ಹಿಮದ ಪರ್ವತವೇರಿದ ಕೊಡಗಿನ ಯುವತಿ ಭವಾನಿ
ಕೊಡಗು, ನವೆಂಬರ್ 27 : ಅದು ಜನವರಿ ತಿಂಗಳ ಚಳಿಗಾಲದ ಒಂದು ದಿನ. ಕಣ್ಣು ಹಾಯಿಸಿದೆಡೆಯೆಲ್ಲ ಬರೀ ಮಂಜುಗಡ್ಡೆಗಳು. ಮೈಕೊರೆಯುವ ಚಳಿ, ಉಸಿರಾಡಲು ಒದ್ದಾಡಬೇಕಾದ ವಿಷಮ ಸ್ಥಿತಿ.
ಹಿಮಾಚಲದ ಹೆವೆನ್ ಕುಲು ಮನಾಲಿ ಪ್ರವಾಸಕಥನ
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಉತ್ತರ ಭಾರತದ ಡಾರ್ಜಿಲಿಂಗ್ ನಲ್ಲಿ ಯಶಸ್ವಿಯಾಗಿ ಪರ್ವತಾರೋಹಣ ಮಾಡಿ ಬರುವ ಮೂಲಕ ಇದುವರೆಗೆ ಇಂತಹ ಪರ್ವತಾರೋಹಣ ಮಾಡಿದ ಯುವತಿ ಎಂಬ ಖ್ಯಾತಿಗೆ ಕೊಡಗಿನ ಯುವತಿ ಟಿ.ಎನ್. ಭವಾನಿ ಪಾತ್ರರಾಗಿದ್ದಾರೆ.
ಭವಾನಿ ಅವರ ಹುಟ್ಟು : ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಬೊಟ್ಟೊಳಂಡ ನಂಜುಂಡ(ಶಂಭು) ಮತ್ತು ಪಾರ್ವತಿ(ದಿವ್ಯ) ದಂಪತಿ ಪುತ್ರಿಯಾಗಿರುವ ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ ಮಂಗಳೂರಿನ ಸೇಂಟ್ ಆಗ್ಏಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಇದೀಗ ಡಾರ್ಜಿಲಿಂಗ್ ಹಿಮಾಲಯ ಮೌಂಟನೇರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಗೆ ನೋಡಿದರೆ ಭವಾನಿ ಪ್ರೌಢಶಾಲೆಯಿಂದಲೇ ಎನ್ ಸಿಸಿ ಸೇರಿ ಕಾಲೇಜಿನಲ್ಲೂ ಮುಂದುವರೆಸಿ ವಿವಿಧ ಕ್ಯಾಂಪ್ ಗಳಲ್ಲಿ ಭಾಗವಹಿಸಿ ತರಬೇತಿ ಪಡೆದು 2016 ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.
ಸಿದ್ದರಾಮಯ್ಯ ಅವರಿಂದ ಶ್ಲಾಘನೆ: ಇದಲ್ಲದೆ ಜೋದ್ ಪುರ್ ನಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ ಶಿಬಿರದಲ್ಲೂ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ ಸಿಸಿ ಡೈರೆಕ್ಟರ್ ಜನರಲ್ ಲೆ.ಜ. ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್ ಸಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ. ರಾಜೀವ್ ಅವರಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಭವಾನಿ ಅವರ ಶಿಕ್ಷಣ: ಪರ್ವತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ ಸ್ಟಿಟ್ಯೂಟ್ ಆಫ್ ಮೌಂಟನೇರಿಂಗ್ ಅಲೈಡ್ ಸ್ಪೋರ್ಟ್ಸ್ನಲ್ಲಿ ಪಡೆದಿದದ್ಆರೆ. ನಂತರ ಹೆಚ್ಚಿನ ತರಬೇತಿಯನ್ನು ಡಾರ್ಜಿಲಿಂಗ್ ನ ಹಿಮಾಲಯ ಮೌಂಟೆನೇರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಪಡೆದಿದ್ದಾರೆ.
ಹಿಮಾಲಯ ಮೌಂಟೇನಿಯರಿಂಗ್ ಇನ್ ಸ್ಟಿಟ್ಯೂಟ್ನಿಂದ ಹಿಮಾಲಯ ಪರ್ವತ ಸೇರಿದಂತೆ ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದು, ಈ ಪೈಕಿ ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ತರಬೇತಿಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಇಂತಹ ತರಬೇತಿಯನ್ನು ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿ ಪಡೆದಿದ್ದಾಳೆ.
ಈಗಾಗಲೇ ಉತ್ತರಾಖಂಡ ದಲ್ಲಿರುವ ರುಡುಗೈರ್, ಮನಾಲಿಯ ಫ್ರೆಂಡ್ ಶಿಪ್, ಸಿಕ್ಕಿಮ್ನ ರೆನಾಕ್, ಲೇಹ್ ನ ಸ್ಟಾಕ್ ಕಂಗ್ರಿಯಲ್ಲಿ ಮಂಜುಗಡ್ಡೆಯ ಪರ್ವತಗಳನ್ನೇರಿ ಯಶಸ್ಸು ಸಾಧಿಸಿರುವ ಇವರು ಭವಿಷ್ಯದಲ್ಲಿ ಗೌರಿಶಂಕರ ಶಿಖರವನ್ನೇರುವ ಕನಸು ಹೊಂದಿದ್ದಾರೆ.
ಪಡೆದ ವಿವಿಧ ತರಬೇತಿಗಳು: ಈಜು, ಕುದುರೆ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ತರಬೇತಿಗಳನ್ನು ಮುಗಿಸಿದ್ದು, ಸೈನ್ಯದಲ್ಲಿ ಕೆಲಸ ಮಾಡುವ ಬಯಕೆಯನ್ನು ಹೊಂದಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಹಲವು ಯುವತಿಯರು ರಕ್ಷಣಾ ಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ ದೇಶ ಸೇವೆಯಲ್ಲಿ ತೊಡಗಿರುವುದನ್ನು ಕಾಣಬಹುದು, ಹೀಗಿರುವಾಗ ತಾನು ಕೂಡ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆನ್ನುವ ಭವಾನಿ ಅವರ ಬಯಕೆ ಆದಷ್ಟು ಬೇಗ ಈಡೇರಲಿ ಎನ್ನುವುದೇ ನಮ್ಮ ಆಶಯ.