಾಸಿ ತಾಣ ಶೀಘ್ರವೇ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಭೂ ಕುಸಿತವಾಗಿದ್ದ ನಾರಾಯಣಾಚಾರ್ ಮನೆ ಬಳಿ ಈಗ ನಿಧಿಗಾಗಿ ಹುಡುಕಾಟ?
ತೋಟಗಾರಿಕೆ ಇಲಾಖೆಯ ನರ್ಸರಿ ಇದ್ದ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯು ಯೋಜನೆ ರೂಪಿಸಿ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಪೂರ್ಣಗೊಳಿಸಿದೆ. ಒಟ್ಟು 98 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಪ್ರವಾಸಿ ತಾಣವನ್ನು ರೂಪಿಸಲಾಗಿದೆ.
ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ
'ಕೂರ್ಗ್ ವಿಲೇಜ್' ಸುಂದರ ವಾತಾವರಣದ ಜೊತೆಗೆ ಮೂರು ಕಡೆಗಳಲ್ಲಿ ವಿವಿಧ ಇಲಾಖೆಗಳ 15 ಶಾಪಿಂಗ್ ಸ್ಟಾಲ್ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮೂರು ಪ್ರತ್ಯೇಕ ಕಟ್ಟಡದಲ್ಲಿ ಮಳಿಗೆಗಳು ಸಿದ್ಧಗೊಂಡಿದೆ. ಒಂದೇ ಸೂರಿನಲ್ಲಿ ವಿವಿಧ ಉತ್ಪನ್ನಗಳು ಸಿಗಲಿವೆ.
ವರ್ಷದ ವಿಶೇಷ; ಕೋವಿಡ್, ಮಹಾಮಳೆಯಲ್ಲಿ ಕೊಚ್ಚಿ ಹೋದ ಕೊಡಗಿನ ನೆಮ್ಮದಿ
ಕೂರ್ಗ್ ವಿಲೇಜ್ ಪರಿಕಲ್ಪನೆ
ಹಾಪ್ ಕಾಮ್ಸ್, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ನೆರೆಸಂತ್ರಸ್ತರು ತಯಾರಿಸಿದ ಮಸಾಲ ಪದಾರ್ಥ ಹಾಗೂ ಕೊಡಗಿನ ಜೇನು, ವೈನ್, ಕರಿಮೆಣಸು, ಏಲಕ್ಕಿ, ಕಾಫಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ರಾಜಾಸೀಟ್ನಲ್ಲಿರುವ ಗಿಡಗಳಿಗೆ ಹಾಗೂ ಅಲ್ಲಿನ ಬಳಕೆಗೆ ನೀರು ಪೂರೈಸುವ ಕೆರೆ ಕೂರ್ಗ್ ವಿಲೇಜ್ನಲ್ಲಿದೆ. ಇದನ್ನು ಕೂಡ ಅಭಿವೃದ್ಧಿಗೊಳಿಸಿದ್ದು, ಕೆರೆ ಶುಚಿಗೊಳಿಸಿ ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ.
ಪ್ರವಾಸಿಗರಿಗೆ ಆಸನ ವ್ಯವಸ್ಥೆ
ಇಲ್ಲಿ ಪ್ರವಾಸಿಗರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಆಕರ್ಷಕ ದೀಪದ ವ್ಯವಸ್ಥೆ ಮಾಡಿದ್ದು, ಸಂಜೆ ವೇಳೆಯಲ್ಲಿ ವಾಯುವಿಹಾರ ಮಾಡಲು ಸೂಕ್ತ ಜಾಗವಾಗಿದೆ. ಅದಲ್ಲದೆ, ಪಾಳು ಬಿದ್ದ ಜಾಗವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಬೃಹತ್ ಮರಗಳಿದ್ದು ತಂಪಾದ ಗಾಳಿ ಬೀಸುತ್ತದೆ. ಜೊತೆಗೆ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ‘ಕೂರ್ಗ್ ವಿಲೇಜ್' ಯೋಜನೆಗೆ ಆರಂಭದಲ್ಲಿ ವಿಘ್ನ ಎದುರಾಗಿತ್ತು.
ಕಾನೂನು ಹೋರಾಟ ಮಾಡಲಾಗಿತ್ತು
ಸಾಮಾಜಿಕ ಕಾರ್ಯಕರ್ತ ಜಿ. ಟಿ. ಹರೀಶ್ ಈ ಯೋಜನೆ ಪರಿಸರ ನಾಶ ಮಾಡುತ್ತದೆ ಎಂದು ವಿರೋಧಿಸಿ ನ್ಯಾಯಾಂಗ ಹೋರಾಟ ಮಾಡಿದ್ದರು. ಮಾಜಿ ಸಚಿವ ಎಂ. ಸಿ. ನಾಣಯ್ಯ ಕೂಡ ಈ ಯೋಜನೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಯೋಜನೆಯು ಪರಿಸರಕ್ಕೆ ಮಾರಕವಾಗಿದ್ದು ಇದರಿಂದ ಜಲಮೂಲಕ್ಕೆ ಧಕ್ಕೆ ಉಂಟಾಗುತ್ತದೆ. ಟ್ರಾಫಿಕ್, ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಭಣವಾಗಿ ಸ್ಥಳೀಯರಿಗೆ ಕಿರಿಕಿರಿ ಸೃಷ್ಠಿಯಾಗುತ್ತದೆ. ಜಿಲ್ಲಾಡಳಿತ ಜನಾಭಿಪ್ರಾಯ ಸಂಗ್ರಹಿಸದೆ ಯೋಜನೆ ರೂಪಿಸಿದೆ ಎಂದು ಆರೋಪಿಸಲಾಗಿತ್ತು. ಆದರೆ, ನ್ಯಾಯಾಲಯವು ಯೋಜನೆಗೆ ಹಸಿರು ನಿಶಾನೆ ತೋರಿಸಿತ್ತು.
ಹೊಸ ವರ್ಷದಲ್ಲಿ ಮುಕ್ತ
"2021ನೇ ಜನವರಿ ಅಂತ್ಯದೊಳಗೆ ಕೂರ್ಗ್ ವಿಲೇಜ್ ಪ್ರವಾಸಿಗರಿಗೆ ಮುಕ್ತವಾಗಲಿದೆ. ಪ್ರವಾಸಿ ತಾಣವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ" ಎಂದು ಉಪವಿಭಾಗಾಧಿಕಾರಿ ಈಶ್ವರ್ ಖಂಡೂ ಹೇಳಿದ್ದಾರೆ.
ಕೋವಿಡ್ ಕಾರಣದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದ್ದು ಇದೀಗ ಚೇತರಿಕೆ ಕಾಣುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಉದ್ಯಮಿಗಳು ನಿರೀಕ್ಷಿಸಿದ್ದಾರೆ. ಆದರೆ, ಪ್ರವಾಸಿಗರು ಮಾಡುವ ಮಾಲಿನ್ಯ ತಡೆಗಟ್ಟುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಪ್ರವಾಸಿಗರು ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಿರುವುದನ್ನು ಸ್ಥಳೀಯರು ಪತ್ತೆ ಹಚ್ಚಿ ಅವರಿಂದಲೇ ವಾಪಾಸ್ ಹೆಕ್ಕಿಸುತ್ತಿದ್ದಾರೆ.
Recommended Video